Advertisement

ಪುತ್ತೂರು: ಇಂದಿನಿಂದ ಕೃಷಿ ಯಂತ್ರ ಮೇಳ

10:54 AM Feb 10, 2023 | Team Udayavani |

ಪುತ್ತೂರು: ನೆಹರೂನಗರದ ವಿವೇಕಾನಂದ ಕಾಲೇಜ್‌  ಆಫ್‌ ಎಂಜಿನಿಯರಿಂಗ್‌ ಆಂಡ್‌ ಟೆಕ್ನಾಲಜಿಯ ಆವರಣದಲ್ಲಿ ಫೆ.10 ರಿಂದ 12 ರ ತನಕ 3 ದಿನಗಳ ಕಾಲ ನಡೆಯಲಿರುವ ಬೃಹತ್‌ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನಕ್ಕೆ ಇಡೀ ಮೈದಾನ ಸಿದ್ಧವಾಗಿದೆ.
ಮೇಳದ ಯಶಸ್ಸಿಗೆ ಎಂಜಿನಿಯರಿಂಗ್‌ ಕಾಲೇಜಿನ 1500 ವಿದ್ಯಾರ್ಥಿಗಳು, ಸಿಬಂದಿ ವರ್ಗ ಶ್ರಮಿಸುತ್ತಿದ್ದು ಪಾರಂಪರಿಕ ಶೈಲಿಯಲ್ಲಿ ಸ್ವಾಗತ ಕೋರಲು ಪೂರ್ಣ ತಯಾರಿ ನಡೆಸಲಾಗಿದೆ. ಒಂದೆಡೆ ಯಂತ್ರ, ಇನ್ನೊಂದೆಡೆ ಪ್ರಾತ್ಯಕ್ಷಿಕೆ, ಬಗೆ ಬಗೆಯ ಆಹಾರ ತಿನಿಸಿನ ಮಳಿಗೆ, ವಿವಿಧ ಜಾತಿಯ ಗಿಡಗಳ ನರ್ಸರಿ ಹೀಗೆ ಇಡೀ ಕೃಷಿ ಯಂತ್ರ ಮೇಳ ಜನರಿಗೆ ಒಂದು ಪ್ಯಾಕೇಜ್‌ ರೂಪದಲ್ಲಿ ಸೌಲಭ್ಯ ಒದಗಿಸಲು ಅಣಿಯಾಗಿದೆ. ಕಳೆದ ನಾಲ್ಕು ಕೃಷಿ ಯಂತ್ರ ಮೇಳದ ಅನುಭವ ಪರಿಣಾಮ ಈ ಬಾರಿ ಅಪೂರ್ವ ರೀತಿಯ ಸಿದ್ಧತೆ ನಡೆದಿದೆ. ಯಂತ್ರ ಮೇಳಕ್ಕೆ ಸಂಬಂಧಿಸಿದಂತೆ 140 ಮಳಿಗೆಗಳು ಮತ್ತು ಕನಸಿನ ಮನೆಗೆ ಸಂಬಂಧಪಟ್ಟ 83 ಮಳಿಗೆಗಳು ಮೈದಾನಕ್ಕೆ ದಾಪುಗಾಳಿಟ್ಟಿದೆ. ಅದಕ್ಕೆ ಬೇಕಾದ ಸ್ಟಾಲ್‌ಗ‌ಳನ್ನು ಸ್ಥಾಪಿಸಲಾಗಿದೆ. ಬಿಸಿಲು ಹಾಗೂ ಧೂಳು ತಾಕದಂತೆ ತೆಳು ಪರದೆ ಅಳವಡಿಸಲಾಗಿದೆ. ಅಟೋಮೊಬೈಲ್‌, ಆಹಾರ ಮಳಿಗೆಗಗಳು, ವ್ಯಾಪಾರ ಮಳಿಗೆ, ಸಾವಯವ ಸಿರಿ ಮಳಿಗೆಗಳು ಇಲ್ಲಿ ಇರಲಿದೆ. ಡ್ರೋನ್‌ ಮೂಲಕ ಔಷಧ ಸಿಂಪಡಣೆಗೆ ಅಡಿಕೆ ಮರಗಳನ್ನು ನೆಡಲಾಗಿದ್ದು ಡ್ರೋನ್‌ ಬಳಕೆಯ ಪ್ರಾತ್ಯಕ್ಷಿಕೆಯ ಅನುಭವ ಪಡೆದುಕೊಳ್ಳಲು ಅಡಿಕೆ ಬೆಳೆಗಾರರಿಗೆ ನೆರವಾಗಲಿದೆ. ಸುಸಜ್ಜಿತ ಕಾರ್ಬನ್‌ ಫೈಬರ್‌ ದೋಟಿಗಳ ಪ್ರದರ್ಶನ, ಜಲಕೃಷಿ ವಿಧಾನದ ಸಮಗ್ರ ಪರಿಚಯ, ಸ್ಥಳದಲ್ಲೇ ಮಣ್ಣಿನ ಪಾತ್ರೆಗಳ ತಯಾರಿ ಮತ್ತು ಮಾರಾಟ, ಪಾರಂಪರಿಕ ಮಾದರಿ ಗ್ರಾಮ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಲಿದೆ. ವೀಕ್ಷಣೆ, ಖರೀದಿಗೆ ಅನುಕೂಲ ರೀತಿಯಲ್ಲಿ ಮಳಿಗೆ ಸ್ಥಾಪಿಸಿದ್ದು ಮೂರು ದಿನದಲ್ಲಿ ಅಂದಾಜು 5 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಸುಸಜ್ಜಿತ ಪಾರ್ಕಿಂಗ್‌ಗೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement

