Advertisement

ಧ್ವನಿ ಸಮಸ್ಯೆ ಎಂದರೇನು? ನಿಮ್ಮ ಧ್ವನಿಯನ್ನು ಸಂರಕ್ಷಿಸಿಕೊಳ್ಳಿ

06:09 PM Jun 23, 2022 | Team Udayavani |

ವಿವಿಧ ಪ್ರಾಣಿ ಪಕ್ಷಿಗಳು ಧ್ವನಿಯನ್ನು ಹೊರಡಿಸಬಲ್ಲವಾದರೂ ಅರ್ಥಪೂರ್ಣವಾಗಿ ಮಾತನಾಡುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಹೊಂದಿರುವವರು ನಾವು ಅಂದರೆ ಮನುಷ್ಯರು ಮಾತ್ರ. ನಮಗಿರುವ ಈ ಧ್ವನಿಶಕ್ತಿಯ ಪ್ರಾಮುಖ್ಯದ ಬಗ್ಗೆ ಅರಿವು ಹೆಚ್ಚಿಸಲು ಪ್ರತೀ ವರ್ಷ ಎಪ್ರಿಲ್‌ 16ರಂದು ವಿಶ್ವ ಧ್ವನಿ ದಿನವನ್ನು ಆಚರಿಸಲಾಗುತ್ತದೆ.

Advertisement

ಧ್ವನಿ ಸಮಸ್ಯೆ ಎಂದರೇನು? ಯಾವಾಗ ವೈದ್ಯರನ್ನು ಭೇಟಿಯಾಗಬೇಕು? ಧ್ವನಿಯಲ್ಲಿ ಯಾವುದೇ ಹಠಾತ್‌ ಅಥವಾ ನಿಧಾನವಾದ ಬದಲಾವಣೆಗಳು ಕಂಡುಬಂದು, ಸಾಕಷ್ಟು ದೀರ್ಘ‌ಕಾಲ ಉಳಿದುಕೊಂಡಿದ್ದರೆ ಎಚ್ಚರಿಕೆ ವಹಿಸಬೇಕು.

ಧ್ವನಿಯು ವ್ಯಕ್ತಿಯ ಜೀವಂತಿಕೆಯ ಸಂಕೇತ ಎಂಬುದಾಗಿ ಪರಿಗಣಿಸಲ್ಪಡುತ್ತದೆ. ವ್ಯಕ್ತಿ ನಮ್ಮೆದುರಿಗೆ ಇಲ್ಲದಿದ್ದರೂ ಕೇವಲ ಧ್ವನಿಯನ್ನು ಆಧರಿಸಿ ಗುರುತಿಸುವುದು ನಮಗೆ ಬಹಳ ಸುಲಭ. ಧ್ವನಿಯು ವ್ಯಕ್ತಿಯ ವ್ಯಕ್ತಿತ್ವದ ಹೆಗ್ಗುರುತು.

ಧ್ವನಿಪೆಟ್ಟಿಗೆಗೆ ಉಂಟಾಗುವ ಯಾವುದೇ ವಿಧವಾದ ಹಾನಿಯು ವ್ಯಕ್ತಿ ಪರಿಣಾಮಕಾರಿಯಾಗಿ ಮಾತನಾಡುವ ಶಕ್ತಿಗೆ ಕುಂದು ತರುತ್ತದೆ ಮಾತ್ರವಷ್ಟೇ ನಿಮ್ಮ ಅಲ್ಲ; ಧ್ವನಿ ಪೆಟ್ಟಿಗೆಯು ನಮ್ಮ ಶ್ವಾಸಾಂಗ ವ್ಯೂಹದ ಪ್ರಧಾನ ದ್ವಾರವಾಗಿಯೂ ಕೆಲಸ ಮಾಡುವುದರಿಂದ ಕೆಲವೊಮ್ಮೆ ಮಾರಣಾಂತಿಕವೂ ಆಗಬಹುದು.

