ಕೋಲಾರ: ಜಿಲ್ಲೆಯ ಗಡಿಭಾಗಗಳಲ್ಲಿ ಕಾಡಾನೆಗಳದಾಳಿ ತಪ್ಪಿಸಲು ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ಬೆಳೆ ನಷ್ಟವಾಗಿರುವ ಪ್ರತಿ ಎಕರೆಗೆ 10 ಲಕ್ಷ ರೂ, ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷರೂ. ಪರಿಹಾರ ನೀಡುವಂತೆ ಒತ್ತಾಯಿಸಿ ರೈತಸಂಘದಿಂದ ಅರಣ್ಯ ಇಲಾಖೆ ಅಧಿಕಾರಿ ಚನ್ನಪ್ಪಗೆ ಮನವಿ ನೀಡಲಾಯಿತು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ ಮಾತನಾಡಿ, ಜಿಲ್ಲೆಯ ಕಾಮಸಮುದ್ರ, ಬೂದಿ ಕೋಟೆ ಸೇರಿದಂತೆ ಇನ್ನಿತರೆ ಗಡಿಭಾಗಗಳಲ್ಲಿ ಪ್ರಮುಖವಾಗಿ ಕಾಡಾನೆಗಳು ಸೇರಿದಂತೆ ಜಿಂಕೆ, ಹಂದಿಗಳ ದಾಳಿ ನಿರಂತರವಾಗಿದ್ದು, ರೈತರ ಕೋಟ್ಯಂತರ ರೂ. ಬೆಳೆ ನಷ್ಟವಾಗುತ್ತಲೇ ಇದೆ ಎಂದು ಹೇಳಿದರು.
ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾ0ಗುತ್ತಿಲ್ಲ. ಇತ್ತೀಚೆಗಷ್ಟೇ ಓರ್ವ ಗಾರ್ಡನ್ ಮತ್ತು ರೈತ ಮೃತಪಟ್ಟಿದ್ದಾರೆ. ಇಂತಹ ಸಾವುನೋವು ಸಂಭವಿಸುತ್ತಲೇ ಇದೆ. ಅಂತಹ ಸಂದರ್ಭಗಳಲ್ಲಿ ಸರ್ಕಾರ ಕಾಟಾಚಾರಕ್ಕೆ ಎಂಬಂತೆ 5 ಲಕ್ಷರೂ. ಪರಿಹಾರ ಘೋಷಣೆ ಮಾಡುತ್ತಿದೆ. ಅದನ್ನು ಪಡೆದುಕೊಳ್ಳ ಬೇಕಾದರೆ 5 ಲಕ್ಷ ಲಂಚ ನೀಡಿ, 10 ವರ್ಷ ಅಲೆದಾಡ ಬೇಕಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಕಳೆದ 6 ತಿಂಗಳಿಂದ ಕೊರೊನಾದಿಂದಾಗಿ ಇಡೀ ಜಗತ್ತೇ ತತ್ತರಿಸಿದ್ದು, ಸಾಲ ಮಾಡಿ ಲಕ್ಷಾಂತರ ರೂ. ಬಂಡವಾಳ ಹಾಕಿ ಟೊಮೆಟೋ, ಕ್ಯಾಪ್ಸಿಕಂ ಮತ್ತಿತರ ಉತ್ತಮ ಬೆಳೆ ಬೆಳೆದಿರುವ ರೈತರಿಗೆ ಕಾಡುಪ್ರಾಣಿ ಗಳಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದೆ. ಪ್ರತಿ ಎಕರೆಗೆ 10 ಲಕ್ಷರೂ, ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷರೂ. ಪರಿಹಾರ ನೀಡಬೇಕಾಗಿದೆ.ಇಲ್ಲವಾದಲ್ಲಿ ಇಲಾಖೆ ಕಚೇರಿಗೆ ಬೀಗ ಹಾಕಿ, ಹೋರಾಟ ಮಾಡಿ ಬೇಡಿಕೆ ಈಡೇರಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಈಕಂಬಳ್ಳಿ ಮಂಜುನಾಥ್, ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ ಮತ್ತಿತರರಿದ್ದರು.