Advertisement

ಮೈತ್ರಿ ವೈಫ‌ಲ್ಯ ಖಂಡಿಸಿ ಪ್ರತಿಭಟನೆ

12:58 PM Jun 14, 2019 | Team Udayavani |

ಬೆಂಗಳೂರು: ಜಿಂದಾಲ್ ಕಂಪನಿಗೆ 3,667ಎಕರೆ ಜಮೀನು ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಾಗೂ ಸಮ್ಮಿಶ್ರ ಸರ್ಕಾರದ ವೈಫಲ್ಯಗಳ ವಿರುದ್ಧ ರಾಜ್ಯ ಬಿಜೆಪಿ ಯುವ ಮೋರ್ಚಾದಿಂದ ಗುರುವಾರ ಆನಂದರಾವ್‌ ವೃತ್ತದ ಗಾಂಧೀ ಪ್ರತಿಮೆ ಮುಂದೆ ರಾಜ್ಯ ಬಿಜೆಪಿ ಯುವಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಕಾರ್ಯಕರ್ತರು ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ಕಾರದ ವೈಫಲ್ಯಗಳ ಕುರಿತು ಕೈಯಲ್ಲಿ ನಾಮಫಲಕ ಹಿಡಿದು ಜಿಂದಾಲ್ ಕಂಪನಿಗೆ ಭೂಮಿ ನೀಡುತ್ತಿರುವ ಸಮ್ಮಿಶ್ರ ಸರ್ಕಾರಕ್ಕೆ ಧಿಕ್ಕಾರ, ವಿಜಯನಗರ ಭೂಮಿ ನಮ್ಮ ಜನ್ಮಸಿದ್ಧ ಹಕ್ಕು, ಸಾರ್ವಜನಿಕರ ಸ್ವತ್ತನ್ನು ಮಾರುತ್ತಿರುವ ಕಮಿಷನ್‌ ಸರ್ಕಾರಕ್ಕೆ ಧಿಕ್ಕಾರ ಬರ ಪರಿಹಾರ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ, ಭ್ರಷ್ಟ ಸರ್ಕಾರ, ಯುವಕರ ವಿರೋಧಿ ಮತ್ತು ಬಡವರ ವಿರೋಧಿ ಸರ್ಕಾರ ಎಂದರೆ ಅದು ಸಮ್ಮಿಶ್ರ ಸರ್ಕಾರ. ಮುಖ್ಯಮಂತ್ರಿಗಳು ಕಳೆದ ಒಂದು ವರ್ಷದಿಂದ ಹೆಲಿಕಾಪ್ಟರ್‌ನಲ್ಲಿ ದೇವಸ್ಥಾನ ಸುತ್ತುತ್ತಾ, ಪಂಚತಾರಾ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿ ಮಜಾ ಮಾಡಿದ್ದರು. ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ಉಂಟಾಗಿರುವ ಬರದ ಪರಿಸ್ಥಿತಿಯಿಂದ ಜಾನುವಾರುಗಳನ್ನು ಖಸಾಯಿ ಖಾನೆಗೆ ಮಾರುವ ಸ್ಥಿತಿ ಎದುರಾಗಿದೆ. ಪ್ರಣಾಳಿಕೆಯಲ್ಲಿ ಹೇಳಿದ್ದ ಎಲ್ಲ ಭರವಸೆಗಳನ್ನು ಸರ್ಕಾರ ಮರೆತಿದೆ ಎಂದು ದೂರಿದರು.