ಪುತ್ತೂರು ನಗರದಲ್ಲಿ ಜಾಥಾ:
ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಪುತ್ತೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯ ಆವರಣದಲ್ಲಿ ಫೆ. 10 ರಿಂದ 12 ತನಕ 3 ದಿನಗಳ ಕಾಲ 5ನೇ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನವೂ ನಡೆಯಲಿದ್ದು ಈ ಕಾರ್ಯಕ್ರಮಗಳ ಬಗ್ಗೆ ರೈತಾಪಿ ವರ್ಗಕ್ಕೆ ಮತ್ತು ಜನತೆಗೆ ಮಾಹಿತಿ ನೀಡುವ ಸಲುವಾಗಿ ಕ್ಯಾಂಪ್ಕೋ ಸಿಬಂದಿ ಮತ್ತು ವಿವೇಕಾನಂದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯ ವಿದ್ಯಾರ್ಥಿಗಳು ಮತ್ತು ಸಿಬಂದಿ ಪುತ್ತೂರು ನಗರದಲ್ಲಿ ಜಾಥಾ ನಡೆಸಿದರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಅವರು ಕ್ಯಾಂಪ್ಕೋ ಚಾಕಲೇಟ್‌ ಕಾರ್ಖಾನೆಯ ಬಳಿ ಜಾಥಾಕ್ಕೆ ಚಾಲನೆ ನೀಡಿದರು. ದರ್ಬೆ ವೃತ್ತದಲ್ಲಿ ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬಂದಿ ಸೇರಿಕೊಂಡು ಜಾಥಾವನ್ನು ಮುನ್ನಡೆಸಿದರು. ಜಾಥಾವು ದರ್ಬೆಯಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಬಸ್‌ ನಿಲ್ದಾಣ, ವೆಂಕಟ್ರಮಣ ದೇಗುಲ, ಅಂಚೆ ಕಚೇರಿಯ ಮುಂಬದಿಯಿಂದ ಶ್ರೀಧರ ಭಟ್‌ ಅವರ ಅಂಗಡಿಯ ಮುಂದಾಗಿ ಕಿಲ್ಲೆ ಮೈದಾನದಲ್ಲಿ ಸಮಾಪನಗೊಂಡಿತು. ಯಂತ್ರಮೇಳ ಮತ್ತು ಸುವರ್ಣ ಮಹೋತ್ಸವ ಆಚರಣೆಯ ಕರಪತ್ರಗಳನ್ನು ಹಂಚಲಾಯಿತು. ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಎಚ್‌. ಎಂ.ಕೃಷ್ಣ ಕುಮಾರ್‌, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್‌ ರಾವ್‌ ಪಿ., ಕಾರ್ಯದರ್ಶಿ ಡಾ ಕೆ.ಎಂ.ಕೃಷ್ಣ ಭಟ್‌, ವಿವೇಕಾನಂದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಎಂಡ್‌ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್‌ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್‌.ಟಿ.ಎಸ್‌., ಕೋಶಾಧಿಕಾರಿ ಮುರಳೀಧರ ಭಟ್‌, ಯಂತ್ರಮೇಳದ ಸಂಯೋಜಕ ರವಿಕೃಷ್ಣ ಡಿ.ಕಲ್ಲಾಜೆ, ನಿರ್ದೇಶಕರಾದ ಸಂತೋಷ್‌ ಕುತ್ತಮೊಟ್ಟೆ, ಪ್ರಾಂಶುಪಾಲ ಡಾ|ಮಹೇಶ್‌ ಪ್ರಸನ್ನ.ಕೆ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next