Advertisement

Puttur ರಸ್ತೆ: ಕಂಡ ಕಂಡಲ್ಲಿ ಹೊಂಡ; ಸಂಚಾರಕ್ಕೆ ಪರದಾಡುವ ಸ್ಥಿತಿ

12:22 PM Sep 10, 2024 | Team Udayavani |

ಪುತ್ತೂರು: ಜಿಲ್ಲಾ ಕೇಂದ್ರ ಸ್ಥಾನವಾಗುವ ನಿರೀಕ್ಷೆಯಲ್ಲಿರುವ ಪುತ್ತೂರು ನಗರದ ಮುಖ್ಯ ರಸ್ತೆಯು ಹದಗೆಟ್ಟಿದ್ದು ಸಂಚಾರದ ಸ್ಥಿತಿ ಮಾತ್ರ ಶೋಚನಿಯವಾಗಿದೆ.

Advertisement

ಬೊಳುವಾರಿನಿಂದ ದರ್ಬೆ ತನಕ ಮುಖ್ಯ ರಸ್ತೆಯ ಅಲ್ಲಲ್ಲಿ ಹೊಂಡ ಸೃಷ್ಟಿಯಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ದರ್ಬೆ ಸರ್ಕಲ್‌, ಕಲ್ಲಾರೆ, ಗಾಂಧಿಕಟ್ಟೆ, ಅಂಚೆ ಕಚೇರಿ ಮುಂಭಾಗ, ಹಳೆ ಮಯೂರ ಥಿಯೇಟರ್‌ ಬಳಿ, ಬೊಳುವಾರು ಸರ್ಕಲ್‌ ಬಳಿ ರಸ್ತೆ ತುಂಬ ಹೊಂಡ ತುಂಬಿ ಬಹಳ ದಿನಗಳಾದವು. ತಾತ್ಕಾಲಿಕ ದುರಸ್ತಿ ನಡೆಸಿರುವ ಸ್ಥಳಗಳಲ್ಲಿ ಅವು ಎದ್ದು ಹೋಗಿ ಮತ್ತಷ್ಟು ಹೊಂಡ ಸೃಷ್ಟಿಯಾಗಿದೆ.

ಸಂಪರ್ಕ ರಸ್ತೆ
ಮುಖ್ಯ ರಸ್ತೆಯಿಂದ ಕವಲೊಡೆದು ಹೋಗಿರುವ ಹತ್ತಾರು ಸಂಪರ್ಕ ರಸ್ತೆಗಳಲ್ಲೂ ಹೊಂಡಗಳೇ ರಸ್ತೆಯ ತುಂಬ ಚದುರಿಕೊಂಡಿದೆ. ಶ್ರೀಧರ್‌ ಭಟ್‌ ಅಂಗಡಿ ಬಳಿಯಿಂದ ಕಲ್ಲಿಮಾರ್‌ ತನಕ ಕೆಲವು ತಿಂಗಳ ಹಿಂದೆ ಹೊಸದಾಗಿ ಡಾಮರು ಹಾಸುವ ಕಾಮಗಾರಿ ನಡೆಸಿದ್ದು ಅದು ಅರ್ಧದಲ್ಲೇ ಬಾಕಿಯಾದ ಕಾರಣ ಜಲ್ಲಿ ಎದ್ದು ಸಂಚಾರವೇ ದುಸ್ತರ ಎನಿಸಿದೆ.

ಕೆಸರು ನೀರು
ನಗರದ ಪ್ರಧಾನ ಅಂಚೆ ಕಚೇರಿ ಬಳಿಯ ಪ್ರಯಾಣಿಕರ ತಂಗುದಾಣದ ಮುಂಭಾಗ ಹಲವು ಹೊಂಡಗಳು ಸೃಷ್ಟಿಯಾಗಿವೆ. ದಿನ ನಿತ್ಯ ನೂರಾರು ಮಂದಿ ಇಲ್ಲಿ ಬಸ್‌ಗಾಗಿ ಕಾಯುತ್ತಿದ್ದು ಕೆಲವೊಮ್ಮೆ ಕೆಸರು ನೀರಿನ ಅಭಿಷೇಕ ಆಗುವುದೂ ಇದೆ.

Advertisement

ಹೊಸ ತಂಡಕ್ಕೆ ಸವಾಲು
ನಗರಸಭೆಗೆ ಈಗಾಗಲೇ ಹೊಸ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಆಗಿದೆ. ಅಧಿಕಾರಿಗಳ ಸುಪರ್ದಿಯಲ್ಲಿದ್ದ ಅಧಿಕಾರ ಈಗ ಜನಪ್ರತಿನಿಧಿಗಳ ಕೈಗೆ ದೊರಕಿದೆ. ಮುಖ್ಯ ರಸ್ತೆಗಳ ಹೊಂಡಗಳು ಹೊಸ ತಂಡವನ್ನು ಸ್ವಾಗತಿಸುತ್ತಿದ್ದು ಅದಕ್ಕೆ ಪರಿಹಾರ ಕಾಣುವ ಸವಾಲು ಅವರ ಮುಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next