ಹಾಸನ: ಚನ್ನರಾಯಪಟ್ಟಣ ನಗರ ಠಾಣೆ ಸಬ್ಇನ್ಸ್ಪೆಕ್ಟರ್ ಎಲ್.ಎನ್.ಕಿರಣ್ಕುಮಾರ್ ಅವರ ಆತ್ಮಹತ್ಯೆ ತನಿಖೆಯನ್ನು ಉನ್ನತ ಮಟ್ಟದ ಸಂಸ್ಥೆಗೆ ವಹಿಸಿ ಸತ್ಯಾಂಶ ಬಹಿರಂಗ ಪಡಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಧಿಕಾರಿಗಳು ಯಾವ ಪ್ರಮಾಣದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಪಿಎಸ್ಐ ಕಿರಣ್ ಕುಮಾರ್ ಅವರ ಆತ್ಮಹತ್ಯೆಯು ಸ್ಪಷ್ಟ ನಿದರ್ಶನವಾಗಿದೆ. ರಾಜಕೀಯ, ಹಿರಿಯ ಅಧಿಕಾರಿಗಳು ಅಥವಾ ಕೆಲಸದ ಒತ್ತಡದಿಂದ ಕಿರಣ್ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಒತ್ತಡ ದಿಂದ ಒಬ್ಬ ಅಧಿಕಾರಿಯ ಜೀವ ಹೋಗಿರು ವುದು ಸ್ಪಷ್ಟ ಎಂದರು.
ಸತ್ಯಾಂಶ ಹೊರ ಬರಲಿ: ಜಿಲ್ಲೆಯಲ್ಲಿ ಕೆಳಹಂತದಿಂದ ಮೇಲ್ಮಟ್ಟದವರೆಗೂ ನೌಕರರು, ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡು ತ್ತಿರುವುದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಕಿರಣ್ಕುಮಾರ್ ಆತ್ಮಹತ್ಯೆಯನ್ನು ಸರ್ಕಾರ ಹಗುರವಾಗಿ ಪರಿಗಣಿಸಬಾರದು. ನಿಷ್ಪಕ್ಷಪಾತ ವಾಗಿ ತನಿಖೆ ಮಾಡಿಸಿ ಸತ್ಯಾಂಶ ಹೊರ ತೆಗೆಯಬೇಕು ಎಂದು ಆಗ್ರಹಪಡಿಸಿದರು.
ಕಾರ್ಯಕರ್ತರ ಆರ್ಭಟ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜೆ.ಸಿ. ಮಾಧುಸ್ವಾಮಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ 10 ತಿಂಗಳಿದ್ದರು. ಅವರು ಜನಪ್ರತಿನಿಧಿಗಳಿಗೆ ಹಾಗೂ ಜನರಿಗೆ ಸ್ಪಂದಿಸುತ್ತಿದ್ದರು. ಕಳೆದ 2 ತಿಂಗಳ ಹಿಂದೆ ಕೆ.ಗೋಪಾಲಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ನಂತರ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಆರ್ಭಟ ಜಾಸ್ತಿಯಾಗಿದೆ ಎಂದ ದೂರಿದರು.
ಚಿಕಿತ್ಸೆ ಸಿಗದೆ ಪರದಾಟ: ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪರದಾಡು ತ್ತಿದ್ದಾರೆ. ನನ್ನ ವಿಧಾನ ಸಭಾ ಕ್ಷೇತ್ರದ ಆಲೂರಿನ ರೋಗಿಯೊಬ್ಬ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ದಿನಕ್ಕೆ 40 ಸಾವಿರ ರೂ. ನೀಡಲಾಗಿದೆ. ಹೀಗಾದರೆ ಜನಸಾಮಾನ್ಯರ ಗತಿಯೇನು? ಇದೇನಾ ಜನಪರ ಆಡಳಿತ ಎಂದು ಆತಂಕ ವ್ಯಕ್ತಪಡಿಸಿದರು.
ಪಠ್ಯ ಕೈಬಿಟ್ಟಿರುವುದು ಸರಿಯಲ್ಲ: ಮಹಾಪುರುಷರಾದ ಯೇಸು, ಬುದ್ಧ, ಟಿಪ್ಪು ಸುಲ್ತಾನ್ ಮತ್ತಿತರರ ಜೀವನ ಚರಿತ್ರೆ, ಹೋರಾಟ ಸಂದೇಶಗಳನ್ನು ಶಾಲಾ ಪಠ್ಯಗಳಿಂದ ಕಿತ್ತು ಹಾಕಿದ್ದಾರೆ. ಹಿಂದುಳಿದ ವರ್ಗದವರಿಗೆ ಬೇಜಾರಾಗಬಾರದು ಎಂದು ಸಂಗೋಳ್ಳಿ ರಾಯಣ್ಣನವರ ಸ್ಪಲ್ಪಭಾಗ ಸೇರಿ ಸಿದ್ದಾರೆ. ಶೇ.30 ಭಾಗ ಪಠ್ಯ ತೆಗೆಯಬೇಕು ಎಂದರೇ ಮಹಾಪುರುಷರ ವಿಷಯವನ್ನೇ ಪಠ್ಯದಿಂದ ತೆಗೆಯಬೇಕಾಗಿತ್ತಾ? ಗಣಿತ, ವಿಜ್ಞಾನದಲ್ಲಿ ಕೆಲವು ಅಂಶಗಳನ್ನು ಕಡಿಮೆ ಮಾಡಲಿ, ಮಹಾನೀಯರ ಪಠ್ಯ ಕೈಬಿಟ್ಟಿರು ವುದು ಸರಿಯಲ್ಲ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಒಬ್ಬ ಬುದ್ಧಿವಂತ ಹಾಗೂ ಉದಾರಿ ಸಚಿವರಾಗಿದ್ದು, ಅವರು ಕೂಡ ಒತ್ತಡಕ್ಕೆ ಒಳಗಾಗಿರಬಹುದು ಎಂದು ಹೇಳಿದರು.
ಜಿಲ್ಲಾ ಜೆಡಿಎಸ್ ವಕ್ತಾರ ಎಚ್.ಎಸ್. ರಘು, ಹಾಸನ ತಾಲೂಕು ಜೆಎಡಿಎಸ್ ಅಧ್ಯಕ್ಷ ಎಸ್. ದ್ಯಾವೇಗೌಡ ಇದ್ದರು.