Advertisement

15ರಂದು ಪುಣ್ಯಕೋಟಿ ಗೋಸ್ವರ್ಗ ಲೋಕಾರ್ಪಣೆ

06:55 PM Feb 07, 2021 | Team Udayavani |

ಭಟ್ಕಳ: ಗುರುಭಕ್ತಿ ಹಾಗೂ ಗುರುಗಳ ಪ್ರೇರಣೆಯಿಂದ ನಿರ್ಮಾಣಗೊಂಡ ಆಚಾರ್ಯ ಭವನಮ್‌ ಮತ್ತು ಪುಣ್ಯಕೋಟಿ ಗೋ ಸ್ವರ್ಗ ಕಟ್ಟಡ ಫೆ.15ರಂದು ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಲೋಕಾರ್ಪಣಗೊಳ್ಳಲಿದೆ.

Advertisement

ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು, ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎನ್ನುವ ಹಂಬಲದಲ್ಲಿರುವ ಕೃಷ್ಣಾನಂದ ಶಿವರಾಮ ಭಟ್ಟ ಬಲ್ಸೆ ಇವರು ಶ್ರೀಗಳ ಪ್ರೇರಣೆಯಿಂದ ಹಾಗೂ ಅನನ್ಯ ಗುರು ಭಕ್ತಿಯಿಂದ ಮುರ್ಡೇಶ್ವರ ಸಮೀಪದ ಬೈಲೂರು ನೀರಗದ್ದೆಯಲ್ಲಿ ನಿರ್ಮಾಣ ಮಾಡಿದ ಆಚಾರ್ಯ ಭವನಮ್‌ ಅತ್ಯಂತ ಸುಂದರವಾಗಿದ್ದು, ಧಾರ್ಮಿಕ ಹಾಗೂ ಸಮಾಜದ ಕಾರ್ಯಕ್ಕೆ ಮೀಸಲಿರಲಿದೆ ಎನ್ನುವ ಆವರ ಮಾತು ಎಲ್ಲರಿಗೂ ಮಾದರಿಯಾಗಿದೆ.

ಅತ್ಯಂತ ವಿನೂತನ ಶೈಲಿಯಲ್ಲಿ ವಾಸ್ತು ಪ್ರಕಾರ ಕಟ್ಟಡ ನಿರ್ಮಿಸಿದ್ದು ನೆಲ ಅಂತಸ್ತಿನಲ್ಲಿ ಆಚಾರ್ಯ ಭವನಮ್‌ ನಿರ್ಮಾಣಗೊಂಡಿದೆ. ಮೊದಲನೇ ಮಹಡಿಯಲ್ಲಿ ವಿಶಾಲವಾದ ಜಾಗಾ ಇದ್ದು ಮೂರು ಕೊಠಡಿಗಳನ್ನು ನಿರ್ಮಿಸಲಾಗಿದೆ. ನೆಲ ಮಹಡಿಯ ಮುಖ್ಯ ದ್ವಾರದಲ್ಲಿಯೇ ಕಾಣುವಂತೆ ಮಧ್ಯದಲ್ಲಿ ಶಂಕರಾಚಾರ್ಯರ ಮೂರ್ತಿ ಪ್ರತಿಪಷ್ಠಾಪಿಸಲಾಗಿದೆ.

ಒಂದು ದಿಕ್ಕಿನಲ್ಲಿ ರಾಘವೇಶ್ವರ ಶ್ರೀಗಳ ಫೋಟೋ, ಇನ್ನೊಂದು ದಿಕ್ಕಿನಲ್ಲಿ ರಾಘವೇಂದ್ರ ಭಾರತೀ ಶ್ರೀಗಳ ಫೋಟೋ ಮತ್ತೂಂದು ದಿಕ್ಕಿನಲ್ಲಿ ರಾಮಚಂದ್ರ ಭಾರತೀ ಶ್ರೀಗಳ ಫೋಟೊ ಹಾಗೂ ಇನ್ನೊಂದು ದಿಕ್ಕಿನಲ್ಲಿ ಸಭಾ ಭವನ ಇದೆ. ನಾಲ್ಕೂ ದಿಕ್ಕಿನಲ್ಲಿ ಶಂಕರಾಚಾರ್ಯರು ಬರೆದ ಭಜಗೋವಿಂದಂನ 31 ಶ್ಲೋಕಗಳನ್ನು ಸುಂದರವಾಗಿ ಬರೆಯಲಾಗಿದೆ.

ಶ್ರೀಗಳು ಬಂದಾಗ ತಂಗಲು ಕೊಠಡಿ, ಶೌಚಾಲಯ, ವಿಶಾಲವಾದ ಅಡುಗೆ ಮನೆ, ಹತ್ತಾರು ಕೊಠಡಿಗಳು. ಎಲ್ಲಾ ಕೊಠಡಿಗಳ ಬಾಗಿಲ ತೋಳುಗಳನ್ನು ಶಿಲೆಯಿಂದಲೇ ಮಾಡಿರುವುದು ವಿಶೇಷ. ಕಂಬಗಳಲ್ಲಿನ ಅತ್ಯಂತ ಸುಂದರ ಕುಸುರಿ ಕೆಲಸ ಕೂಡಾ ಆಕರ್ಷಣೀಯವಾಗಿದೆ. ಗಣಪತಿ, ವಿಷ್ಣು ಶಿವನ ಮೂರ್ತಿಗಳು ಯಮುನೆ, ಗಜಲಕ್ಷ್ಮೀ, ಕಾಮಧೇನು ಮೂರ್ತಿಗಳನ್ನು ಎದುರುಗಡೆ ಕೆತ್ತಲಾಗಿದೆ.

