Advertisement

ಜಗಳಾಡುವ ದೇವರುಗಳು

08:53 PM Jun 22, 2018 | |

ದೇವಿ ಮಹಾತ್ಮೆ ಪ್ರಸಂಗದಲ್ಲಿ ಆಟ ಆರಂಭವಾಗುವಾಗ ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮ ಹುಟ್ಟಿನ ಗುಟ್ಟನ್ನರಿಯದೆ ಓಂಕಾರವನ್ನುಚ್ಚರಿಸಿದಾಗ ದೇವಿ ಪ್ರತ್ಯಕ್ಷಳಾಗಿ ಅವರಿಗೆ ಹೆಸರು, ಗುಣ, ಕರ್ತವ್ಯಾದಿಗಳನ್ನು ತಿಳಿಸಿ ಅಂತರ್ಧಾನಳಾಗುತ್ತಾಳೆ. ಅಲ್ಲಿ ತನಕ ಮುಗ್ಧರಾಗಿ, ದೇವಿಯ ಮಕ್ಕಳಾಗಿ ಭಕ್ತಿಭಾವವನ್ನು ಮೈತುಂಬಿಕೊಂಡಿದ್ದ ತ್ರಿಮೂರ್ತಿ ದೇವರುಗಳು, ದೇವಿ ಅಂತರ್ಧಾನಳಾದ ಮರುಕ್ಷಣದಲ್ಲಿ ಜಗಳಾಡಲು ತೊಡಗುತ್ತಾರೆ.

Advertisement

ತ್ರಿಮೂರ್ತಿಗಳ ಈ ವಾದ ಸುಮಾರು ಮುಕ್ಕಾಲು ಗಂಟೆ ತೆಗೆದು ಕೊಳ್ಳುತ್ತದೆ. ಇರಲಿ ಬಿಡಿ. ಆದರೆ ಆ ವಾದ ಮತ್ತು ವಾಕ್ಯಗಳ ಪ್ರಯೋಗ, ಸಮರ್ಥನೆಗೆ ನೀಡುವ ಉದಾಹರಣೆಗಳು ಯಕ್ಷಗಾನದ ಸಂದರ್ಭಕ್ಕೆ ಹೊಂದಿಕೊಳ್ಳುವುದಿಲ್ಲ. ಪಾತ್ರಗಳು ಬ್ರಹ್ಮ, ವಿಷ್ಣು ಮಹೇಶ್ವರರದ್ದಲ್ಲವೇ? ಪಾತ್ರಧಾರಿಗಳು ಅದನ್ನು ಮರೆತು ಸಾಮಾನ್ಯ ಮನುಷ್ಯರು ಬೀದಿಬದಿಯಲ್ಲಿ ನಿಂತು ಜಗಳವಾಡುವ ರೀತಿಯಲ್ಲಿ ಸಂವಾದ ಮಾಡಬಹುದೆ? ಪಾತ್ರದ ಗೌರವ ಮತ್ತು ಕಥೆಯ ಮಹತ್ವಕ್ಕೆ ಕುಂದುಂಟಾಗುವ ರೀತಿಯಲ್ಲಿ ಆ ದೃಶ್ಯವನ್ನು ಅಭಿನಯಿಸುವುದು ಸರಿಯೇ? ಮತ, ಬಹುಮತ, ಪಕ್ಷ, ಪಕ್ಷಾಂತರ, ಮುಂತಾದ ಪದಗಳನ್ನು ಬಳಸುತ್ತಾ ಸಮಕಾಲೀನ ರಾಜಕೀಯ ಪಕ್ಷಗಳ, ರಾಜಕೀಯ ನಾಯಕರನ್ನು ಅವಹೇಳನ ಮಾಡುವಂತಹ ತರ್ಕಗಳನ್ನು ಪ್ರಸ್ತುತಪಡಿಸುವುದು ಸರಿಯೇ?

