Advertisement

ಪುತ್ತೂರು: ರೈಲಿನಲ್ಲಿ ಮಹಿಳೆಯ ನಗ-ನಗದು ದರೋಡೆ; ಹಾರಿ ತಪ್ಪಿಸಿಕೊಂಡ ದುಷ್ಕರ್ಮಿ

08:17 PM Aug 30, 2022 | Team Udayavani |

ಪುತ್ತೂರು: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್‌ ಅನ್ನು ದರೋಡೆ ಮಾಡಿ  ಪರಾರಿಯಾದ ಘಟನೆ ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಸಮೀಪದ 1 ಕಿ.ಮೀ. ದೂರದ ಹಾರಾಡಿ, ಸಿಟಿ ಗುಡ್ಡೆ ಮಧ್ಯೆ ಆ. 30ರ ನಸುಕಿನ ಜಾವ 2.30ರ ಸುಮಾರಿಗೆ ನಡೆದಿದೆ.

Advertisement

ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲು ಇದಾಗಿದೆ. ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಕಾರವಾರ ಮೂಲದ ಅಧ್ಯಾಪಕರಾಗಿರುವ ರಮೇಶ್‌ ಮತ್ತು ನಿರ್ಮಲಾ ದಂಪತಿ ಲಕ್ಷಾಂತರ ರೂ. ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್‌ ಕಳೆದುಕೊಂಡವರು.

ಆ. 29ರ ರಾತ್ರಿ ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲು ಆ. 30ರ ನಸುಕಿನ ಜಾವ 2.20ರ ಸುಮಾರಿಗೆ ಕಬಕ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ತಲುಪಿತ್ತು. 2.30ರ ಸುಮಾರಿಗೆ ಕಾರವಾರಕ್ಕೆ ಹೊರಟ ವೇಳೆ ರೈಲು ಪುತ್ತೂರು ಹಾರಾಡಿ ಸೇತುವೆ ದಾಟಿ ಮುಂದೆ ಸಿಟಿಗುಡ್ಡೆ ತಲುಪುತ್ತಿದ್ದಂತೆ ನಿರ್ಮಲಾ ಅವರು ತಲೆಯ ಅಡಿಯಲ್ಲಿ ಇಟ್ಟಿದ್ದ ವ್ಯಾನಿಟಿ ಬ್ಯಾಗ್‌ ಅನ್ನು ಅಪರಿಚಿತ ವ್ಯಕ್ತಿ ಎಳೆಯಲು ಯತ್ನಿಸುತ್ತಿದ್ದುದು ಅವರ ಗಮನಕ್ಕೆ ಬಂದಿತ್ತು. ಆ ಕೂಡಲೇ ಅವರು ಆ ವ್ಯಕ್ತಿಯನ್ನು ತಳ್ಳಿದ್ದಾರೆ. ಈ ವೇಳೆ ನಿರ್ಮಲಾ ಅವರ ಬಳಿ ಇದ್ದ ವ್ಯಾನಿಟಿ ಬ್ಯಾಗ್‌ ತುಂಡಾಗಿ ನಗ-ನಗದು ಇದ್ದ ಬ್ಯಾಗು ವ್ಯಕ್ತಿಯ ಕೈ ಸೇರಿತ್ತು.

8 ಲಕ್ಷ ರೂ. ಮೌಲ್ಯದ ಸೊತ್ತು ಕಳವು

ರೈಲು ಬೋಗಿಯಿಂದ ಹಾರಲೆತ್ನಿಸಿದ್ದ ಆತನನ್ನು ಮಹಿಳೆಯು ಹಿಡಿದುಕೊಂಡು ರೈಲಿನ ಚೈನು ಎಳೆದಿದ್ದಾರೆ. ರೈಲು ನಿಧಾನವಾಗುತ್ತಿದ್ದಂತೆಯೇ ಆ ಅಪರಿಚಿತ ವ್ಯಕ್ತಿ ರೈಲಿನಿಂದ ಹಾರಿದ್ದಾನೆ. ಈ ವೇಳೆ ಮಹಿಳೆಯೂ ಆಯ ತಪ್ಪಿ ರೈಲಿನಿಂದ ಹಳಿಯ ಮೇಲೆ ಬಿದ್ದಿದ್ದಾರೆ. ಆರೋಪಿ ಪರಾರಿಯಾಗಿದ್ದು, ಗಾಯಗೊಂಡ ಮಹಿಳೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ರಮೇಶ್‌ ಮತ್ತು ನಿರ್ಮಲಾ ಅವರು ನೀಡಿದ ದೂರಿನಂತೆ 40 ಸಾವಿರ ರೂ. ನಗದು ಮತ್ತು ಚಿನ್ನಾಭರಣ ಸೇರಿ ಒಟ್ಟು 8 ಲಕ್ಷ ರೂ. ಮೌಲ್ಯದ ಸೊತ್ತು ದರೋಡೆ ಮಾಡಿರುವ ಕುರಿತು ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next