Advertisement

ಹಿಡಿಂಬ- ಹಿಡಿಂಬೆ

07:35 AM Aug 10, 2017 | Harsha Rao |

ಹಿಡಿಂಬ ಒಬ್ಬ ರಾಕ್ಷಸ. ಅವನಿಗೊಬ್ಬಳು ತಂಗಿಯಿದ್ದಳು. ಅವಳೇ ಹಿಡಿಂಬೆ. ಇವರಿಗೆ ಮಾಯಾವಿದ್ಯೆ ಗೊತ್ತಿತ್ತು. ಈ ಅಣ್ಣ-ತಂಗಿ ಅರಣ್ಯದಲ್ಲಿ ವಾಸವಿದ್ದರು. ಅರಣ್ಯಕ್ಕೆ ಬರುವ ಜನರನ್ನು ಕೊಂದು ತಿನ್ನುವುದೇ ಈ ರಾಕ್ಷಸರ ಕೆಲಸವಾಗಿತ್ತು.
ಪಗಡೆಯಾಟದಲ್ಲಿ ಸೋತ ಕಾರಣದಿಂದ ವನವಾಸ ಮತ್ತು ಅಜ್ಞಾತವಾಸದ ಶಿಕ್ಷೆಗೆ ಗುರಿಯಾದ ಪಾಂಡವರು, ಅಲೆಯುತ್ತ ಅಲೆಯುತ್ತ ಕಾಡಿಗೆ ಬಂದರು. ಬಹುದೂರ ನಡೆದಿದ್ದ ಕಾರಣದಿಂದ ಕುಂತಿ ಮತ್ತು ಪಾಂಡವರಿಗೆ ಹೆಜ್ಜೆ ಎತ್ತಿಡುವುದೇ ಕಷ್ಟವಾಯಿತು. ಭೀಮನು ಅವರೆಲ್ಲರನ್ನೂ ಎತ್ತಿಕೊಂಡು ಓಡಿದ. ಎಲ್ಲರಿಗೂ ಬಾಯಾರಿಕೆ. ಭೀಮನು ಅವರನ್ನು ಒಂದು ಮರದ ಕೆಳಗೆ ಕುಳ್ಳಿರಿಸಿ ಒಂದಿಷ್ಟು ನೀರನ್ನು ಉತ್ತರೀಯದಲ್ಲಿ ತಂದು ನೋಡುತ್ತಾನೆ! ಎಲ್ಲರೂ ಗಾಢವಾದ ನಿದ್ರೆಯಲ್ಲಿದ್ದಾರೆ. ಅರಮನೆಯಲ್ಲಿ ಸುಪ್ಪತ್ತಿಗೆಯ ಮೇಲೆ ಮಲಗುತ್ತಿದ್ದವರ ಈಗಿನ ಸ್ಥಿತಿ ನೋಡಿ ಭೀಮನಿಗೆ ಕಣ್ಣಿನಲ್ಲಿ ನೀರುಕ್ಕಿತು. ತಾನು ನಿದ್ರೆ ಮಾಡದೆ ಎಚ್ಚರವಾಗಿ ಕುಳಿತು ಕಾವಲಿದ್ದನು.

Advertisement

ಅಲ್ಲಿಂದ ಸ್ವಲ್ಪ ದೂರದಲ್ಲಿ ಒಂದು ಮರದ ಮೇಲೆ ಹಿಡಿಂಬನಿದ್ದನು. ಅವನಿಗೆ ಮನುಷ್ಯರ ವಾಸನೆ ಸಿಕ್ಕಿತು. ತನಗೆ ಆಹಾರ ಸಿಕ್ಕಿತೆಂದು ಸಂತೋಷದಿಂದ ತನ್ನ ತಂಗಿ ಹಿಡಿಂಬೆಯನ್ನು ಕೂಗಿ – “ಇಲ್ಲಿಂದ ಸ್ವಲ್ಪ ದೂರದಲ್ಲಿ ಮನುಷ್ಯರು ಇದ್ದಾರೆ. ಅವರು ಯಾರೆಂದು ನೋಡಿಕೊಂಡು ಬಾ’ ಎಂದ. ಭೀಮನನ್ನು ನೋಡುತ್ತಲೇ ಹಿಡಿಂಬೆಗೆ ಅವನನ್ನು ಮದುವೆಯಾಗಬೇಕೆಂದು ಆಸೆಯಾಯಿತು. ಸುಂದರ ಯುವತಿಯ ರೂಪ ಧರಿಸಿ ಅವನ ಬಳಿಗೆ ಹೋಗಿ ತಾನು ಯಾರು ಎಂದು ತಿಳಿಸಿ, “ನನ್ನ ಜೊತೆಗೆ ಬಾ, ನಾನು ಆಕಾಶದಲ್ಲಿ ಹೋಗಬಲ್ಲೆ, ಎಲ್ಲಿಯಾದರೂ ಸುಖವಾಗಿರೋಣ’ ಎಂದಳು.

