ಮುಗಳಖೋಡ: ತೈಲ ಹಾಗೂ ಅವಶ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸೈಕಲ್ ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ವಿವೇಕಾನಂದ ವೃತ್ತದಿಂದ ವಿಠ್ಠಲ ಮಂದಿರದವರೆಗೆ ನಡೆಸಿದ ಪ್ರತಿಭಟನಾ ಮೆರವಣಿಗೆಗೆ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ನಂತರ ವಿಠ್ಠಲ ಮಂದಿರದ ಆವರಣದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದು ಅವಶ್ಯಕ ವಸ್ತು ಮತ್ತು ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೆ ಏರಿಕೆ ಮಾಡಿ ಜನರ ಜೀವನದ ಮೇಲೆ ಚೆಲ್ಲಾಟ ಆಡುತ್ತಿವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಂದೇ ಒಂದು ರೂ. ಏರಿಕೆ ಆದರೆ ದೇಶದಾದ್ಯಂತ ಪ್ರತಿಭಟನೆ ಮಾಡುವವರು ಈಗ ಏನು ಮಾಡುತ್ತಿದ್ದಾರೆ.
ಇಂದು ನೀವು ಮೋದಿ ಹಟಾವೋ ದೇಶ ಬಚಾವೊ ಮಾಡುವುದು ಅನಿವಾರ್ಯವಾಗಿದೆ. ಮುಖಂಡರು ಕಾರ್ಯಕರ್ತರು ಸ್ವಪ್ರತಿಷ್ಠೆ ಬಿಟ್ಟು ಕಾಂಗ್ರೆಸ್ ಆಡಳಿತದಲ್ಲಿ ಜಾರಿಗೆ ತಂದ ಸುಧಾರಣಾ ಕ್ರಮಗಳನ್ನು ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಮನ ಮುಟ್ಟಿಸುವ ಕೆಲಸ ಮಾಡುವ ಮೂಲಕ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿ. ಪಕ್ಷ ಮುಂದಿನ ತಾಪಂ, ಜಿಪಂ ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯೆ ಸ್ಥಾನಗಳಿಗೆ ಯೋಗ್ಯ ಅಭ್ಯರ್ಥಿಗೆ ಸ್ಪರ್ಧಿಸುವ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ, ಎರಡು ಸರ್ಕಾರಗಳು ವಿಫಲವಾಗಿವೆ. ಸಂವೇದನಾ ರಹಿತ ಸರ್ಕಾರ, ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿವೆ. ನೀವು ಜಾಗೃತರಾಗಿ ಜನವಿರೋಧಿ ಸರ್ಕಾರ ಕಿತ್ತು ಹಾಕಿ ಎಂದರು. ಮುಖಂಡ ಡಿ.ಎಸ್. ನಾಯಿಕ, ಮಹೇಂದ್ರ ತಮ್ಮಣ್ಣವರ, ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಯಲ್ಲಪ್ಪ ಶಿಂಗೆ ಮಾತನಾಡಿದರು. ಅಧ್ಯಕ್ಷ ಸಂಜು ಸರವಗೋಳ, ಸಂಜು ಬಾನೆ, ಅಪ್ಪಾಸಾಹೇಬ ಕುಲಿಗೋಡೆ, ದಶಗೀರ ಕಾಗವಾಡೆ, ಆಯುಶಾ ಸನದಿ, ಅಶೋಕ ಕೊಪ್ಪದ, ಸಂಗಪ್ಪ ಖೇತಗೌಡರ, ಗಜಾನನ ಕೋಕಟನೂರ, ಗುರುಪಾದ ಚೌಗಲಾ, ಭೀಮಪ್ಪ ಬದನಿಕಾಯಿ, ರಾಮಣ್ಣ ಗಸ್ತಿ, ಉಪಸ್ಥಿತರಿದ್ದರು. ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಕಾರ್ಯಕರ್ತರನ್ನು ಸತೀಶ ಜಾರಕಿಹೊಳಿ ಸತ್ಕರಿಸಿದರು.