Advertisement

ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪ್ರತಿಭಟನೆ

01:03 PM May 01, 2019 | Team Udayavani |

ಕುಷ್ಟಗಿ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಪಿಡಿಒ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ನವಲಹಳ್ಳಿ ಗ್ರಾಮಸ್ಥರು ಹಿರೇಮನ್ನಾಪುರ ಗ್ರಾಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಗ್ರಾಮದಲ್ಲಿ ಕಳೆದ ಕೆಲ ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕೆಲ ದಿನಗಳ ಹಿಂದೆ ತಹಶೀಲ್ದಾರ್‌ ಕೆ.ಎಂ. ಗುರುಬಸವರಾಜ ಅವರು ಗ್ರಾಮಕ್ಕೆ ತೆರಳಿ ಸಮಸ್ಯೆಗೆ ಸ್ಪಂದಿಸಿ ಹೊಸ ಕೊಳವೆಬಾವಿ ಕೊರೆಯಿಸಲು ಗ್ರಾಮೀಣ ನೀರು ಸರಬರಾಜು ನೈರ್ಮಲ್ಯ ಇಲಾಖೆಗೆ ಸೂಚಿಸಿದ್ದರು. ತಾತ್ಕಾಲಿಕವಾಗಿ ನೀರಿನ ಸಮಸ್ಯೆ ಬಗೆಹರಿದಿತ್ತು. ಆದರೆ ಕೊಳವೆಬಾವಿಯಲ್ಲಿ ಸೆಲೆ ಬತ್ತಿದ್ದಕ್ಕೆ ಸಮಸ್ಯೆ ಮರುಕಳಿಸಿತು. ಇತ್ತೀಚೆಗೆ ಗ್ರಾಮದ ದಕ್ಷಿಣ ಭಾಗದಲ್ಲಿನ ನಾಲೆ ಬಳಿ ಕೊಳವೆಬಾವಿ ಕೊರೆಯಿಸಲಾಗಿದೆ. ಅದಕ್ಕೆ ಮೋಟರ್‌ ಅಳವಡಿಸಿ, ಪೈಪ್‌ಲೈನ್‌ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ತಳ್ಳುಗಾಡಿಯಲ್ಲಿ ನೀರು ತರಲು ಹೋಗಿದ್ದ ಬಾಲಕನಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. 4 ಲಕ್ಷ ರೂ. ಖರ್ಚು ಮಾಡಿದರೂ ಬಾಲಕ ಇನ್ನೂ ಗುಣಮುಖನಾಗಿಲ್ಲ. ನೀರಿನ ಸಮಸ್ಯೆಯಿಂದಾಗಿ ಇಂತಹ ಘಟನೆಗಳು ನಡೆಯುವುದನ್ನು ತಪ್ಪಿಸಲು ಗ್ರಾಪಂ ಹಾಗೂ ತಾಲೂಕು ಆಡಳಿತ ಸ್ಪಂದಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳುವಂತೆ ಪಿಡಿಒ ಚಂದೂಸ್ವಾಮಿ ದೊಡ್ಡಮನಿ ಅವರನ್ನು ಕೇಳಿದರೂ ಪಿಡಿಒ ಸರಿಯಾಗಿ ಸ್ಪಂದಿಸಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಟ್ರ್ಯಾಕ್ಟರ್‌ಗಳಲ್ಲಿ ಗ್ರಾಪಂ ಕಾರ್ಯಾಲಯಕ್ಕೆ ತೆರಳಿ ಮಂಗಳವಾರ ದಿಢೀರ್‌ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ಮತ್ತು ಪಿಡಿಒ ನಡುವೆ ತೀವ್ರ ವಾಗ್ವಾದ ನಡೆಯಿತು. ತಮ್ಮ ಗ್ರಾಮಕ್ಕೆ ತಕ್ಷಣವೇ ಬರಬೇಕೆಂದು ಪಟ್ಟು ಹಿಡಿದು ಕುಳಿತರು. ಗ್ರಾಮಸ್ಥರ ಒತ್ತಡಕ್ಕೆ ಮಣಿದ ಪಿಡಿಒ ನವಲಹಳ್ಳಿಗೆ ತೆರಳಿದರು. ಗ್ರಾಮದಲ್ಲಿ ಸಭೆ ನಡೆಸಿ, ಕೂಡಲೇ ಕೊಳವೆಬಾವಿಗೆ ಹೆಚ್ಚುವರಿ ಪೈಪ್‌ಗ್ಳನ್ನು ಇಳಿಸಬೇಕು. ಪೈಪ್‌ಲೈನ್‌ಗೆ ನೀರಿನ ಸಂಪರ್ಕ ನೀಡಬೇಕು. ಕೆಲಸ ಮುಗಿಯುವವರೆಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಗ್ರಾಮಸ್ಥರು ಬೇಡಿಕೆಯಿಟ್ಟರು. ಇದಕ್ಕೆ ಒಪ್ಪಿದ ಪಿಡಿಒ ನಿತ್ಯ ನಾಲ್ಕು ಟ್ಯಾಂಕರ್‌ ನೀರು ನೀಡಲಾಗುವುದು. ಕೆಲವೇ ದಿನಗಳಲ್ಲಿ ಕೊಳವೆಬಾವಿಯ ಕೆಲಸ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next