Advertisement

ಪಿಯುಸಿ ಪಾಸಾದ ಮಕ್ಕಳ ಭವಿಷ್ಯಕ್ಕೆ ಸಿಗಲಿ ಭದ್ರ ಬುನಾದಿ

01:51 AM Jul 21, 2021 | Team Udayavani |

ಬಹು ನಿರೀಕ್ಷೆಯ ಪಿಯುಸಿ ಫ‌ಲಿತಾಂಶ ಹೊರಬಿದ್ದಿದ್ದು, ಎಲ್ಲ ಮಕ್ಕಳು ಪಾಸಾಗಿದ್ದಾರೆ. ಕೊರೊನಾದಿಂದಾಗಿ ಎಲ್ಲರನ್ನೂ
ಪಾಸು ಮಾಡುವ ನಿರ್ಧಾರವನ್ನು ರಾಜ್ಯ ಸರಕಾರ‌ ತೆಗೆದುಕೊಂಡಿದೆ. ಈ ಬಾರಿ 5.90 ಲಕ್ಷ ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 3.35 ಲಕ್ಷ ಬಾಲಕರು ಮತ್ತು 3.31 ಲಕ್ಷ ಬಾಲಕಿಯರಿದ್ದಾರೆ. 1,95,650 ಮಕ್ಕಳು ಡಿಸ್ಟಿಂಕ್ಷ ನ್‌ ನಲ್ಲಿ ಪಾಸಾಗಿದ್ದಾರೆ. 1,47,055 ಮಕ್ಕಳು ದ್ವಿತೀಯ ದರ್ಜೆಯಲ್ಲಿ ಮತ್ತು 6,872 ಮಕ್ಕಳು ಜಸ್ಟ್‌ ಪಾಸಾಗಿದ್ದಾರೆ.

Advertisement

ಇನ್ನು ವಿಭಾಗವಾರು ಲೆಕ್ಕಾಚಾರದಲ್ಲಿ ಹೇಳುವುದಾದರೆ ವಾಣಿಜ್ಯ ವಿಭಾಗದಲ್ಲಿ 2,51,686 ಮಕ್ಕಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2,19,783 ಮಕ್ಕಳು ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ 1,53,346 ಮಕ್ಕಳು ಮುಂದಿನ ತರಗತಿಗೆ ತೇರ್ಗಡೆ ಹೊಂದಿದ್ದಾರೆ.

ಕೊರೊನಾದಿಂದಾಗಿ ಈ ಬಾರಿ 10ನೇ ತರಗತಿ ಮತ್ತು ಪ್ರಥಮ ಪಿಯುಸಿಯ ಅಂಕಗಳನ್ನು ಪರಿಗಣಿಸಿ ವಿಶೇಷವಾಗಿ
ಫ‌ಲಿತಾಂಶ ನೀಡಲಾಗಿದೆ. ಈ ಎರಡು ತರಗತಿಯಿಂದ ತಲಾ ಶೇ.45 ಮತ್ತು ದ್ವಿತೀಯ ಪಿಯುಸಿ ಇಂಟರ್ನಲ್ಸ್‌ ನಿಂದ ಶೇ.10ರಷ್ಟನ್ನು ತೆಗೆದುಕೊಳ್ಳಲಾಗಿದೆ.

ಹಿಂದೆ ದ್ವಿ. ಪಿಯುಸಿಯಲ್ಲಿ ಶೇ.60ರ ಸುಮಾರಿಗೆ ಫ‌ಲಿತಾಂಶ ಬರುತ್ತಿತ್ತು. ಕಳೆದ ವರ್ಷ ಶೇ.69.20ರಷ್ಟು ಮಕ್ಕಳು ತೇರ್ಗಡೆಯಾಗಿದ್ದರು. ಆದರೆ ಈ ಬಾರಿ ವಿದ್ಯಾರ್ಥಿಗಳ ಹಿಂದಿನ ಸಾಧನೆಗಳನ್ನೂ ಪರಿಗಣಿಸಿ ಪರೀಕ್ಷೆ ಇಲ್ಲದೆ ಫ‌ಲಿತಾಂಶ ನೀಡಿರುವುದರಿಂದ 100ಕ್ಕೆ 100 ಮಂದಿಯೂ ಪಾಸಾಗಿದ್ದಾರೆ. ಜತೆಗೆ ಈ ಹಿಂದೆ ಫೇಲಾಗಿದ್ದ ರಿಪೀಟರ್ಸ್‌ ಕೂಡ ಈ ಬಾರಿ ಎಲ್ಲರೂ ಪಾಸಾಗಿದ್ದಾರೆ. ಇವರಿಗೆ ಪದವಿ ಸೇರಿದಂತೆ ಉನ್ನತ ಶಿಕ್ಷಣದ ಸೌಲಭ್ಯ ಒದಗಿಸಿಕೊಡುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ.