ಆದರೆ ಎಲ್ಲರನ್ನೂ ಬಿಟ್ಟು ಹೋಗಲು ಭೀಮನು ಒಪ್ಪಲಿಲ್ಲ. ಅವರಿಬ್ಬರು ಮಾತಿನಲ್ಲಿ ತಲ್ಲೀನರಾಗಿದ್ದಾಗಲೇ, ತಂಗಿ ಬರುವುದು ತಡವಾಯಿತೆಂದು ಯೋಚಿಸಿ ಹಿಡಿಂಬನೇ ಅಲ್ಲಿಗೆ ಧಾವಿಸಿ ಬಂದ. ಅವನಿಗೆ, ತನ್ನ ತಂಗಿ ಸುಂದರ ಯುವತಿಯಾಗಿ ನಿಂತಿರುವುದನ್ನು ಕಂಡು ಆಕೆ ಭೀಮನನ್ನು ಒಲಿದಿದ್ದಾಳೆ ಎಂದು ಅರ್ಥವಾಯಿತು. ಅವಳನ್ನು ಕೊಲ್ಲುವೆನೆಂದು ಮುನ್ನುಗ್ಗಿದ ಅವನನ್ನು ಭೀಮನು ತಡೆದನು. ಘೋರವಾದ ಕಾಳಗ ನಡೆಯಿತು. ಮಲಗಿದ್ದವರಿಗೆ ಎಚ್ಚರವಾಗಿ ನೋಡುತ್ತಿದ್ದರು. ಅರ್ಜುನನು ನೆರವಿಗೆ ಬರುತ್ತೇನೆಂದರೆ ಭೀಮನು ಬೇಡವೆಂದನು. ಯುದ್ಧದಲ್ಲಿ ಭೀಮನು ಹಿಡಿಂಬನನ್ನು ಕೊಂದನು. ಹಿಡಿಂಬೆಯನ್ನು ಮಾತನಾಡಿಸಿದ ಕುಂತಿಗೆ ಅವಳು ತಾನು ಯಾರೆಂದು ಹೇಳಿ, ಭೀಮನನ್ನು ತನ್ನ ಜೊತೆಗೆ ನಾಲ್ಕಾರು ದಿನಗಳ ಕಾಲ ಕಳಿಸಿಕೊಡುವಂತೆ ಬೇಡಿಕೊಂಡಳು. ಕುಂತಿಯೂ ಅದಕ್ಕೆ ಒಪ್ಪಿದಳು. ಭೀಮ- ಹಿಡಿಂಬೆಯರ ಮಗನೇ ಮಹಾಶೂರ ಘಟೋತ್ಕಚ. ತನ್ನನ್ನು ಪಾಂಡವರು ನೆನೆದಾಗ ಅವರ ನೆರವಿಗೆ ಬರುವನೆಂದು ಹೇಳಿ ಹೋದನು. ಮಗನೊಂದಿಗೆ ಹಿಡಿಂಬೆಯೂ ಹೊರಟು ಹೋದಳು.

– ಪ್ರೊ. ಎಲ್‌. ಎನ್‌ ಶೇಷಗಿರಿರಾವ್‌ ಅವರ “ಕಿರಿಯರ ಭಾಗವತ’ ಪುಸ್ತಕದಿಂದ

Advertisement

Udayavani is now on Telegram. Click here to join our channel and stay updated with the latest news.

Next