Advertisement

ಪ್ರತಿಷ್ಠೆಯ ಪಣಕ್ಕೆ ಕಾರಣವಾದ ಪುತ್ತೂರು ಸಂತೆ ಸ್ವಸ್ಥಾನಕ್ಕೆ

05:26 PM Mar 14, 2017 | Harsha Rao |

ಪುತ್ತೂರು: ಸ್ಥಳಾಂತರ ಪ್ರಹಸನ, ರಾಜಕೀಯ ಮೇಲಾಟ, ಆರೋಪ -ಪ್ರತ್ಯಾ ರೋಪ- ಎಂಟು ತಿಂಗಳಿಂದ ನಗರದ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಗೊಂದಲಗಳಿಗೆ ಕಾರಣವಾದ ಐತಿಹಾಸಿಕ ಕಿಲ್ಲೆ ಮೈದಾನದ ಸಂತೆ ಮರಳಿ ಸ್ವಸ್ಥಾನಕ್ಕೆ ತಲುಪಿದೆ.

Advertisement

ಹಲವು ದಶಕಗಳಿಂದ ಸೋಮವಾರ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಯುತ್ತಿತ್ತು. ಆದರೆ ಎಂಟು ತಿಂಗಳ ಹಿಂದೆ ಊರೆಲ್ಲಾ ಸುತ್ತಿ ಈಗ ಮತ್ತೆ ಕಿಲ್ಲೆ ಮೈದಾನಕ್ಕೆ ಬಂದಿದೆ. ಸಂತೆಗೆ ಮರು ಜೀವ ಬಂದಂತಾಗಿದೆ. ಪುತ್ತೂರು ಪೇಟೆಯಲ್ಲೂ ಸಂತೆ ಆರಂಭಗೊಂಡ ಕಳೆ ಕಾಣಿಸಿಕೊಂಡಿದೆ.

ಸ್ಥಳಾಂತರ ಆದೇಶದ ಬಳಿಕ ನಗರದ ಮಿನಿ ವಿಧಾನಸೌಧದಲ್ಲಿನ ಸರಕಾರಿ ಕಚೇರಿಗಳು, ನ್ಯಾಯಾಲಯ, ಸರಕಾರಿ ಆಸ್ಪತ್ರೆಗಳಿಗೆ ಬರುವವರಿಗೆ ತೊಂದರೆ, ಸಂಚಾರ ಸಮಸ್ಯೆ ಗಳನ್ನು ಮುಖ್ಯವಾಗಿಸಿ ಕೊಂಡು ಆ. 15ರ ಬಳಿಕ ಪುತ್ತೂರು ಕಿಲ್ಲೆ ಮೈದಾನದ ಸೋಮವಾರ ಸಂತೆ ಸ್ಥಳಾಂತರಗೊಳಿಸಿ ಆಗಿನ ಪುತ್ತೂರು ಸಹಾಯಕ ಕಮಿಷನರ್‌ ಡಾ| ರಾಜೇಂದ್ರ ಕೆ.ವಿ. ಅವರು ಸಬ್‌ ಡಿವಿಜನಲ್‌ ಮ್ಯಾಜಿಸ್ಟ್ರೇಟರ್‌ ನೆಲೆಯಲ್ಲಿ ಆದೇಶಿಸಿದ್ದರು.

ಅನಂತರದಲ್ಲಿ ದೂರದ ಪುತ್ತೂರು ಎಪಿಎಂಸಿ ಪ್ರಾಂಗ ಣದಲ್ಲಿ ಸಂತೆ ನಡೆಸಲಾಯಿ ತಾದರೂ ವ್ಯಾಪಾರದ ಕೊರತೆಯ ಕಾರಣದಿಂದ ವ್ಯಾಪಾರಿಗಳೂ ನಷ್ಟವೆಂದು ದೂರಿ ಕೊಂಡರು. ಬಳಿಕ ನಗರಸಭೆಯಿಂದ ಸಂತೆಗಾಗಿ ಪರ್ಯಾಯ ಜಾಗ ಹುಡುಕಲಾಯಿತಾದರೂ ವಿಫಲವಾ ದಾಗ ಮರಳಿ ಕಿಲ್ಲೆ ಮೈದಾನದಲ್ಲಿ ರವಿವಾರ ಸಂತೆ ಆಯೋಜಿಸಲಾಯಿತು. ರವಿವಾರವೂ ನಿರೀಕ್ಷಿತ ಫಲ ಸಿಗದಿದ್ದಾಗ ನಗರಸಭೆಯಲ್ಲಿ ನಿರ್ಣಯ ಕೈಗೊಂಡು ಇದೀಗ ಸೋಮವಾರ ಸಂತೆ ಆರಂಭಿಸಲಾಗಿದೆ.

