Advertisement

ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ-ಮನವಿ

03:02 PM May 21, 2022 | Shwetha M |

ನಿಡಗುಂದಿ: ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿಯನ್ನು ಕೂಡಲೇ ಘೋಷಿಸುವ ಮೂಲಕ ಸಿಎಂ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಸ್ಟಿ ಸಮುದಾಯದ ಮುಖಂಡ ಸುರೇಶ ಸಣ್ಣಮಣಿ ಹೇಳಿದರು.

Advertisement

ಪಟ್ಟಣದಲ್ಲಿ ಶುಕ್ರವಾರ ತಾಲೂಕು ವಾಲ್ಮೀಕಿ ಸಮುದಾಯದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಸತೀಶ ಕೂಡಲಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯ ಈಗಾಗಲೇ ಸೌಲಭ್ಯಗಳ ಕೊರತೆಯಿಂದ ವಂಚಿತವಾಗಿದೆ. ಅಂಬೇಡ್ಕರ್‌ ಸಂವಿಧಾನದ ಪ್ರಕಾರ ಜನಸಂಖ್ಯೆಗನುಗುಣವಾಗಿ ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕು. ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಶ್ರೀಗಳ ನೇತೃತ್ವದಲ್ಲಿ ಕಳೆದ 2019ರಲ್ಲಿ ಪಾದಯಾತ್ರೆ ಮಾಡಿ ಬೃಹತ್‌ ಸಮಾವೇಶದ ಮೂಲಕ ಎಚ್ಚರಿಸಿದಾಗ ಸರ್ಕಾರ, ನ್ಯಾ| ಎಚ್‌.ಎನ್‌. ನಾಗಮೋಹನದಾಸ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಸಮಿತಿ ವರದಿ ನೀಡಿ ಎರಡು ವರ್ಷ ಕಳೆದರೂ ಮೀಸಲಾತಿ ಹೆಚ್ಚಳದ ನಿರ್ಣಯ ಮಾಡಿಲ್ಲ. ವರದಿ ಜಾರಿಗೆ ತರುವಲ್ಲಿ ಸರ್ಕಾರ ವಿಳಂಬನೀತಿ ಅನುಸರಿಸುತ್ತಿದೆ. ಇದರ ಪರಿಣಾಮ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಕಳೆದ 100 ದಿನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಳೆ, ಚಳಿ ಎನ್ನದೆ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದರು.

ವಾಲ್ಮೀಕಿ ಸಮುದಾಯದ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸುತ್ತಿದೆ. ಈಗಾಗಲೇ ಶ್ರೀಗಳ ಸತ್ಯಾಗ್ರಹಕ್ಕೆ ಸಮುದಾಯ ಸೇರದಂತೆ, ವಿವಿಧ ಶ್ರೀಗಳು, ಜನಪ್ರತಿನಿಧಿಗಳು ಬೆಂಬಲ ಸೂಚಿಸಿದ್ದಾರೆ. ಸತ್ಯಾಗ್ರಹ ಉಗ್ರ ಹೋರಾಟಕ್ಕೆ ತಿರುಗುವ ಮುನ್ನ ಕೂಡಲೇ ಸರ್ಕಾರ ನ್ಯಾ| ನಾಗಮೋಹನದಾಸ್‌ ನೀಡಿರುವ ವರದಿಯನ್ನು ಜಾರಿಗೊಳಿಸಿ ಮೀಸಲಾತಿ ಹೆಚ್ಚಳದ ನಿರ್ಣಯ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಸಿದ್ದು ಬಿರಾದರ, ಸೇರಿದಂತೆ ಇತರರು ಮಾತನಾಡಿದರು. ರಂಗನಾಥ ನಾಯಕ, ಅವ್ವಪ್ಪ ನಾಯಕ, ನಾಗರಾಜ ಬೆಳ್ಳಕ್ಕಿ, ಸುಭಾಷ್‌ ನಾಯಕ, ಸಿದ್ದು ಗೊಳಸಂಗಿ, ರಾಜೇಂದ್ರ ವಾಲೀಕಾರ, ಮುತ್ತು ಅಂಗಡಗೇರಿ, ಶಂಕರ ಪೂಜಾರಿ, ಪ್ರಕಾಶ ಬಿರಾದಾರ, ಮಲ್ಲಿಕಾರ್ಜುನ ನಾಯಕ, ಶಿವಪ್ಪ ಹಡಗಲಿ, ಮಹಾಂತೇಶ ಓಲೇಕಾರ, ರವಿ ಯರನಾಳ, ಕಿರಣ ರಗಪ್ಪಗೋಳ, ಮುತ್ತು ಕಾಮನಕೇರಿ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next