ಭರವಸೆ ಹುಸಿ: ‘ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಮಹಿಳಾ ಸ್ವಸಹಾಯ ಸಂಘದ ಸಾಲ, ನೇಕಾರರ ಮತ್ತು ಮೀನುಗಾರರ ಸಾಲವನ್ನೂ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಇಲ್ಲಿಯವರೆಗೆ ಒಂದನ್ನೂ ಸರ್ಮಪಕವಾಗಿ ನಿರ್ವಹಣೆ ಮಾಡಿಲ್ಲ. ಇದರ ಬಗ್ಗೆ ಪ್ರಶ್ನೆ ಮಾಡಿದರೆ, ಜನರು ನನ್ನನ್ನು ಆಯ್ಕೆ ಮಾಡಿಲ್ಲ ರಾಹುಲ್ ಗಾಂಧಿಯವರಿಂದ ನಾನು ಸಿಎಂ ಆಗಿದ್ದೇನೆ ಎಂದು ಹೇಳುತ್ತಾರೆ. ರೈತರನ್ನು ಸಾಲಮನ್ನಾ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಮನ್ಸೂರ್‌ ಹಿಂದೆ, ಜಮೀರ್‌, ರೋಷನ್‌ಬೇಗ್‌: ‘ಯಾದಗಿರಿಯಲ್ಲಿ ಸಾಲಮನ್ನಾ ಹಣ ವಾಪಸ್ಸಾಗಿದೆ. ಮೈಸೂರಿನಲ್ಲೂ ಹೀಗೆ ಆಗಿದೆ. ಇದರ ಅರ್ಥ ಭ್ರಷ್ಟ ಸರ್ಕಾರಕ್ಕೆ ರೈತರ ಬಗ್ಗೆ ಬದ್ಧತೆ, ಸಾಮಾಜಿಕ ಕಾಳಜಿ ಯಾವುದೂ ಇಲ್ಲ. ಐಎಂಎ ಪ್ರಕರಣದಲ್ಲಿ ಮನ್ಸೂರ್‌ ಖಾನ್‌ ಹಿಂದೆ ರೋಷನ್‌ ಬೇಗ್‌, ಜಮೀರ್‌ ಅಹಮದ್‌ ಇದ್ದಾರೆ. ಮನ್ಸೂರ್‌ ಮೂಲಕ ಬಡವರ ಹಣವನ್ನು ಲೂಟಿ ಮಾಡಿದ್ದಾರೆ. ಮೊದಲು ಎಸ್‌ಐಟಿ ತನಿಖೆ ಆಗಲಿ, ಆಮೇಲೆ ಸಿಬಿಐ ತನಿಖೆ ಆಗಲಿ ಎನ್ನುತ್ತಾರೆ. ಮಾಜಿ ಸಿಎಂ ಮತ್ತು ಹಾಲಿ ಸಿಎಂ ಎಲ್ಲ ಮನ್ಸೂರ್‌ ಮನೆಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೇ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು. ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ಸರ್ಕಾರ ಬಹಳ ದಿನ ಇರಲ್ಲ. ಲಾಸ್ಟ್‌ ಇಂಜೆಕ್ಷನ್‌ ಕೊಟ್ಟಿದಿವಿ ಬಂಧುಗಳೆಲ್ಲ ಬಂದು ನೋಡಿಕೊಂಡು ಹೋಗಿ ಎನ್ನುವ ಸ್ಥಿತಿಯಲ್ಲಿ ಸರ್ಕಾರ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಮಾಡಿದ್ದರು ಈಗ ಎಲ್ಲಿದಿಯಪ್ಪ ಸಿದ್ದರಾಮಯ್ಯ ಎಂದು ಬಳ್ಳಾರಿ ಜನ ಕೇಳುತ್ತಿದ್ದಾರೆ ಎಂದರು.

Advertisement

ಕಳಪೆ ಕಾಮಗಾರಿ: ‘ಮುಖ್ಯಮಂತ್ರಿ ಜಿಂದಾಲ್ಗೆ 3,667 ಎಕರೆ ಕೊಡುವ ಮೂಲಕ ಸಮ್ಮಿಶ್ರ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಮಾಧ್ಯಮದವರಿಗೆ ನಾನು ಮಾಡುವ ಒಳ್ಳೆ ಕೆಲಸ ಕಾಣುತ್ತಿಲ್ಲ ಎನ್ನುತ್ತಾರೆ. ರೇವಣ್ಣ ಹಾಗೂ ಪರಮೇಶ್ವರ್‌ ನಡುವೆ ಜಟಾಪಟಿ ಆಗಿದೆ. ಲೋಕೊಪಯೋಗಿ ಇಲಾಖೆಯಿಂದ ಕಳಪೆ ಕೆಲಸ ನಡೆಯುತ್ತಿದೆ ಎಂದು ಜಿ ಪರಮೇಶ್ವರ್‌ ಅವರೇ ಬಹಿರಂಗವಾಗಿ ಹೇಳಿದ್ದಾರೆ. ರೇವಣ್ಣನಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಯಾವ ಇಲಾಖೆಯೂ ಬೇಡ, ರೈತರ ಕೆಲಸ ಬೇಡ. ಹಣ ಮಾಡುವ ಇಲಾಖೆಯೇ ಬೇಕು’ ಎಂದು ಹೇಳಿದರು. ‘ಗಣಿ ಲೂಟಿ ಆದಾಗ ಬಿಜೆಪಿ ಮೇಲೆ ಆರೋಪ ಮಾಡಿದ್ದರು. ಈಗ ಜಿಂದಾಲ್ಗೆ ಭೂಮಿ ಕೊಡುತ್ತಿದ್ದಾರೆ. ಜಿಂದಾಲ್ಗೆ 11 ಸಾವಿರ ಎಕರೆ ಭೂಮಿ ಕೊಟ್ಟಾಗಿದೆ. ಈಗ ಹೆಚ್ಚುವರಿಯಾಗಿ 3,667 ಎಕರೆ ಕೇಳುತ್ತಿದ್ದಾರೆ. ಭೋಗ್ಯಕ್ಕೆ ಭೂಮಿ ಕೊಟ್ಟರೆ ಸಮಸ್ಯೆ ಇಲ್ಲ. ಆದರೆ, ಭೋಗ್ಯಕ್ಕೆ ಭೂಮಿ ನೀಡಿದರೆ ಇವರಿಗೆ ಲಾಭ ಸಿಗುವುದಿಲ್ಲ. ಲೂಟಿ ಮಾಡಬೇಕು ಎಂಬ ದೃಷ್ಟಿಯಿಂದ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಜಿಂದಾಲ್ಗೆ ಭೂಮಿ ಮಾರಾಟ ಮಾಡುವ ನಿರ್ಧಾರ ಹಿಂದಕ್ಕೆ ಸರಿಯಬೇಕು. ಅಲ್ಲಿವರೆಗೆ ನಮ್ಮ ಹೋರಾಟ ನಿಲ್ಲಲ್ಲ’ ಎಂದು ಎಚ್ಚರಿಸಿದರು.