ಪ್ರತಿಷ್ಠೆಯ ಹೋರಾಟ
ಸಂತೆ ಸ್ಥಳಾಂತರವೆಂಬುದು ಲಾಭ -ನಷ್ಟ, ಪ್ರಯೋಜಕ -ನಿಷ್ಪ್ರಯೋಜಕವೆನ್ನುವುದ ಕ್ಕಿಂತಲೂ ತಂಡಗಳ ಮಧ್ಯೆ ಪ್ರತಿಷ್ಠೆಯ ಹೋರಾಟವಾಗಿ ಪರಿಣಮಿ ಸಿತ್ತು. ಪ್ರಮುಖ ಎರಡು ಪಕ್ಷಗಳಲ್ಲಿ, ಸ್ಥಳೀಯಾಡಳಿತದಲ್ಲಿ ಪರಸ್ಪರ ಪರ -ವಿರೋಧದ ಗುಂಪುಗಳು ರಚನೆಗೊಂಡಿದ್ದವು. ಪರಸ್ಪರ ಆರೋಪ – ಪ್ರತ್ಯಾರೋಪಗಳೂ ನಡೆದವು. 

Advertisement

ಸುಖಾಂತ್ಯ
ಮಾ. 13ರ ಸೋಮವಾರ ಮರಳಿ ಕಿಲ್ಲೆ ಮೈದಾನದ ಸಂತೆ ಆರಂಭಗೊಂಡು ಈ ಹಿಂದಿನ ವಾತಾವರಣವೇ ನಿರ್ಮಾಣ ಗೊಂಡಿದೆ. ರವಿವಾರದ ಸಂತೆ ಕಾವೂ ಎಪಿಎಂಸಿ ಪ್ರಾಂಗಣದ ಸಂತೆಗಿಂತ ಪರವಾ ಗಿಲ್ಲ ಎನ್ನುವ ವಾತಾವರಣ ವ್ಯಾಪಾರಿ ಗಳು ಹಾಗೂ ಗ್ರಾಹಕರ ಕಡೆಯಿಂದ ಕಾಣಿಸಿಕೊಂಡಿದೆ. 

ತೊಂದರೆ ನಿವಾರಣೆ 
ಕಿಲ್ಲೆ ಮೈದಾನದ ಸಂತೆ ಸೋಮವಾರವೇ ಆರಂಭಿಸಬೇಕು ಎನ್ನುವ ಒತ್ತಾಯಗಳು ಕೇಳಿಬಂದ ಹಿನ್ನೆಲೆಯಲ್ಲಿ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಆ ಮೂಲಕ ಸಂತೆಯ ತೊಂದರೆ ನಿವಾರಣೆಯಾಗಿದೆ.
– ಜಯಂತಿ ಬಲಾ°ಡು, ಅಧ್ಯಕ್ಷರು, ನಗರಸಭೆ ಪುತ್ತೂರು

ಖುಷಿಯಾಗಿದೆ 
ಎಪಿಎಂಸಿ ಹಾಗೂ ಕಿಲ್ಲೆ ಮೈದಾನದಲ್ಲಿ ನಡೆದ ಸಂತೆಗಿಂತ ಇಂದಿನ ಸಂತೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ಎರಡು ವಾರಗಳಲ್ಲಿ ಸಹಜ ಸ್ಥಿತಿಗೆ ಬಂದು ವ್ಯಾಪಾರ ಹೆಚ್ಚಾಗುವ ನಿರೀಕ್ಷೆ ಮೂಡಿದೆ, ಖುಷಿಯಾಗಿದೆ.
– ಮೇದಪ್ಪ, ಸ್ಥಳೀಯ ಸಂತೆ ವ್ಯಾಪಾರಿ

ಸಮಸ್ಯೆಗಳು ಬಗೆಹರಿದಿದೆ 
ನಮಗೆ ಸಂತೆ ವ್ಯಾಪಾರವೇ ಬದುಕಿನ ದಾರಿ. ಪುತ್ತೂರು ಸಂತೆ ಸ್ಥಳಾಂತರವಾದ ಬಳಿಕ ವ್ಯಾಪಾರ ನಷ್ಟದಿಂದ ತುಂಬಾ ತೊಂದರೆ ಅನುಭವಿಸಿದ್ದೇವೆ. ಸಂತೆಯ ಕುರಿತ ಎಲ್ಲ  ಸಮಸ್ಯೆಗಳು ಬಗೆಹರಿದು ಹೆಚ್ಚಿನ ವ್ಯಾಪಾರದ ನಿರೀಕ್ಷೆಯಲ್ಲಿದ್ದೇವೆ.
– ಪುಟ್ಟರಾಜು ಹಾಸನ, ಸಂತೆ ವ್ಯಾಪಾರಿ

ಕೊಂಡೊಯ್ಯಲು ಸುಲಭ 
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಯುವುದರಿಂದ ನಮಗೆ ಹೆಚ್ಚಿನ ಪ್ರಯೋಜನವಿದೆ. ಸೋಮವಾರ ಹೆಚ್ಚಾಗಿ ಅಗತ್ಯ ಕೆಲಸಗಳಿಗಾಗಿ ಪೇಟೆಗೆ ಬರುವುದರಿಂದ ಸನಿಹದಲ್ಲೇ ಇರುವ ಕಿಲ್ಲೆ ಮೈದಾನದ ಸಂತೆಗೆ ಬಂದು ತರಕಾರಿ ಕೊಂಡೊಯ್ಯಲು ಸುಲಭವಾಗುತ್ತದೆ.
– ವಿಶಾಲಾಕ್ಷಿ ಪರ್ಪುಂಜ, ಗೃಹಿಣಿ

Advertisement

Udayavani is now on Telegram. Click here to join our channel and stay updated with the latest news.

Next