Advertisement

ಉಪ್ಪಿನಂಗಡಿ : 8,800ರೂ. ಬೆಲೆಯ ಫೋನ್ 1,785 ರೂ.ಗೆ : ಪಾರ್ಸೆಲ್‌ ನಂಬಿ ಹಣ ಕಳೆದುಕೊಂಡರು

09:43 AM Sep 13, 2022 | Team Udayavani |

ಉಪ್ಪಿನಂಗಡಿ : ಅದೃಷ್ಟ (ಲಕ್ಕಿ ) ಗ್ರಾಹಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 8,800 ರೂ. ಮುಖಬೆಲೆಯ ಮೊಬೈಲ್‌ ಫೋನ್‌ ಅನ್ನು 1,785 ರೂ.ಗೆ ಕಳುಹಿಸಲಾಗಿದೆ ಎನ್ನುವ ಸಂದೇಶವನ್ನು ನಂಬಿ ಅಂಚೆ ಮೂಲಕ ಬಂದ ಪಾರ್ಸೆಲ್‌ ಖರೀದಿಸಿದ ವ್ಯಕ್ತಿಯೋರ್ವರಿಗೆ ಮೊಬೈಲ್‌ ಫೋನ್‌ ಬದಲು ಕೆಟ್ಟು ಹೋದ ತಿಂಡಿಯ ಪೊಟ್ಟಣ ಕಳುಹಿಸಿ ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

Advertisement

ಉಪ್ಪಿನಂಗಡಿಯ ದೇಗುಲವೊಂದರಲ್ಲಿ ಭದ್ರತಾ ಸಿಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭವಾನಿ ಶಂಕರ್‌ ಇತ್ತೀಚೆಗೆ ತನ್ನ ಮನೆಮಂದಿಗೆಂದು ಮೂರು ವಿವೋ ಕಂಪೆನಿಯ ಮೊಬೈಲ್‌ ಫೋನ್‌ಗಳನ್ನು ಖರೀದಿಸಿದ್ದರು. ಇದರ ಬಳಿಕ ಅವರ ಮೊಬೈಲ್‌ಗೆ ಕರೆಯೊಂದನ್ನು ಮಾಡಿದ ಸಂಸ್ಥೆಯ ಅಧಿಕಾರಿ ಎನ್ನಲಾದ ವ್ಯಕ್ತಿ ಮೂರು ಮೊಬೈಲ್‌ ಖರೀದಿಸಿದ್ದಕ್ಕೆ ಸಂಸ್ಥೆಯ ಲಕ್ಕಿ ಗ್ರಾಹಕರಾಗಿ ನೀವು ಆಯ್ಕೆಯಾಗಿದ್ದೀರಿ. ಈ ಹಿನ್ನೆಲೆಯಲ್ಲಿ 8,800 ರೂ. ಬೆಲೆಯ ಮೊಬೈಲ್‌ ಅನ್ನು ಕೇವಲ 1,785 ರೂ.ಗೆ ಕಳುಹಿಸಲಾಗುವುದು. ಹಣ ತೆತ್ತು ಅಂಚೆ ಕಚೇರಿಯಿಂದ ಪಡೆದುಕೊಳ್ಳಿ ಎಂದು ತಿಳಿಸಿದ್ದರು.

ತಾನು ಫೋನ್‌ ಖರೀದಿಸಿರುವುದು ನಿಜವಾಗಿರುವಾಗ ನನಗೆ ಅದೃಷ್ಟ ಒಲಿದಿರುವುದು ನಿಜವಾಗಿರಬಹುದು ಎಂದು ನಂಬಿದ ಭವಾನಿ ಶಂಕರ್‌ ಸೋಮವಾರ ಉಪ್ಪಿನಂಗಡಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್‌ ಅನ್ನು ಹಣ ನೀಡಿ ಪಡೆದುಕೊಂಡಿದ್ದರು. ಸಂದೇಹ ಬಗೆಹರಿಸಲು ಅಲ್ಲಿಯೇ ಪಾರ್ಸೆಲ್‌ ಅನ್ನು ತೆರೆದು ನೋಡಿದಾಗ ಕೆಟ್ಟು ಹೋದ ತಿಂಡಿಯ ಪೊಟ್ಟಣವನ್ನು ಪ್ಯಾಕ್‌ ಮಾಡಿ ಕಳುಹಿಸಿರುವುದು ಕಂಡುಬಂದಿದೆ.

ಎಲ್ಲೋ ನಡೆದಿರುವ ಖರೀದಿ ಇನ್ನೆಲ್ಲೋ ಇರುವ ವಂಚಕರ ಜಾಲಕ್ಕೆ ತಿಳಿಯುತ್ತದೆ ಎನ್ನುವುದಾದರೆ ವ್ಯವಸ್ಥೆಯೊಳಗೆ ವಂಚಕರ ನೆಟ್‌ವರ್ಕ್‌ ಕ್ರಿಯಾಶೀಲವಾಗಿರುವ ಶಂಕೆ ಮೂಡಿದೆ. ಬೆಂಗಳೂರಿನ ಆಕಾಂಕ್ಷಾ ಮಾರ್ಕೆಟಿಂಗ್‌ ಸಂಸ್ಥೆಯ ಹೆಸರಿನಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ : ದಸರಾ ರಜೆ : ದ.ಕ.ದಲ್ಲಿ ಸೆ. 26ರಿಂದ ಅ.10ರ ವರೆಗೆ ,ಉಡುಪಿಯಲ್ಲಿ ಅ.3ರಿಂದ 16ರ ವರೆಗೆ ರಜೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next