ಮೂಡುಬಿದಿರೆ: ಸೋಮವಾರ ಸಂಜೆ ರಾ.ಹೆ. 169 ಹಾದುಹೋಗುವ ತೋಡಾರ್ನ ಹಂಡೇಲು ಬಳಿ ಖಾಸಗಿ ಬಸ್ಸೊಂದು ಬೈಕ್ ಗೆ ಢಿಕ್ಕಿ ಹೊಡೆದು ಆಳ್ವಾಸ್ ಕಾಲೇಜು ವಿದ್ಯಾರ್ಥಿ ಕಾರ್ತಿಕ್ ಆಚಾರ್ಯ ಮೃತಪಟ್ಟ ಘಟನೆಗೆ ಪ್ರತಿಯಾಗಿ, ಚಾಲಕನ ನಿರ್ಲಕ್ಷ್ಯವನ್ನು ಖಂಡಿಸಿ ಮುಡುಬಿದಿರೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಂಗಳವಾರ ಸಂಜೆ ವಿದ್ಯಾಗಿರಿ ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಸಿದರು.
ವರುಷದಲ್ಲಿ ಹತ್ತಕ್ಕೂ ಅಧಿಕ ಬಲಿ:
ಖಾಸಗಿ ಬಸ್ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದಾಗಿ ಮೂಡುಬಿದಿರೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 10 ಕ್ಕೂ ಅಧಿಕ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.
ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸುವವರ ವಿರುದ್ದ ಕಠಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ತಿಕ್ ಆಚಾರ್ಯ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ವಕೀಲ ಶಾಂತಿಪ್ರಸಾದ್ ಹೆಗ್ಡೆ ಆಗ್ರಹಿಸಿದರು.
ಮನವಿ:
ಮೂಡುಬಿದಿರೆ ವಲಯದ ಎಲ್ಲ ಬಸ್ ಚಾಲಕರು ಕಟ್ಟು ನಿಟ್ಟಾಗಿ ರಸ್ತೆ ನಿಯಮಗಳನ್ನು ಪಾಲಿಸಬೇಕು. ವಿಶೇಷ ಜನಸಂಚಾರವಿರುವ ಪ್ರದೇಶಗಳಲ್ಲಿ ವೇಗಕ್ಕೆ ಕಡಿವಾಣ ಹಾಕಬೇಕು. ಆಳ್ವಾಸ್ – ವಿದ್ಯಾಗಿರಿ ಬಳಿ ಹೆದ್ದಾರಿಗೆ ಹಂಪ್ಸ್ ಹಾಕಬೇಕು. ಶಾಲಾ ಕಾಲೇಜುಗಳ ಬಳಿ ಡಿವೈಡರ್ಗಳನ್ನು ಅಳವಡಿಸಿ ಬಸ್ಸುಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಯನ್ನು ವಿದ್ಯಾರ್ಥಿಗಳು ಪೋಲೀಸ್ ವೃತ್ತ ನಿರೀಕ್ಷಕ ನಿರಂಜನ್ ಅವರಿಗೆ ನೀಡಿದರು. ಈ ಬಗ್ಗೆ ಸಾರಿಗೆ ಅಧಿಕಾರಿಗಳ ಗಮನಸೆಳೆದು ಸೂಕ್ತ ಕ್ರಮ ಜರಗಿಸುವುದಾಗಿ ನಿರಂಜನ್ ಭರವಸೆ ಇತ್ತರು. ರಸ್ತೆ ನಿಯಮ ಪಾಲಿಸದ, ಆತಿವೇಗದಲ್ಲಿ ವಾಹನ ಚಲಾಯಿಸುವ ಪ್ರಕರಣಗಳ ಬಗ್ಗೆ ಪ್ರಶ್ನಿಸಲಾಗಿ ಕಳೆದೊಂದು ವರ್ಷದಿಂದ ನೂರೈವತ್ತಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ ಕ್ರಮ ಜರಗಿಸಲಾಗಿದೆ ಎಂದು ನಿರಂಜನ್ ತಿಳಿಸಿದರು.
Related Articles
ಸಂಜೆ ಗಂ.4ರಿಂದ 4.30ರ ವರೆಗೆ ವಿದ್ಯಾಗಿರಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದು ಪೊಲೀಸರು ಇರುವ ಸ್ಥಳಾವಕಾಶದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ಬಹಳ ಶ್ರಮಪಟ್ಟರು. ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಬುಧವಾರ ಎಡಪದವಿನಲ್ಲಿ ಪ್ರತಿಭಟನೆ
ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಸಂಭವಿಸಿದ ಕಾರ್ತಿಕ್ ಸಾವಿನ ಘಟನೆಯನ್ನು ಖಂಡಿಸಿ ಎಡಪದವು – ಮಿಜಾರು ಪರಿಸರದ ನಾಗರಿಕರಿಂದ ಜೂನ್ 7 ರಂದು ಬೆಳಿಗ್ಗೆ 8.30 ಕ್ಕೆ ಎಡಪದವು ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.