ತಾವು ನಿಭಾಯಿಸುವ ಪಾತ್ರ ವಾದದಲ್ಲಿ ಗೆಲ್ಲಲೇಬೇಕೆಂಬ ಹಠ ಯಾಕೆ? ಮಾತಿನ ಮೂಲಕ ಇದಿರಾಳಿ ಪಾತ್ರವನ್ನು ಸೋಲಿಸುವುದು ಅಂದರೆ ನಿಜವಾಗಿ ಇದಿರಾಳಿ ಪಾತ್ರಧಾರಿಯನ್ನು ಸೋಲಿಸುವುದಲ್ಲವೇ? ಅಂತಹ ಸಂದರ್ಭಗಳಲ್ಲಿ ಪ್ರೇಕ್ಷಕರಿಗೆ ಆ ದೃಶ್ಯ ತ್ರಿಮೂರ್ತಿಗಳ ಸಂವಾದವಾಗಿ ಕಾಣಿಸುವ ಬದಲು ಕಲಾವಿದರ ಮಾತುಗಾರಿಕೆಯ ಪೈಪೋಟಿಯಾಗಿ ಕಾಣುತ್ತದೆ. ಅದರಲ್ಲೂ ದೇವರ ಪಾತ್ರಗಳು ಈ ರೀತಿ ಜಗಳವಾಡುವುದರಿಂದ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯೂ ಇದೆ. 

ಯಕ್ಷಗಾನದಲ್ಲಿ ಯಾವುದೇ ಪಾತ್ರವಾಗಲಿ ಜನಸಾಮಾನ್ಯರಾಡುವ ಭಾಷೆಯನ್ನು ಬಿಟ್ಟು ಸ್ವಲ್ಪ ಮೇಲ್ಮಟ್ಟದ ಅಂದರೆ ಯಕ್ಷಗಾನೀಯ ಶೈಲಿಯ ಎನ್ನಬಹುದಾದ ಭಾಷಾ ಶೈಲಿಯನ್ನು ಪ್ರಯೋಗಿಸಬೇಕಾಗುತ್ತದೆ. ಆದರೆ ಈಗ ಯಕ್ಷಗಾನದಲ್ಲಿ ಭಾಷಾ ಬಳಕೆಯ ಬಗೆಗಿನ ಆ ಒಂದು ಎಚ್ಚರ ಹೆಚ್ಚಿನ ಕಲಾವಿದರಲ್ಲಿ ಕಾಣಬರುವುದಿಲ್ಲ.

ಪ್ರಸಂಗದ ಆಶಯವನ್ನು ಮನಸ್ಸಿನಲ್ಲಿಟ್ಟುಕೊಂಡು, ವೈಯಕ್ತಿಕ ಹೆಚ್ಚು ಗಾರಿಕೆಯನ್ನು ಪ್ರದರ್ಶಿಸುವ ಚಪಲ ಕೈಬಿಡಬೇಕು. ಕನಿಷ್ಠ ಪಾತ್ರದ ಗೌರವ, ಸಂದರ್ಭದ ಔಚಿತ್ಯವನ್ನು ಗಮನಿಸಿಯಾದರೂ ತಮ್ಮ ತಮ್ಮ ಪಾತ್ರಗಳನ್ನು ಯೋಗ್ಯರೀತಿಯಲ್ಲಿ ಚಿತ್ರಿಸುವ ಪ್ರಯತ್ನ ಮಾಡಬಾರದೇ? ಭಾಷಾ ಪ್ರಯೋಗ, ವಾದಿಸುವ ವಿಧಾನ, ಅಭಿನಯಗಳಲ್ಲಾದರೂ ಪಾತ್ರಗಳ ವೈಶಿಷ್ಟéವನ್ನು ತೋರಿಸುವ ಪ್ರಯತ್ನ ಮಾಡಬಾರದೇ?

Advertisement

 ಯಕ್ಷಪ್ರಿಯ

Advertisement

Udayavani is now on Telegram. Click here to join our channel and stay updated with the latest news.

Next