Advertisement

ಮೀಸಲಾತಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

07:22 PM Oct 23, 2020 | Suhan S |

ಮಾನ್ವಿ: ನ್ಯಾಯ ನಾಗಮೋಹನದಾಸ್‌ ಆಯೋಗದ ವರದಿ ಜಾರಿಗೊಳಿಸಿ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಈಗಿರುವ ಮೀಸಲಾತಿ ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿರುವ ಪ್ರತಿಭಟನೆಗೆ ತಮ್ಮ ಬೆಂಬಲವಿದೆ ಎಂದು ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು.

Advertisement

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ನಾಯಕ ಪ್ರಗತಿಪರ ಸಂಘಟನೆಗಳ ಒಕೂಟದಿಂದ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಶೇ.7.5 ಮೀಸಲಾತಿ ನೀಡಲಾಗುತ್ತಿದೆ. ಎಸ್‌ಟಿ ವರ್ಗಕ್ಕೆ ಶೇ.3 ಮೀಸಲಾತಿ ಇದ್ದು, ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಅಗತ್ಯ. ಆದ್ದರಿಂದ ನ್ಯಾ| ನಾಗಮೋಹನದಾಸ್‌ ವರದಿ ಅಂಗೀಕರಿಸಿ ಮೀಸಲಾತಿ ಹೆಚ್ಚಿಸಬೇಕು ಎಂದರು.

ಈ ಹಿಂದೆ ತಮ್ಮ ತಂದೆ ರಾಜಾ ಅಂಬಣ್ಣ ನಾಯಕ ಸಂಸದರಾಗಿದ್ದಾಗ ವಾಲ್ಮೀಕಿ ನಾಯಕ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಜಾರಿ ಮಾಡಿಸಿದ್ದರು. ನಾಯಕ ಸಮುದಾಯದ ಶೇ.7.5ಕ್ಕೆ ಮೀಸಲಾತಿ ಹೆಚ್ಚಿಸಲು ತಮ್ಮ ಬೆಂಬಲವಿದ್ದು, ಮೀಸಲಾತಿ ಹೆಚ್ಚಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದರು.

ಈ ವೇಳೆ ವಾಲ್ಮೀಕಿ ಪೀಠದ ಆತ್ಮಾನಂದ ಸ್ವಾಮಿ ಹುಸ್ಕಿಹಾಳ, ಸಮುದಾಯದ ಮುಖಂಡರಾದ ಬುಡ್ಡಪ್ಪ ನಾಯಕ, ರಾಜಾಶ್ಯಾಂಸುಂದರ್‌ ನಾಯಕ, ಅಯ್ಯಪ್ಪ ಮ್ಯಾಕಲ್‌, ಶರಣಬಸವ ನಾಯಕ ಜಾನೇಕಲ್‌, ಗೋಪಾಲ ನಾಯಕ ಹರವಿ, ನರಸಿಂಹ ನಾಯಕ, ಹನುಮನಗೌಡ ನಾಯಕ, ಶಿವರಾಜ ನಾಯಕ ಗವಿಗಟ್ಟು, ಬಸವ ನಾಯಕ, ರಾಮಣ್ಣ ನಾಯಕ, ಅಂಜಿ ನಾಯಕ, ಬೆಟ್ಟಪ್ಪ, ಯಲ್ಲಪ್ಪ ಇದ್ದರು.

ಮೀಸಲಾತಿ ನೀಡಿದರೆ ಮಾತ್ರ ಧರಣಿ ಹಿಂದಕ್ಕೆ :

Advertisement

ಸಿರವಾರ: ವಾಲ್ಮೀಕಿ ನಾಯಕ ಸಮುದಾಯಕ್ಕೆ ಶಿಕ್ಷಣ, ರಾಜಕೀಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಶೇ.7.5 ಮೀಸಲಾತಿಗೆ ಒತ್ತಾಯಿಸಿ ಅ.27ರಿಂದ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಲ್ಲಟ ತಾಪಂ ಸದಸ್ಯ ಮಲ್ಲಿಕಾರ್ಜುನ ನಾಯಕ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲ ಮಾತನಾಡಿದ ಅವರು, ಸರ್ಕಾರಗಳು ಅನೇಕ ವರ್ಷಗಳಿಂದ ನಮಗೆ ಅನ್ಯಾಯ ಮಾಡುತ್ತ ಬಂದಿವೆ. ಸಮಾಜದ ಅಭಿವೃದ್ಧಿಗೆ ಮೀಸಲಾಯಿತಿ ಹೆಚ್ಚಿಸುವಂತೆ ಪಾದಯಾತ್ರೆ ಮೂಲಕ ಮನವಿ ಸಲ್ಲಿಸಿದರೂ ಕೇವಲ ಭರವಸೆ ನೀಡಿ ಕಾಲ ಕಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್ಟಿ ಸಮುದಾಯದ ನಕಲಿ ದಾಖಲೆ ಸೃಷ್ಟಿಸಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದು, ಅದನ್ನು ತನಿಖೆಗೆ ಒಳಪಡಿಸಬೇಕು ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ವಾಲ್ಮೀಕಿ ಗುರುಗಳ ಮಾರ್ಗದರ್ಶನದಂತೆ ರಾಜ್ಯಾದ್ಯಂತ ಧರಣಿ ಹಮ್ಮಿಕೊಳ್ಳಲಾಗಿದೆ. ಪಟ್ಟಣದಲ್ಲಿ ಅ.27ರಿಂದ 29ರ ವರೆಗೆ ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಮೀಸಲಾತಿ ಆದೇಶ ಹೊರಡಿಸಿದರೆ ಮಾತ್ರ ಧರಣಿ ಹಿಂಪಡೆಯಲಾಗುವುದು ಎಂದರು.

ಈ ವೇಳೆ ತಾಪಂ ಅಧ್ಯಕ್ಷ ದೇವರಾಜ ಕುರುಕುಂದಾ, ಮುಖಂಡರಾದ ಬಸವರಾಜ ಗಡ್ಲ, ಚನ್ನಬಸವ ಗಡ್ಲ, ನಾಗರಾಜ ಚಿನ್ನಾನ್‌, ವೆಂಕಟೇಶ ದೊರೆ, ದುರುಗಣ್ಣ ಸೂರಿ, ಭರತ್‌ ನಾಯಕ, ಪಂಪಾಪತಿ ನಾಯಕ, ರಂಗನಾಥ ನಾಯಕ, ರಮೇಶ ನಾಯಕ, ಯಲ್ಲಪ್ಪ ದೊರೆ, ಅಪ್ಪಾಜಿ ನಾಯಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next