Advertisement

ಪುಣೆ ಕನ್ನಡ ಸಂಘದ ವತಿಯಿಂದ ಹಾಸ್ಯ ಕವಿ ಸಮ್ಮೇಳನ

04:40 PM Nov 27, 2018 | Team Udayavani |

ಪುಣೆ: ಕವನ ಹೃದಯದಲ್ಲಿ ಹುಟ್ಟುತ್ತದೆ. ಬುದ್ಧಿ ಅದನ್ನು ಕಟ್ಟುತ್ತದೆ. ಕವನಗಳು ಹೃದಯದ ಭಾವನೆಗಳ ತರಂಗಗಳನ್ನು ಎಬ್ಬಿಸುವಂತಿರಬೇಕು. ವಿವಿಧ ಯೋಚನಾಲಹರಿಯನ್ನು ಎಬ್ಬಿಸಿ ಮನಸ್ಸಿಗೆ ಮುದ ನೀಡುವಂತಿರ ಬೇಕು. ಭಾವನೆಗಳ ಉತ್ಕಟತೆ ಇಲ್ಲದಿದ್ದರೆ ಕವನಕ್ಕೆ ಅರ್ಥವಿಲ್ಲ.  ಕವನದಲ್ಲಿ ಪ್ರಾಸ, ಲಯ, ತಾಳ ಇದ್ದರೆ ಇನ್ನಷ್ಟು ಆಕರ್ಷಕವಾಗಿ ಮೂಡಿಬರುತ್ತದೆ. ಅದರಲ್ಲಿಯೂ ಹಾಸ್ಯಕವನಗಳು ಹಾಸ್ಯಪ್ರಜ್ಞೆಯನ್ನು ಮನಸ್ಸಿಗೆ ಮೂಡಿಸುವುದಲ್ಲದೆ ಮಾನ ಸಿಕ ಋಣಾತ್ಮಕ ಭಾವನೆಗಳನ್ನು ದೂರ ಮಾಡುತ್ತದೆ. ಸಮಕಾಲೀನ ಜಗತ್ತಿನಲ್ಲಿ ಸಮಾಜದಲ್ಲಿರುವ ಆಚಾರ, ವಿಚಾರ, ಸಂಪ್ರದಾಯಗಳನ್ನು ಸ್ವಂತ ದೃಷ್ಟಿ ಯಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ ಅದರಲ್ಲಿರುವ ಲೋಪದೋಷಗಳನ್ನು ಗುರುತಿಸಿ ನಮ್ಮಲ್ಲಿರುವ  ಸೃಜನ ಶೀಲತೆಯ ಸಹಾಯದಿಂದ, ಅನುಭವದ ಸಹಾಯದಿಂದ ಕಲಾತ್ಮಕವಾಗಿ ಅಭಿವ್ಯಕ್ತಿಗೊಳಿಸುವ ಶಕ್ತ ಮಾಧ್ಯಮವೇ ಕವನ ಎಂದು ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ, ಕವಯಿತ್ರಿ ಇಂದಿರಾ ಸಾಲ್ಯಾನ್‌ ಅಭಿಪ್ರಾಯಪಟ್ಟರು.

Advertisement

ಅವರು ನ. 24ರಂದು ಪುಣೆ ಕನ್ನಡ ಸಂಘದ ಡಾ| ಶ್ಯಾಮರಾವ್‌ ಕಲ್ಮಾಡಿ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ ನಡೆದ ಪುಣೆ ಕನ್ನಡ ಸಂಘದಿಂದ ಆಯೋಜಿಸಿದ ಹತ್ತನೇ ವಾರ್ಷಿಕ  ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡಾಂಬೆಯ ಅಳಿಲ ಸೇವೆಯನ್ನು ಸಲ್ಲಿಸುವ ಪ್ರಯತ್ನ ನಮ್ಮದಾಗಿದ್ದು,  ಪುಣೆ ಕನ್ನಡ ಸಂಘದ ಉದ್ದೇಶವೂ ಇದೆ ಆಗಿದೆ. ಕನ್ನಡ ಭಾಷೆಯನ್ನೂ ಉಳಿಸುವ, ಬೆಳೆಸುವ, ಮೆರೆಸುವ ಕಾರ್ಯವನ್ನು ಕನ್ನಡ ಸಂಘ ಮಾಡುತ್ತಾ ಬಂದಿದ್ದು ಅದಕ್ಕಾಗಿ ಸಾಹಿತ್ಯಪರ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ನುಡಿದು, ದೋಸೆ ಎಂಬ ಸ್ವರಚಿತ ಕವನವನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.

