Advertisement

ಪಿಎಸ್‌ಐ ನೇಮಕಾತಿ ಅಕ್ರಮ: ಎಡಿಜಿಪಿ ಅಮೃತ್‌ ಪೌಲ್‌ ವಿಚಾರಣೆ

10:15 PM May 26, 2022 | Team Udayavani |

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತನಿಖಾ ತಂಡ ಗುರುವಾರ ಪ್ರಕರಣದ ರೂವಾರಿ ಎಂದು ಹೇಳಲಾಗಿರುವ ನೇಮಕಾತಿ ವಿಭಾಗದ ಈ ಹಿಂದಿನ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಮೃತ್‌ಪೌಲ್‌ ಅವರನ್ನು ವಿಚಾರಣೆ ನಡೆಸಿದೆ.

Advertisement

ಬೆಳಗ್ಗೆ 11 ಗಂಟೆಗೆ ಅರಮನೆ ರಸ್ತೆಯಲ್ಲಿರುವ ಕಾರ್ಲಟನ್‌ ಹೌಸ್‌ನಲ್ಲಿರುವ ಸಿಐಡಿ ಕಚೇರಿಗೆ ಆಗಮಿಸಿದ ಅಮೃತ್‌ ಪೌಲ್‌ ಅವರನ್ನು ಸಿಐಡಿ ಎಡಿಜಿಪಿ ಉಮೇಶ್‌ ಕುಮಾರ್‌ ಮತ್ತು ತಂಡ ಸಂಜೆ ನಾಲ್ಕು ಗಂಟೆವರೆಗೆ ವಿಚಾರಣೆ ನಡೆಸಿದೆ.

ಈ ವೇಳೆ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರೂ ಅಕ್ರಮ ನೇಮಕಾತಿ ತಮ್ಮ ಗಮನಕ್ಕೆ ಬಂದಿರಲಿಲ್ಲವೇ? ಡಿವೈಎಸ್ಪಿ ಶಾಂತಕುಮಾರ್‌ ತನ್ನ ಕೆಳಗಿನ ಸಿಬಂದಿಯನ್ನು ಅಕ್ರಮದಲ್ಲಿ ಸೇರಿಸಿಕೊಂಡು ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದ ಬಗ್ಗೆ ಮಾಹಿತಿ ಇರಲಿಲ್ಲವೇ? ಕಲಬುರಗಿಯಲ್ಲಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ದೂರು ಬಂದಿದ್ದರೂ ಯಾಕೆ ಕ್ರಮ  ಕೈಗೊಳ್ಳಲಿಲ್ಲ? ಶಾಂತಕುಮಾರ್‌ ನಡೆಸಿದ ಅಕ್ರಮದಲ್ಲಿ ತಮಗೂ ಪಾಲು ಸಿಕ್ಕಿದೆ ಎನ್ನಲಾಗಿದೆ ಎಂಬ ಬಗ್ಗೆ ನಿಮ್ಮ ಅಭಿಪ್ರಾಯವೇನು ಮುಂತಾದ  50ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿವೈಎಸ್ಪಿ  ಶಾಂತಕುಮಾರ್‌ ಹೇಳಿಕೆ ಮೇರೆಗೆ ಅಮೃತ್‌ಪೌಲ್‌ಗೆ ನೋಟಿಸ್‌ ನೀಡಲಾಗಿತ್ತು.  ಅಗತ್ಯಬಿದ್ದಲ್ಲಿ ಮತ್ತೂಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದುಮೂಲಗಳು ತಿಳಿಸಿವೆ.

ಇನ್ನು ಕೆಲವೊಂದು ಪ್ರಶ್ನೆಗಳಿಗೆ ಗೊಂದಲದ ಉತ್ತರ ನೀಡಿರುವ ಅಮೃತ್‌ಪೌಲ್‌, ಕೆಲ ಪ್ರಶ್ನೆಗಳಿಗೆ ಮಾಹಿತಿ ಇಲ್ಲ ಎಂದಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next