ಈ ಹಿಂದೆ ದ್ವಿತೀಯ ಪಿಯುಸಿಯಲ್ಲಿ ಫೇಲಾದ ಅದೆಷ್ಟೋ ಮಕ್ಕಳು ಮುಂದಿನ ತರಗತಿಗೆ ಹೋಗುತ್ತಿರಲಿಲ್ಲ. ಹಾಗೆಯೇ ಒಂದೇ ಬಾರಿಗೆ ಈ ಪ್ರಮಾಣದ ಮಕ್ಕಳೂ ಪಾಸಾಗಿ ಹೊರಬರುತ್ತಿರಲಿಲ್ಲ. ಹೀಗಾಗಿ ಸಹಜವಾಗಿಯೇ ಪದವಿ ಕಾಲೇಜುಗಳ ಮೇಲೆ ಒತ್ತಡವಿದೆ. ಒಂದು ಉದಾಹರಣೆಯಾಗಿ ಹೇಳುವುದಾದರೆ, ಗುಜರಾತ್‌ನಲ್ಲಿ 10ನೇ ತರಗತಿಯ ಎಲ್ಲ ಮಕ್ಕಳನ್ನು ಪಾಸ್‌ ಮಾಡಲಾಗಿದ್ದು, ಅಲ್ಲೀಗ 11ನೇ ತರಗತಿಗೆ ಸೇರಿಸಲು ಕಾಲೇಜುಗಳ ಕೊರತೆ ಎದುರಾಗಿದೆ. ಇಂಥ ಪರಿಸ್ಥಿತಿ ಕರ್ನಾಟಕದಲ್ಲಿ ಆಗದಂತೆ ನೋಡಿಕೊಳ್ಳುವುದು ಅತ್ಯವಶ್ಯಕ.

Advertisement

ಸದ್ಯ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಹೆಚ್ಚು ಮಕ್ಕಳು ಪಾಸಾಗಿದ್ದಾರೆ. ಈ ಎಲ್ಲ ಮಕ್ಕಳಿಗೆ ಪದವಿ ಕಾಲೇಜುಗಳಲ್ಲಿ ಸ್ಥಳಾವಕಾಶ ನೀಡಬೇಕು. ಸದ್ಯ ರಾಜ್ಯದಲ್ಲಿ ಎಷ್ಟು ಕಾಲೇಜುಗಳಿವೆ? ಈ ಎಲ್ಲ ಮಕ್ಕಳಿಗೆ ಸೀಟು ನೀಡಲು ಸಾಧ್ಯವೇ? ನೀಡುವುದೇ ಆದರೆ ಮಕ್ಕಳು ಮತ್ತು ಉಪನ್ಯಾಸಕರ ಅನುಪಾತ ಎಷ್ಟಿದೆ? ಉಪನ್ಯಾಸಕರ ಕೊರತೆ ಇದ್ದರೆ ಅತಿಥಿ ಉಪನ್ಯಾಸಕರ ನೇಮಕ ಮಾಡಬಹುದೇ ಎಂಬಿತ್ಯಾದಿ ಸಂಗತಿಗಳ ಬಗ್ಗೆ ರಾಜ್ಯ ಸರಕಾರ‌ ಈಗಲೇ ಚಿಂತನೆ ನಡೆಸಬೇಕು. ಜತೆಗೆ ಈಗ ಪಾಸಾಗಿರುವ ಎಲ್ಲರಿಗೂ ಖಾಸಗಿ ಕಾಲೇಜುಗಳಲ್ಲಿ ಸೇರುವ ಶಕ್ತಿ ಇಲ್ಲದೇ ಇರಬಹುದು. ಹಾಗಾಗಿ ಸರಕಾರಿ ಕಾಲೇಜುಗಳಲ್ಲಿನ ಮೂಲ ಸೌಕರ್ಯವನ್ನು ಹೆಚ್ಚಿಸಲು ಮುಂದಾಗಬೇಕು. ಆಗಷ್ಟೇ ಈ ಮಕ್ಕಳಿಗೆ ಉತ್ತಮವಾದ ಉನ್ನತ ಶಿಕ್ಷಣ ಸಿಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next