ಕನ್ನಡ ಮಾಧ್ಯಮ ಹೈಸ್ಕೂಲ್‌ ಮುಖ್ಯೋಪಾಧ್ಯಾಯ ಚಂದ್ರಕಾಂತ ಹಾರಕೂಡೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡಿಗರ ಹಿತದೃಷ್ಟಿಯನ್ನಿಟ್ಟುಕೊಂಡು  ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ  ಪುಣೆ ಕನ್ನಡ ಸಂಘದ ವತಿಯಿಂದ ನಿರಂತರವಾಗಿ ಇದೀಗ ಹತ್ತನೇ ವಾರ್ಷಿಕ ಕವಿ ಸಮ್ಮೇಳನವನ್ನು ಆಯೋಜಿಸುತ್ತಿದ್ದೇವೆ. ವರ್ಷವಿಡೀ ಹತ್ತು ಹಲವು ಕನ್ನಡಪರ ಚಟುವಟಿಕೆಗಳು ಕನ್ನಡ ಸಂಘದಿಂದ ನಡೆಯುತ್ತಾ ಇದೆ. ಅಂತೆಯೇ ನವೆಂಬರ್‌ ಪೂರ್ಣ ತಿಂಗಳು ಕನ್ನಡ ರಾಜ್ಯೋತ್ಸವದಂಗವಾಗಿ ಕನ್ನಡಪರ ಕಾರ್ಯಕ್ರಮಗಳನ್ನು  ಅಯೋಜಿಸುತ್ತಿದ್ದು ಕವಿ ಸಮ್ಮೇಳನವನ್ನೂ ಆಚರಿಸುತ್ತಿದ್ದೇವೆ. ಇಂದು ಈ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ ಕವಿವರ್ಯರೆಲ್ಲರಿಗೂ ಶುಭಾಶಯಗಳು ಎಂದರು.

ಪುಣೆಯ ಕವಿಗಳಾದ ಕೃ. ಶಿ. ಹೆಗಡೆ,  ಕೃಷ್ಣ ಇತ್ನಾಳ್‌, ಪಾಂಗಾಳ ವಿಶ್ವನಾಥ ಶೆಟ್ಟಿ, ಪೊಳಲಿ ಮಹೇಶ್‌ ಹೆಗ್ಡೆ, ಕಿರಣ್‌ ಬಿ. ರೈ ಕರ್ನೂರು, ಜ್ಯೋತಿ ಕಡಕೊಳ್‌, ರವೀಶ್‌ ನಂಜುಂಡಯ್ಯ, ಸದಾನಂದ ಬಿಳ್ಳೂರ್‌, ಮಮತಾ ಅಂಚನ್‌, ಹೇಮಾ ಎ. ಭಟ್‌ ಮದಂಗಲ್ಲು, ಸುಭಾಶ್ಚಂದ್ರ ಸಕ್ರೋಜಿ, ಅನ್ನಪೂರ್ಣ ಸಕ್ರೋಜಿ ಹಾಗೂ ವಿಕೇಶ್‌ ರೈ ಶೇಣಿ ಅವರು ಕವನ ವಾಚಿಸಿದರು. ಮೊದಲಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕವಿಗಳನ್ನು ಸಂಘದ ವತಿಯಿಂದ ಸತ್ಕರಿಸಲಾಯಿತು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕವಿಗಳ ಪರಿಚಯವನ್ನು ಮಾಡಿಕೊಟ್ಟರು.  ಶಿಕ್ಷಕಿ ಶೋಭಾ ಪಂಚಾಂಗಮಠ ಕಾರ್ಯಕ್ರಮ ನಿರೂಪಿಸಿ ಶಿಕ್ಷಕ ಟಿ. ವಿ. ಸದಾನಂದ ವಂದಿಸಿದರು. ಕಾರ್ಯಕ್ರಮದಲ್ಲಿ ಪುಣೆ ಕನ್ನಡ ಸಂಘದ ವಿಶ್ವಸ್ಥರಾದ ಡಾ| ಬಾಲಾಜಿತ್‌ ಶೆಟ್ಟಿ, ಜನಸಂಪರ್ಕಾಧಿಕಾರಿ ರಾಮದಾಸ ಆಚಾರ್ಯ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಪ್ರೇಮಿಗಳು ಉಪಸ್ಥಿತರಿದ್ದರು. 

Advertisement

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next