Advertisement

ಬೀಜ-ಗೊಬ್ಬರ ಸಮರ್ಪಕವಾಗಿ ಪೂರೈಸಿ

04:16 PM May 23, 2022 | Team Udayavani |

ಗದಗ: ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು. ಬಿತ್ತನೆ ಬೀಜ, ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ, ರಸಗೊಬ್ಬರ, ಬಿತ್ತನೆ ಬೀಜ ಉತ್ಪಾದಕರು ಹಾಗೂ ಮಾರಾಟಗಾರ ರೊಂದಿಗೆ ಮುಂಗಾರು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಬೇಗನೆ ಆರಂಭವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಕೃಷಿ ಜಮೀನುಗಳಲ್ಲಿ ಬಿತ್ತನೆಗೆ ಬೇಕಾದಂತಹ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಸಮರ್ಪಕ ಪೂರೈಕೆಯಾಗುವಂತೆ ನಿಗಾ ವಹಿಸಬೇಕು. ಬಿತ್ತನೆ ಹಂಗಾಮು ಆರಂಭವಾದ ಹಿನ್ನೆಲೆಯಲ್ಲಿ ಪ್ರತಿನಿತ್ಯ ರೈತರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರು ರೈತ ಸಂಪರ್ಕ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಮತ್ತು ನಾಮಫಲಕದಲ್ಲಿ ನಮೋದಿಸಿರುವ ದರಗಳನ್ನು ಪರಿಶೀಲಿಸಬೇಕು. ರೈತರ ಅನುಕೂಲಕ್ಕಾಗಿ ರೈತ ಸಂಪರ್ಕ ಕೇಂದ್ರಗಳನ್ನು ಬೇಗನೆ ತೆರೆಯಬೇಕೆಂದು ಸೂಚನೆ ನೀಡಿದರು.

ಒಟ್ಟಾರೆ ಪ್ರಸಕ್ತ ಹಂಗಾಮಿನಲ್ಲಿ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ನಿಗಾ ವಹಿಸಿ ರೈತರಿಂದ ಯಾವುದೇ ದೂರುಗಳು ಬಾರದಂತೆ ಕ್ರಮ ವಹಿಸಲು ಸೂಚನೆ ನೀಡಿದ ಅವರು, ಇತ್ತೀಚೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಕೃಷಿ ಪ್ರದೇಶದ ಸಮೀಕ್ಷಾ ವರದಿ ನೀಡಲು ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲೆಗೆ ಸರಬರಾಜು ಆಗಬೇಕಾದ ರಸಗೊಬ್ಬರವನ್ನು ವಿಳಂಬವಾಗದಂತೆ ನಿಗದಿತ ಪ್ರಮಾಣದಲ್ಲಿ ವಿತರಿಸುವಂತೆ ಉತ್ಪಾದಕರಿಗೆ ಸೂಚಿಸಿದ ಅವರು, ರೈತರು ರಸಗೊಬ್ಬರ ಖರೀದಿಸುವ ಸಂದರ್ಭದಲ್ಲಿ ರೈತರಿಗೆ ಬೇಕಾದಂತಹ ರಸಗೊಬ್ಬರದ ಜೊತೆಗೆ ಮತ್ತೂಂದು ಕಂಪನಿಯ ರಸಗೊಬ್ಬರ ಖರೀದಿಸುವಂತೆ ಒತ್ತಡ ಹೇರದಂತೆ ಮಾರಾಟಗಾರಿಗೆ ಸೂಚಿಸಿದರು.

Advertisement

ರೈತರಿಗೆ ಬೇಕಾದಂತಹ ರಸಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಮೇಲೆ ಕ್ರಮ ಜರುಗಿಸಬೇಕು. ಈ ಕುರಿತು ಜಾರಿದಳ ನಿರಂತರ ನಿಗಾ ವಹಿಸಬೇಕೆಂದು ಆದೇಶಿಸಿದರು.

2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 277603 ಹೆಕ್ಟೆರ ಪ್ರದೇಶದಲ್ಲಿ 356048 ಟನ್‌ನಷ್ಟು ಆಹಾರ ಹಾಗೂ ಎಣ್ಣೆ ಕಾಳುಗಳನ್ನು, ಹಿಂಗಾರು ಹಂಗಾಮಿನಲ್ಲಿ 252336 ಹೆ. ಪ್ರದೇಶದಲ್ಲಿ 246293 ಟನ್‌ನಷ್ಟು ಆಹಾರ ಹಾಗೂ ಎಣ್ಣೆ ಕಾಳುಗಳನ್ನು ಉತ್ಪಾದಿಸಲಾಗಿರುತ್ತದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಹೈ-ಜೋಳ, ಮು.ಜೋಳ, ಸಜ್ಜೆ, ಹೆಸರು ತೊಗರಿ, ಶೇಂಗಾ, ಸೂರ್ಯಕಾಂತಿ ಹಾಗೂ ಇತರೆ ಬೆಳೆಗಳನ್ನು 326618 ಹೆ. ಪ್ರದೇಶದಲ್ಲಿ ಬಿತ್ತನೆಯಾಗುಬಹುದೆಂದು ಅಂದಾಜಿಸಲಾಗಿದ್ದು, 94315 ಕ್ವಿಂಟಲ್‌ ಬಿತ್ತನೆ ಬೀಜಗೆಳ ಬೇಡಿಕೆ ಪ್ರಮಾಣವಿರುತ್ತದೆ.

ಜಿಲ್ಲೆಯಲ್ಲಿ ಇಂದಿನ ವರೆಗೆ 10335.76 ಮೆಟ್ರಿಕ ಟನ್‌ ರಸಗೊಬ್ಬರಗಳ ದಾಸ್ತಾನಿದ್ದು, ರೈತರಿಗೆ ಕೊರತೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕೃಷಿ ಮಾರಾಟ ಮಂಡಳಿ ಅಧಿಕಾರಿಗಳು, ತಾಲೂಕು ಕೃಷಿ ಅಧಿಕಾರಿಗಳು, ಬಿತ್ತನೆ ಬೀಜ, ರಸಗೊಬ್ಬರ ಉತ್ಪಾದಕರು ಹಾಗೂ ಮಾರಾಟಗಾರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next