Advertisement
ಆದರೆ ಕೋವಿಡ್-19 ಹಾಟ್ಸ್ಪಾಟ್ ಹೊಂದಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಯಥಾಪ್ರಕಾರ ಮುಂದುವರಿ ಯಲಿದೆ. ಅಂದರೆ ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಈ ಹಿಂದಿನ ಆದೇಶವೇ ಊರ್ಜಿತದಲ್ಲಿ ಇರಲಿದೆ.
Related Articles
ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ತಾಲೂಕುಗಳಲ್ಲಿ ವಾಣಿಜ್ಯ ಚಟುವಟಿಕೆ ಆರಂಭ ಮಾಡುವ ತೀರ್ಮಾನವನ್ನು ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತಗಳ ತೀರ್ಮಾನಕ್ಕೆ ಬಿಡಲಾಗಿದೆ.
Advertisement
ರಾಮನಗರದಲ್ಲಿ ನಿಗಾಹಸುರು ವಲಯದಲ್ಲಿದ್ದರೂ ರಾಮನಗರ ಜಿಲ್ಲೆಗೆ ಸಡಿಲಿಕೆ ಪೂರ್ಣ ಅನ್ವಯ ಇಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ರಾಮನಗರ ಜಿಲ್ಲೆಯು ಕೋವಿಡ್-19 ತೀವ್ರಗತಿಯಲ್ಲಿರುವ ಬೆಂಗಳೂರಿಗೆ ಹತ್ತಿರ ಇರುವ ಕಾರಣ ಇನ್ನೂ ನಿಗಾ ವಹಿಸಬೇಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಡಿಲಿಕೆ ಮಾಡಿಲ್ಲ, ಪರಿಸ್ಥಿತಿ ಸುಧಾರಿಸಿದ ಅನಂತರ ಪರಿಶೀಲಿಸಲಾಗುವುದು ಎಂದಿದ್ದಾರೆ. ಯಾವ ಜಿಲ್ಲೆಗಳಿಗೆ ಸಡಿಲಿಕೆ?
ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಚಾಮರಾಜನಗರ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ರಾಮನಗರ, ಶಿವಮೊಗ್ಗ, ಹಾವೇರಿ, ಯಾದಗಿರಿ, ಕೋಲಾರ, ದಾವಣಗೆರೆ ಜಿಲ್ಲೆಗಳು.ರಾಮನಗರ ಜಿಲ್ಲೆಯಲ್ಲಿ ಕೈಗಾರಿಕೆ ಬಿಟ್ಟು ಇನ್ನುಳಿದ ವಿನಾಯಿತಿ ಇರಲಿದೆ. ಜುಲೈ ಅಂತ್ಯದವರೆಗೂ ಮನೆಯಿಂದಲೇ ಕೆಲಸ
ಐಟಿ ನೌಕರರು ಜು.31ರ ವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಲಾಕ್ಡೌನ್ ನಿರ್ಬಂಧದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ಎಲ್ಲ ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರ ಜತೆ ನಡೆಸಿದ ವೀಡಿಯೋ ಕಾನ್ಫರೆನ್ಸ್ನಲ್ಲಿ ಕೇಂದ್ರ ಐಟಿ ಮತ್ತು ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ಈ ವಿಷಯ ಪ್ರಕಟಿಸಿದ್ದಾರೆ. ಉಡುಪಿಗೂ ಅರ್ಹತೆ:ಜಿಲ್ಲಾಧಿಕಾರಿ ಜಗದೀಶ್
ಹಸುರು ವಲಯಕ್ಕೆ ಸೇರ್ಪಡೆಗೊಳ್ಳುವ ಅರ್ಹತೆಯನ್ನು ಆಧರಿಸಿ ರಾಜ್ಯ ಸರಕಾರ ಉಡುಪಿಗೂ ವಿನಾಯಿತಿ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಿಸಿದ್ದಾರೆ. ಹಸುರು ವಲಯಕ್ಕೆ ಅನ್ವಯಿಸುವ ನಿರ್ಬಂಧಗಳೊಂದಿಗೆ ವಾಣಿಜ್ಯ, ಕೈಗಾರಿಕೆ ಚಟುವಟಿಕೆ ಆರಂಭಗೊಳ್ಳಲಿವೆ. ಆದರೆ ಲಾಕ್ಡೌನ್ ಮೇ 3ರ ವರೆಗೆ ಮುಂದುವರಿಯಲಿದೆ ಎಂದವರು ಹೇಳಿದ್ದಾರೆ. ಎಲ್ಲೆಲ್ಲಿ
ಏನೆಲ್ಲ ಸಡಿಲಿಕೆ?