Advertisement

ಆಚಾರ್ಯಭವನಮ್‌ ಸುತ್ತಲೂ ಗೋವುಗಳಿಗೆ ಗೋ ಸ್ವರ್ಗ ನಿರ್ಮಾಣ ಮಾಡಲಾಗಿದೆ. ಸುಮಾರು 100  ರಿಂದ 150 ಗೋವುಗಳಿಗೆ ಆಶ್ರಯ ನೀಡಲು ಸಾಧ್ಯವಾಗುವಷ್ಟು ಸ್ಥಳಾವಕಾಶವಿದ್ದು ಪ್ರಸ್ತುತ ಕೆಲವೇ ದೇಶೀ ಗೋವುಗಳಿಂದ ಆರಂಭವಾಗುವ ಗೋಸ್ವರ್ಗ ಮುಂದೆ ಅನುಕೂಲಕ್ಕೆ ತಕ್ಕಂತೆ ಗೋವುಗಳಿಗೆ ಆಶ್ರಯ ನೀಡುವ ಯೋಚನೆ ಇದೆ. ಈಗಾಗಲೇ ದೇಶಿ ಗೋ ತಳಿಗಳ ಸುಂದರ ಭಾವಚಿತ್ರಗಳೊಂದಿಗೆ ತಳಿಗಳ ಹೆಸರು ಅಳವಡಿಸಲಾಗಿದ್ದು ನೋಡುತ್ತಾ ನಿಂತರೆ ಮನಸ್ಸಿನ ಚಿಂತೆ ದೂರವಾಗಲು ಸಾಧ್ಯ.

ಮುರ್ಡೇಶ್ವರ ದೇವಸ್ಥಾನದ ಉಪಾದಿವಂತರೂ ಆಗಿರುವ ಕೃಷ್ಣಾನಂದ ಭಟ್ಟ ಬಲ್ಸೆ ಅವರನ್ನು ಬಲ್ಸೆ ಭಟ್ಟರೆಂದೇ ಜನರು ಗುರುತಿಸುತ್ತಾರೆ. ಪೌರೋಹಿತ್ಯ ಮಾಡುತ್ತಾ ಸಮಾಜಮುಖೀಯಾಗಿ ಬಂದವರು. ಚಿಕ್ಕಂದಿನಿಂದಲೂ ಕಷ್ಟಪಟ್ಟು ಸ್ವಶಕ್ತಿಯಿಂದ ಮೇಲೆ ಬಂದಿರುವ ಅವರಿಗೆ ಸಮಾಜದಲ್ಲಿರುವ ಕಡು ಬಡವರ ಕುರಿತು ವಿಶೇಷ ಕಾಳಜಿ ಹಾಗೂ ಗುರುಗಳ ಕುರಿತು ಇರುವ ಅನನ್ಯ ಭಕ್ತಿ ಅವರನ್ನು ಇಂತಹಬೃಹತ್‌ ಆಚಾರ್ಯಭವನಮ್‌ ನಿರ್ಮಾಣಕ್ಕೆ ಪ್ರೇರೇಪಣೆ ನೀಡಿತು.

ಗುರುಭಕ್ತಿಗೆ ಕಾಣಿಕೆಯಾಗಿ ಬಹುದೊಡ್ಡ ಕಟ್ಟಡವನ್ನು ಸಮಾಜಕ್ಕೆ ಅರ್ಪಣೆ ಮಾಡುತ್ತಿರುವುದು ಅವರಲ್ಲಿರುವ ಸಮಾಜಮುಖೀ ಚಿಂತನೆಗೆ ಸಾಕ್ಷಿಯಾಗಿದೆ. ಸದಾ ಸಮಾಜದ ಕುರಿತು ಚಿಂತಿಸುವ ಅವರ ಈ  ಕೊಡುಗೆಯ ಹಿಂದೆ ಅನೇಕ ನೋವುಗಳಿವೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ವಂತ ದುಡಿಮೆಯ  ಉಳಿಕೆಯ ಹಣವನ್ನು ವಿನಿಯೋಗಿಸಿ ಕಟ್ಟಡ ಕಟ್ಟಲು ಮುಂದಾದ ಅವರಿಗೆ ಕೊರೊನಾ ಕಾಲದಲ್ಲಿ ಆರ್ಥಿಕ ಅಡಚಣೆಯಾದರೂ ಹಿಂಜರಿಯದೇ ಹಿಡಿದ ಕಾರ್ಯವನ್ನು ಮಾಡಿ ಮುಗಿಸಿದ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ.

ಇದನ್ನೂ ಓದಿ :ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್‌ ಗೌರವಾಧ್ಯಕ್ಷೆ ಚಿತ್ರಾ ಆರ್‌. ಶೆಟ್ಟಿ ಅವರಿಗೆ ಗೌರವ

ಧಾರ್ಮಿಕ ಕಾರ್ಯಕ್ರಮಗಳು: ಆಚಾರ್ಯ ಭವನಮ್‌ ಮತ್ತು ಪುಣ್ಯಕೋಟಿ ಸಮರ್ಪಣಾ ಸಮಾರಂಭದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಫೆ.13 ರಂದು ಆರಂಭವಾಗಿ ಫೆ.19ರ ತನಕ ನಡೆಯಲಿದ್ದು,  ಫೆ.15ರಂದು ರಾಘವೇಶ್ವರ ಶ್ರೀಗಳಿಂದ ಲೋಕಾರ್ಪಣೆಗೊಳ್ಳಲಿದೆ.

ಪ್ರತಿದಿನ ಅನ್ನಸಂತರ್ಪಣೆ, ಚತುರ್ವೇದ ಪಾರಾಯಣ, ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ವಲಯೋತ್ಸವ ಹಾಗೂ ಯಕ್ಷಗಾನ ಸಪ್ತಾಹ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next