Advertisement

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

01:20 AM May 25, 2022 | Team Udayavani |

ಚಂಡೀಗಢ: ಮಹತ್ವದ ಬೆಳವಣಿಗೆ ಯೊಂ ದರಲ್ಲಿ, ಪಂಜಾಬ್‌ನ ಆರೋಗ್ಯ ಸಚಿವರಾದ ವಿಜಯ್‌ ಸಿಂಗ್ಲಾ ಅವರನ್ನು ಅಲ್ಲಿನ ಮುಖ್ಯಮಂತ್ರಿ ಭಗವಂತ್‌ ಮಾನ್‌, ತಮ್ಮ ಸಂಪುಟದಿಂದ ಕಿತ್ತೂಗೆದಿದ್ದಾರೆ.

Advertisement

ತಮ್ಮ ಇಲಾಖೆಯ ಕಾಮ ಗಾರಿಯೊಂದಕ್ಕೆ ಭಟಿಂಡಾ ಮೂಲದ ಗುತ್ತಿಗೆದಾರನೊಬ್ಬನಿಂದ ಶೇ.1ರಷ್ಟು ಲಂಚ (ಕಮಿಷನ್‌) ಕೇಳಿದ ಆರೋಪ ಅವರ ವಿರುದ್ಧ ಕೇಳಿಬಂದಿತ್ತು. ಪೊಲೀಸರ ಗುಪ್ತ ಕಾರ್ಯಾಚರಣೆಯಲ್ಲಿ ಆ ಆರೋಪ ಸಾಬೀತಾದ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿ ಸಲಾಗಿದೆ. ಇದರ ಬೆನ್ನಲ್ಲೇ, ಪಂಜಾಬ್‌ನ ಭ್ರಷ್ಟಾಚಾರ ನಿಗ್ರಹ ದಳ ಸಿಂಗ್ಲಾರನ್ನು ಬಂಧಿಸಿದೆ.

2015ರಲ್ಲಿ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌, ತಮ್ಮ ಸಂಪುಟದ ಸಚಿವರೊಬ್ಬರು ಇಂಥದ್ದೇ ಪ್ರಕರಣದಲ್ಲಿ ಸಿಲುಕಿದ್ದಾಗ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದರು. ಪಂಜಾಬ್‌ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್‌, “ಭಗವಂತ್‌ ಬಗ್ಗೆ ಹೆಮ್ಮೆಯಾಗುತ್ತಿದೆ. ಅವರ ನಡೆ ನನ್ನ ಕಣ್ಣಂಚಲ್ಲಿ ನೀರು ತರಿಸಿತು’ ಎಂದಿದ್ದಾರೆ.

ಕೋಡ್‌ವರ್ಡ್‌ ಬಳಸುತ್ತಿದ್ದ ಸಿಂಗ್ಲಾ
ಕೇವಲ 10 ದಿನಗಳ ಹಿಂದಷ್ಟೇ ಸಿಂಗ್ಲಾ ಕಮಿಷನ್‌ ದಂಧೆಯನ್ನು ಗುತ್ತಿಗೆದಾರ ಇಲಾಖೆಯ ಹಿರಿಯ ಅಧಿಕಾರಿಯೊ ಬ್ಬರು ಸಿಎಂ ಮಾನ್‌ ಗಮನಕ್ಕೆ ತಂದಿದ್ದರು. ತತ್‌ಕ್ಷಣವೇ ಕಾರ್ಯೋನ್ಮುಖರಾದ ಮಾನ್‌, ಸಿಂಗ್ಲಾ ಅವರನ್ನು ಸಾಕ್ಷಿ ಸಮೇತ ಹಿಡಿಯುವಂತೆ ಸೂಚಿಸಿದ್ದರು. ಸಿಂಗ್ಲಾ ಅವರು ಗುತ್ತಿಗೆದಾರರ ಬಳಿ ಕಮಿಷನ್‌ ಎಂಬ ಪದದ ಬದಲಿಗೆ ಶುಕ್ರಾನಾ ಎಂದು ಬಳಸುತ್ತಿದ್ದರು. ಹಾಗಾಗಿ ಶುಕ್ರಾನಾಕ್ಕಾಗಿ ಆಗ್ರಹಿಸಿ ಗುತ್ತಿಗೆದಾರನ ಜತೆಗೆ ಸಚಿವರು ಫೋನ್‌ನಲ್ಲಿ ಮಾತನಾಡುತ್ತಿದ್ದ ಕರೆಗಳನ್ನು ಧ್ವನಿಮುದ್ರಣ ಮಾಡಿಕೊಳ್ಳಲಾಯಿತು. ಆ ಧ್ವನಿಮುದ್ರಣಗಳನ್ನು ನಾನಾ ರೀತಿಯಲ್ಲಿ ಪರೀಕ್ಷಿಸಿ ಅದರಲ್ಲಿರುವುದು ಸಚಿವರ ಧ್ವನಿ ಎಂದೇ ಖಾತ್ರಿಪಡಿಸಿ ಕೊಳ್ಳಲಾಯಿತು. ಆನಂತರ ಅದನ್ನು ಮುಖ್ಯಮಂತ್ರಿ ಮಾನ್‌ ಅವರಿಗೆ ಒಪ್ಪಿಸಲಾಯಿತು.

ಇತ್ತೀಚೆಗೆ, ಸಚಿವ ಸಿಂಗ್ಲಾ ಅವರನ್ನು ತಮ್ಮ ಕಚೇರಿಗೆ ಕರೆಯಿಸಿಕೊಂಡ ಮಾನ್‌, ಅವರ ಮುಂದೆಯೇ ಈ ಧ್ವನಿಸುರುಳಿಯನ್ನು ಕೇಳಿಸಿದರು. ಆಗ, ತಬ್ಬಿಬ್ಟಾದ ಸಚಿವರು ತಮ್ಮ ತಪ್ಪನ್ನು ಒಪ್ಪಿಕೊಂಡರು. ಆಗ, ಮೊಹಾಲಿ ಪೊಲೀಸರಿಗೆ ಎಫ್ಐಆರ್‌ ದಾಖಲಿಸುವಂತೆ ಮಾನ್‌ ಆದೇಶಿಸಿದರು. ಎಫ್ಐಆರ್‌ ದಾಖಲಾದ ಅನಂತರ ಈ ಪ್ರಕರಣದ ತನಿಖೆಯನ್ನು ಪಂಜಾಬ್‌ ಪೊಲೀಸ್‌ನ ಭ್ರಷ್ಟಾಚಾರ ನಿಗ್ರಹ ದಳ ಕೈಗೆತ್ತಿಕೊಂಡಿತು. ಅದರ ಬೆನ್ನಲ್ಲೇ ಸಿಂಗ್ಲಾ ಅವರನ್ನು ಬಂಧಿಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next