‘ಸಾಲಮನ್ನಾ ಆಗಿಲ್ಲ ಎಂದು ಜನ ಎಲ್ಲಿ ಕೇಳುತ್ತಾರೆ ಎನ್ನುವ ಆತಂಕದಿಂದ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಸಾಲಮನ್ನಾದ ಹಣ ಇಲ್ಲಿಯವರೆಗೆ ಬಿಡುಗಡೆ ಆಗಿರುವುದು ಕೇವಲ ಎಂಟುವರೆ ಸಾವಿರ ಕೋಟಿ ಮಾತ್ರ. ಇನ್ನೂ 36 ಸಾವಿರ ಕೋಟಿ ರೂ.ಹಣ ಬಿಡುಗಡೆಯಾಗ ಬೇಕಿದೆ’ ಎಂದು ಹೇಳಿದರು.

ಅಶ್ವಥ್‌ ನಾರಾಯಣ ಮಾತನಾಡಿ, ಮಹಾಘಟಬಂಧನ್‌ ರಚನೆಯಾದ ಒಂದು ವರ್ಷಕ್ಕೆ ಸರಿಯಾಗಿ ಘಟಬಂದನ್‌ ಭ್ರಷ್ಟಾಚಾರಿಗಳಿಗೆ ಜನ ಎಳ್ಳುನೀರು ಬಿಟ್ಟರು. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ನವರು ಅಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು ಎಂಬಂತೆ ಹಂಚಿಕೊಂಡಿದ್ದಾರೆ. ಐಎಂಎ, ಆಂಬಿಡೆಂಟ್, ವಕ್ ಆಸ್ತಿ ಪ್ರಕರಣ, ಅಮಾನತ್‌ ಕೋ ಆಪರೇಟಿವ್‌ ಬ್ಯಾಂಕ್‌ ಎಲ್ಲ ಹಗರಣಗಳಲ್ಲೂ ಕಾಂಗ್ರೆಸ್‌ನ ನಾಯಕರು ಪಾಲುದಾರರಾಗಿದ್ದಾರೆ. ಐಎಂಎ ಸಂಸ್ಥೆಗೆ 14,000 ಚ.ಅಡಿ ನಿವೇಶನವನ್ನು 9 ಕೋಟಿಗೆ ಮಾರಾಟ ಮಾಡಿರುವುದಾಗಿ ಜಮೀರ್‌ ಅಹಮದ್‌ ಹೇಳಿಕೊಂಡಿದ್ದಾರೆ. ಈಗ ಅಲ್ಲಿ ಚದರ ಅಡಿಗೆ 25,000 ರೂ. ಇದೆ. ಉಳಿದ ಹಣ ಬ್ಲಾಕ್‌ ಮನಿ ಏನು ಮಾಡಿದಿರಿ ಎಂದು ಪ್ರಶ್ನಿಸಿದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಕ್ಕೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಕಡಿಮೆ ಬೆಲೆಗೆ ಜಿಂದಾಲ್ ಭೂಮಿ:ಮಾರುಕಟ್ಟೆ ದರಕ್ಕಿಂತ ನೂರು ಪಟ್ಟು ಕಡಿಮೆ ಬೆಲೆಗೆ ಜಿಂದಾಲ್ಗೆ ಭೂಮಿ ನೀಡಲು ಮುಂದಾಗಿದೆ. ಇದಕ್ಕಿಂತ ಭ್ರಷ್ಟಾಚಾರಬೇಕಾ. ಬಿಜೆಪಿ ಪ್ರತಿಭಟನೆಗೆ ಹೆದರಿ ಜಿಂದಾಲ್ಗೆ ನೀಡಿರುವ ಭೂಮಿ ಬಗ್ಗೆ ಪುನರ್‌ ಪರಿಶೀಲನೆ ನಡೆಡುವುದಾಗಿ ಹೇಳಿದ್ದಾರೆ. ಐಎಂಎ ಹಗರಣ ಕೂಡಾ ರಾಜ್ಯದ ದೊಡ್ಡ ಹಗರಣ. ಜನಕ್ಕೆ ಸ್ಪಂದಿಸುವ ಸರ್ಕಾರಗಳು ಬರುವವರೆಗೂ ನಮ್ಮ ಹೋರಾಟ ನಿಲ್ಲಲ್ಲ’ ಎಂದು ಸಂಸದ ತೇಜಸ್ವಿ ಸೂರ್ಯ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next