ದೇವನಹಳ್ಳಿ: ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿ ಹಾಗೂ ದೈಹಿಕವಾಗಿ ಸದೃಢವಾಗಿರಲು ದೇಶೀಯ ಕ್ರೀಡೆಗಳು ತುಂಬ ಸಹಕಾರಿಯಾಗಿವೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಮಾನಸಿಕ ಬೆಳವಣಿಗೆ ವೃದ್ಧಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ ತಿಳಿಸಿದರು. ನಗರದ ಟಿಪ್ಪು ಸುಲ್ತಾನ್ ಜನ್ಮಸ್ಥಳ ರಸ್ತೆಯಲ್ಲಿರುವ ನ್ಯೂ ಶಾರದಾ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳಿಗೆ ದೇಶೀಯ ಆಟಗಳ ಪರಿಚಯ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಿಯ ಆಟಗಳು ಅವಸಾನದ ಅಂಚಿನಲ್ಲಿವೆ. ಮನರಂಜನೆ ಜೊತೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಜ್ಞಾನಾರ್ಜನೆಗೆ ಮಾಹಿತಿ ನೀಡುವ ಶಿಕ್ಷಕರು ಇಂತಹ ಕಾರ್ಯಕ್ರಮ ಆಯೋಜಿಸಿದರೆ ಮಕ್ಕಳಿಗೆ ವಾಸ್ತವ ತಿಳಿದು ಅವರಲ್ಲಿ ದೇಶಿ ಕ್ರೀಡೆಗಳ ಬಗ್ಗೆ ಪರಿಚಯಿಸುವಂತೆ ಆಗುತ್ತದೆ. ಕಲಿಕೆ ಎಂಬುವುದು ಸರಳ ವಿಧಾನದಲ್ಲಿ ಒತ್ತಡ ಮತ್ತು ಹೊರೆಯಾಗದ ರೀತಿಯಲ್ಲಿ ಮಕ್ಕಳಲ್ಲಿ ಪ್ರೇರೇಪಣೆ ಮಾಡುವಂತೆ ಆಗಬೇಕು ಎಂದು ಹೇಳಿದರು.
ಶಿಕ್ಷಣ ಇಲಾಖೆ ಅಕ್ಷರದಾಸೋಹ ಮೇಲ್ವಿಚಾರಕ ರಿಯಾಜ್ ಮಾತನಾಡಿ, ಶಿಕ್ಷಣ ಇಲಾಖೆ ಸೋಮವರಾದಿಂದ ಶುಕ್ರವಾರದ ವರೆಗೆ ದಿನನಿತ್ಯದ ವೇಳಾಪಟ್ಟಿಯಂತೆ ಮಾತ್ರ ಮಕ್ಕಳು ಪುಸ್ತಕಗಳನ್ನು ತೆಗೆದುಕೊಂಡು ಬರಬೇಕು. ಪ್ರತಿ ಶನಿವಾರ ಬ್ಯಾಗ್ ರಹಿತವಾಗಿ ಮಕ್ಕಳು ಶಾಲೆಗೆ ಬರಬೇಕಾಗುತ್ತದೆ. ಪೂರ್ಣ ದಿನ ಪಠ್ಯೇತರ ಚಟುವಟಿಕೆಗೆ ಮೀಸಲಾಗಬೇಕು.
ಉದಾಹರಣೆಗೆ ದೇಶೀಯ ಆಟಗಳಿಂದ ಮಕ್ಕಳನ್ನು ಮೊಬೈಲ್ ವ್ಯಾಮೋಹದಿಂದ ದೂರವಿಡಲು ಸಹಕಾರಿಯಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ದೇಶಿಯ ಆಟಗಳ ಬಗ್ಗೆ ಆಗಾಗ ತಿಳಿಸಿಕೊಡುವ ಕೆಲಸ ಮಾಡುವಂತೆ ಆಗಬೇಕು ಎಂದರು. ಮುಖ್ಯ ಶಿಕ್ಷಕಿ ಪುಷ್ಪಾಂಜಲಿ ಮಾತನಾಡಿ, ದೇಶೀಯ ಅನೇಕ ಗ್ರಾಮೀಣ ಆಟಗಳ ಹೆಸರುಗಳನ್ನು ಮರೆಯುತ್ತಿದ್ದೇವೆ. ಮೊದಲೆಲ್ಲ ದೇಶಿಯ ಆಟಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು.
ಇದರಿಂದ ಅವರ ಜ್ಞಾನಾರ್ಜನೆ ಗಟ್ಟಿಗೊಳ್ಳುವುದರ ಜೊತೆಗೆ ದೆ„ಹಿಕವಾಗಿ ಸದೃಢರಾಗಿರುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಮೊಬೆ„ಲ್, ಟಿವಿ ವ್ಯಾಮೋಹದಿಂದ ಮಕ್ಕಳು ದೆ„ಹಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆಗಳನ್ನು ಅನುಭವಿಸುವ ಸ್ಥಿತಿಗೆ ಬಂದೊದಗಿದೆ. ಇಂತಹ ಸ್ಥಿತಿಯಲ್ಲಿ ನಮ್ಮ ಮಕ್ಕಳು ಇರಬಾರದೆಂದು ದೇಶಿಯ ಆಟಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಸವಿತಾ ನಟರಾಜ್, ಕಾರ್ಯದರ್ಶಿ ವಿನಯ್, ಸಿಆರ್ಪಿ ಗಜೇಂದ್ರ, ಶಿಕ್ಷಕರಾದ ಗುರುಪ್ರಸಾದ್, ವೆಂಕಟಾಚಲ ಇದ್ದರು.