Advertisement

ಬಾಲಾಜಿ ಸಕ್ಕರೆ ಕಾರ್ಖಾನೆ ವಿರುದ್ಧ ಪ್ರತಿಭಟನೆ

05:18 PM Jan 18, 2022 | Shwetha M |

ಮುದ್ದೇಬಿಹಾಳ: ಕಬ್ಬು ಕಟಾವು ಗ್ಯಾಂಗ್‌ಗಳು ಮನಸೋ ಇಚ್ಛೆ ಒಬ್ಬ ರೈತನಿಂದ ಮತ್ತೊಬ್ಬ ರೈತನ ಹೊಲಕ್ಕೆ ಬದಲಾಗುತ್ತಿದ್ದಾರೆ. ಗ್ಯಾಂಗ್‌ ಗಳಿಗೆ ಲಗಾಣಿ ದುಬಾರಿ ಮಾಡುವಂತೆ ಪ್ರಚೋದಿಸುತ್ತಿದ್ದಾರೆ. ಇದಕ್ಕೆ ಬಾಲಾಜಿ ಸಕ್ಕರೆ ಕಾರ್ಖಾನೆ ಸಿಬ್ಬಂದಿ ಕಾರಣರಾಗಿದ್ದಾರೆ. ಕೂಡಲೇ ಕಾರ್ಖಾನೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು ನಾಲತವಾಡ ಭಾಗದ ಕಬ್ಬು ಬೆಳೆಗಾರರು ಮಿನಿ ವಿಧಾನಸೌಧ ಎದುರು ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

Advertisement

ನಾಲತವಾಡ ಸುತ್ತಮುತ್ತಲಿನ ರೈತರ ಕಬ್ಬು ಕಟಾವಿಗೆ ಬಂದಿದ್ದು ಕಬ್ಬು ಕತ್ತರಿಸುವ ಗ್ಯಾಂಗ್‌ಗಳ ಅವ್ಯವಸ್ಥೆ ಮತ್ತು ದುಬಾರಿ ಲಗಾಣಿ ಕಬ್ಬು ಬೆಳೆಗಾರರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ. ಒಂದು ಹೊಲದಲ್ಲಿ ಅರ್ಧ ಕಬ್ಬು ಕತ್ತರಿಸಿ ಉಳಿದರ್ಧ ಹಾಗೆಯೇ ಬಿಟ್ಟು ಬೇರೆ ರೈತರ ಹೊಲಕ್ಕೆ ಗ್ಯಾಂಗ್‌ ಬದಲಾಯಿಸುತ್ತಾರೆ. ಇದರಿಂದ ಅರ್ಧ ಕಬ್ಬು ಕಟಾವು ಮಾಡಿದ ಹೊಲಗಳಲ್ಲಿ ಉಳಿದ ಕಬ್ಬು ಒಣಗಿ, ಇಳುವರಿ ಕಡಿಮೆ ಆಗುವ ಆತಂಕ ಉಂಟಾಗತೊಡಗಿದೆ. ಈಗಾಗಲೇ ಹಲವು ಬಾರಿ ಈ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ತಹಶೀಲ್ದಾರ್‌ ಅವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸದಿದ್ದರೆ ತಹಶೀಲ್ದಾರ್‌ ಕಚೇರಿ ಮತ್ತು ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಸಿದರು.

ಈ ವೇಳೆ ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ ಅವರು ಕೂಡಲೇ ಕಾರ್ಖಾನೆಯವರೊಂದಿಗೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಸಿಪಿಐ ಆನಂದ ವಾಘ್ಮೋಡೆ, ರೈತ ಮುಖಂಡರಾದ ಹನುಮಂತಪ್ಪ ಹೊಳೆಯಾಚೆ, ಗಗನ ಕುರೇರ, ಶರಣಪ್ಪ ಮರಳಿ, ಶಿವಾನಂದ ಗೌಂಡಿ, ಗುರು ಗಾಣಿಗೇರ, ಮೋಶಿನ್‌ ನದಾಫ್‌, ಬೀರಪ್ಪ ಪೂಜಾರಿ, ರಮೇಶ ಮುದ್ನೂರ, ಸಂಗಪ್ಪ ಬಾರಡ್ಡಿ, ಮಾರುತಿ ಗುರಿಕಾರ, ಬಸವರಾಜ ಪಾಟೀಲ, ಬಸವರೆಡ್ಡಿ ಕಾಣಿಕೇರಿ, ಮುತ್ತು ಕ್ಷತ್ರಿ, ವೀರೇಶ ಚಿಕ್ಕೊಳ್ಳಿ, ಮಲ್ಲಿಕಾರ್ಜುನ ಬಿರಾದಾರ, ಪರಮಣ್ಣ ಬಿರಾದಾರ, ಸಿದ್ದಪ್ಪ ಪೂಜಾರಿ, ಮಹಾಂತೇಶ ಕುಂಬಾರ ಅವರು ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next