ನಿಜ, ನಾವು ಸುರಕ್ಷಿತವಾಗಿ ಆಹಾರ ಸೇವಿಸಬೇಕಾದರೆ ಈ ದ್ವಾರಗಳು ಸರಿಯಾಗಿ ಮುಚ್ಚಿಕೊಂಡಿರಬೇಕು. ಇದು ಧ್ವನಿಪೆಟ್ಟಿಗೆಯ ಜೀವಶಾಸ್ತ್ರೀಯ ಚಟುವಟಿಕೆ. ಅದರ ಜೀವಶಾಸ್ತ್ರೀಯೇತರ ಕೆಲಸ ಎಂದರೆ, ಧ್ವನಿಯನ್ನು ಉತ್ಪತ್ತಿ ಮಾಡುವುದು. ಅದು ನಾವು ಪರಿಣಾಮಕಾರಿಯಾಗಿ ಸಂವಹನ ನಡೆಸುವುದಕ್ಕಾಗಿ ಧ್ವನಿಯನ್ನು ಉತ್ಪಾದಿಸುತ್ತದೆ. ನಮ್ಮನ್ನು ನಾವು ಇತರರಿಗಿಂತ ಭಿನ್ನವಾಗಿರಿಸಿಕೊಳ್ಳಲು ಸಹಾಯ ಮಾಡುವುದು, ನಮ್ಮ ಲಿಂಗತ್ವ ಗುರುತನ್ನು ಒದಗಿಸುವುದು, ನಾವು ಹಾಡಲು, ಬೇರೆ ಬೇರೆ ಸದ್ದುಗಳನ್ನು ಅನುಕರಿಸಲು, ನಮ್ಮ ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು ಇದೇ ಧ್ವನಿಪೆಟ್ಟಿಗೆಯಿಂದ ಉತ್ಪಾದನೆಗೊಂಡ ಧ್ವನಿ. ಹಾಗಾದರೆ ನಮ್ಮ ಧ್ವನಿಪೆಟ್ಟಿಗೆಯ ಮೇಲೆ ಎಷ್ಟು ದೊಡ್ಡ ಹೊರೆ, ಹೊಣೆಗಾರಿಕೆ ಇದೆ ಎಂಬುದನ್ನು ಲೆಕ್ಕ ಹಾಕಿ! ಇಷ್ಟು ಪ್ರಾಮುಖ್ಯ ಕಾರ್ಯಭಾರವನ್ನು ಹೊಂದಿರುವ ಧ್ವನಿಪೆಟ್ಟಿಗೆಯ ಬಗ್ಗೆ ನಾವು ಎಷ್ಟು ಎಚ್ಚರ, ಕಾಳಜಿ ವಹಿಸುತ್ತಿದ್ದೇವೆ? ದುರದೃಷ್ಟವಶಾತ್‌, ನಾವು ಧ್ವನಿ ಸಂಬಂಧಿ ಸಮಸ್ಯೆಗಳನ್ನು ಅನುಭವಿಸುವ ವರೆಗೆ ಧ್ವನಿಪೆಟ್ಟಿಗೆಯ ಪ್ರಾಮುಖ್ಯದ ಬಗ್ಗೆ ನಮಗೆ ಅರಿವಾಗುವುದೇ ಇಲ್ಲ. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕು, ಧ್ವನಿಸಂಬಂಧಿ ಸಮಸ್ಯೆಗಳು ಉಲ್ಬಣಗೊಂಡು ಗಂಭೀರ ದುಷ್ಪರಿಣಾಮ ಉಂಟುಮಾಡುವುದಕ್ಕೆ ಮುನ್ನ ನಾವು ನಮ್ಮ ಧ್ವನಿಪೆಟ್ಟಿಗೆಯ ಬಗ್ಗೆ ಕಾಳಜಿ ವಹಿಸಬೇಕು.

Advertisement

ಯಾರು ಧ್ವನಿ ಸಮಸ್ಯೆಗಳಿಗೆ ತುತ್ತಾಗಬಹುದು?

ವೃತ್ತಿಪರ ಧ್ವನಿ ಬಳಕೆದಾರರಲ್ಲಿ ಧ್ವನಿಸಂಬಂಧಿ ಸಮಸ್ಯೆಗಳು ಹೆಚ್ಚು ಕಂಡುಬರುತ್ತವೆ. ಇಂಥವರಲ್ಲಿ ಶಿಕ್ಷಕರು, ಗಾಯಕ-ಗಾಯಕಿಯರು (ತರಬೇತಿ ಹೊಂದಿದವರು, ತರಬೇತಿ ಇಲ್ಲದ ಹವ್ಯಾಸಿಗಳು, ಭಜನೆ ಹಾಡುಗಾರರು ಮತ್ತು ಆರ್ಕೆಸ್ಟ್ರಾ ಹಾಡುಗಾರರು), ಯಕ್ಷಗಾನ ಕಲಾವಿದರು, ನಾಟಕ ಕಲಾವಿದರು, ಬಸ್‌ ನಿರ್ವಾಹಕರು, ಮಾರಾಟಗಾರರು ಮತ್ತು ದೂರವಾಣಿ ಆಪರೇಟರ್‌ಗಳು ಸೇರಿದ್ದಾರೆ. ಧ್ವನಿಸಂಬಂಧಿ ಸಮಸ್ಯೆಗಳು ಗೃಹಿಣಿರು, ಸಣ್ಣ ಮಕ್ಕಳು ಮತ್ತು ಹಿರಿಯರಲ್ಲಿಯೂ ಕಂಡುಬರುತ್ತವೆ.