ಹಸುರು ವಲಯದ 14 ಜಿಲ್ಲೆ
(ರಾಮನಗರ ಬಿಟ್ಟು ) -ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಿಂದ ಹೊರಗೆ ಗ್ರಾಮೀಣ ಭಾಗದಲ್ಲಿ ಉತ್ಪಾದನ ಘಟಕ ಸಹಿತ ಕೈಗಾರಿಕೆಗಳ ಆರಂಭ; ಎಸ್ಇಝಡ್, ರಫ್ತು ವಲಯ, ಕೈಗಾರಿಕಾ ಪ್ರದೇಶಗಳಲ್ಲಿ ಚಟುವಟಿಕೆ ಪ್ರಾರಂಭ. -ಪಾಲಿಕೆ, ನಗರಸಭೆ , ಪುರಸಭೆ ವ್ಯಾಪ್ತಿಯಲ್ಲಿ ಸಿಂಗಲ್, ಮಲ್ಟಿ ಬ್ರ್ಯಾಂಡ್ ಮಾಲ್ ಹೊರತುಪಡಿಸಿದಂತೆ ಅಂಗಡಿ ಮುಂಗಟ್ಟು, ವಸತಿ ಸಂಕೀರ್ಣ ಮಳಿಗೆ, ಮಾರುಕಟ್ಟೆ ಸಂಕೀರ್ಣಗಳಲ್ಲಿನ ಮಳಿಗೆಗಳು. ಏನೆಲ್ಲ
ನಿಯಮ ಪಾಲನೆ?
-ಶೇ. 50 ಸಿಬಂದಿಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸಬಹುದು. -ಕಾರ್ಮಿಕರನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕು; ಊಟ, ವಸತಿ ವ್ಯವಸ್ಥೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ವ್ಯವಸ್ಥೆ ಮಾಡಬೇಕು. ಮಿತವ್ಯಯ ದಾರಿ
ಕೋವಿಡ್-19 ಸಂಕಟ ಮುಂದುವರಿಯುವ ಸಾಧ್ಯತೆ ಇರುವುದರಿಂದ ರಾಜ್ಯ ಸರಕಾರ ಮಿತವ್ಯಯದ ದಾರಿ ಹಿಡಿದಿದೆ.ಸಿಎಂ ಬಿಎಸ್ವೈ ಅವರು ಆರ್ಥಿಕ ಇಲಾಖೆ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದು, ಅನಗತ್ಯ ವೆಚ್ಚ ಕಡಿವಾಣಕ್ಕೆ ಸೂಚಿಸಿದ್ದಾರೆ. ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಕಟ್ಟಡ ನಿರ್ಮಾಣ, ದುರಸ್ತಿ, ಹೊಸ ವಾಹನ, ಪೀಠೊಪಕರಣ ಖರೀದಿ ಬೇಡ; ನಿಗಮ, ಮಂಡಳಿಗಳಿಗೆ ತೀರಾ ಅಗತ್ಯ ಇದ್ದರೆ ಮಾತ್ರ ಅನುದಾನ ಬಿಡುಗಡೆ ಸಹಿತ ಸಮಗ್ರ ಆರ್ಥಿಕ ಮಿತವ್ಯಯ ಕ್ರಮ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಸರಕಾರಿ ನೌಕರರ ವೇತನಕ್ಕೆ ಕತ್ತರಿ ಇಲ್ಲ
ರಾಜ್ಯ ಸರಕಾರಿ ನೌಕರರಿಗೆ ಎಪ್ರಿಲ್ ವೇತನದಲ್ಲಿ ಕಡಿತ ಮಾಡದಿರಲು ಸರಕಾರ ನಿರ್ಧರಿಸಿದ್ದು, ವೇತನ ಪಾವತಿಗೆ ಸಂಪನ್ಮೂಲ ಕ್ರೋಡೀಕರಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ನಾನಾ ಇಲಾಖೆಗಳಲ್ಲಿ ಬಳಕೆಯಾಗದ ಮತ್ತು ಸದ್ಯ ಬಳಕೆಗೆ ಅಗತ್ಯವಿಲ್ಲದ ಮೊತ್ತ ಕ್ರೋಡೀಕರಣದ ಮೂಲಕ ವೇತನ ಪಾವತಿಗೆ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.