ಸ್ಪೀಚ್‌ ಪೆಥಾಲಜಿಸ್ಟ್‌ಗಳನ್ನು ಯಾಕೆ ಆದಷ್ಟು ಬೇಗನೆ ಕಾಣಬೇಕು?

ಧ್ವನಿ ಸಂಬಂಧಿ ಸಮಸ್ಯೆಗಳಲ್ಲಿ ಹಲವನ್ನು ವರ್ತನಾತ್ಮಕ ಧ್ವನಿ ಚಿಕಿತ್ಸೆ (ಬಿಹೇವಿಯರಲ್‌ ವಾಯಿಸ್‌ ಥೆರಪಿ)ಯಿಂದಲೇ ಗುಣಪಡಿಸಬಹುದಾದ್ದರಿಂದ ಆದಷ್ಟು ಬೇಗನೆ ಸ್ಪೀಚ್‌ ಪೆಥಾಲಜಿಸ್ಟ್‌ ಅವರನ್ನು ಸಂಪರ್ಕಿಸಬೇಕು. ಸರಳವಾಗಿ ಹೇಳಬೇಕೆಂದರೆ, ಧ್ವನಿಸಂಬಂಧಿ ಸಮಸ್ಯೆಗಳನ್ನು ಬೇಗನೆ ಗುರುತಿಸಿದರೆ ಧ್ವನಿ ಚಿಕಿತ್ಸೆಯಿಂದ ಅವುಗಳಿಗೆ ಉಪಶಮನ ಒದಗಿಸಬಹುದು. ಸಮಸ್ಯೆ ಉಲ್ಬಣಿಸಿದರೆ ಧ್ವನಿ ಚಿಕಿತ್ಸೆ ಮತ್ತು/ ಅಥವಾ ಶಸ್ತ್ರಚಿಕಿತ್ಸೆ ಅಗತ್ಯ ಬೀಳಬಹುದು.

ಸ್ಪೀಚ್‌ ಪೆಥಾಲಜಿಸ್ಟ್‌ಗಳನ್ನು ಬೇಗನೆ ಕಾಣಬೇಕಾದ ಇತರರು ಯಾರು?

ಪ್ರೌಢ ವಯಸ್ಸಿಗೆ ಕಾಲಿಡುವ ಸಮಯದಲ್ಲಿ ಧ್ವನಿ ಬೆಳವಣಿಗೆ ಉಂಟಾಗದ ಮತ್ತು ಹುಡುಗಿಯರ ಧ್ವನಿಯನ್ನು ಹೋಲುವ ಧ್ವನಿಯುಳ್ಳ ಹದಿಹರಯದ ಹುಡುಗರು, ಮೂಗಿನಿಂದ ಮಾತಾಡಿದಂತಹ ಧ್ವನಿಯುಳ್ಳವರು, ನರಶಾಸ್ತ್ರೀಯ ಸಮಸ್ಯೆಗಳನ್ನು ಹೊಂದಿರುವ ವಯೋವೃದ್ಧರು ಮತ್ತು ತಮ್ಮ ಧ್ವನಿ ತೀರಾ ಸಣ್ಣದಾಗಿದೆ ಎಂದುಕೊಳ್ಳುವವರು, ಸಂಭಾಷಣೆಯನ್ನು ಪೂರ್ಣಗೊಳಿಸಲು ಕಷ್ಟವಾಗಿ ಕೀರಲು ಧ್ವನಿಯೊಂದಿಗೆ ಏದುಸಿರು ಬಿಡುವವರು ಕೂಡ ಆದಷ್ಟು ಬೇಗನೆ ಸ್ಪೀಚ್‌ ಪೆಥಾಲಜಿಸ್ಟ್‌ರನ್ನು ಕಾಣಬೇಕು.

– ಡಾ| ದೀಪಾ ಎನ್‌. ದೇವಾಡಿಗ ಅಸೋಸಿಯೇಟ್‌ ಪ್ರೊಫೆಸರ್‌, ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ ಟಿಎಂಎ ಪೈ ಆಸ್ಪತ್ರೆ, ಉಡುಪಿ/ ಎಂಸಿಎಚ್‌ಪಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next