Advertisement

100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಪ್ರಸ್ತಾವನೆ

10:03 AM Jun 30, 2019 | Suhan S |

ಗುಳೇದಗುಡ್ಡ: ಪಟ್ಟಣದ ಸರಕಾರಿ ಆಸ್ಪತ್ರೆಯನ್ನು 30 ಹಾಸಿಗೆಯಿಂದ 100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಜೊತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾಗಿರುವ ಡಯಾಲಾಸಿಸ್‌ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಬಾದಾಮಿ ಬರಗಾಲ ತಾಲೂಕು ಆಗಿರುವುದರಿಂದ ಈ

ಭಾಗದ ಪರ್ವತಿ, ಹಿರೇಕೆರೆ, ಗಂಜಿಗೇರಿ ಕೆರೆಗಳಿಗೆ ನೀರು ತುಂಬಿಸಲು 12ಕೋಟಿ ರೂ. ಯೋಜನೆ ಹಾಕಿಕೊಂಡಿದ್ದೇನೆ. ಕೆರೆಗಳು ತುಂಬಿಸಿದರೆ ಅಂತರ್ಜಲ ಹೆಚ್ಚುತ್ತದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತದೆ. ಗುಳೇದಗುಡಕ್ಕೆ ಡಿಗ್ರಿ ಕಾಲೇಜು ಮಂಜೂರಾಗಿದೆ. ಸಂಗಮ ಸಂಕೇಶ್ವರ ರಸ್ತೆ ಅಭಿವೃದ್ಧಿಗೆ 35 ಕೋಟಿ ಮಂಜೂರು ಮಾಡಿಸಿದ್ದೇನೆ. ಬಾದಾಮಿ ಮತಕ್ಷೇತ್ರಕ್ಕೆ ಸುಮಾರು 900 ಕೋಟಿ ಅನುದಾನ ಮಂಜೂರಿ ಮಾಡಿಸಿದ್ದು, ಇನ್ನೂ ಹೆಚ್ಚಿನ ಕೆಲಸ ಮಾಡಿಸುವ ಭರವಸೆ ನೀಡಿದರು.

ಕಿಡ್ನಿ ಸಮಸ್ಯೆಯಿಂದ ಬಳಲುವವರು ಕನಿಷ್ಠ ವಾರದಲ್ಲಿ 2ಬಾರಿ ಚಿಕಿತ್ಸೆ ಪಡೆದುಕೊಳ್ಳುವ ಅವಶ್ಯಕತೆಯಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿನ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಾಸಿಸ್‌ ಕೇಂದ್ರ ಇರಬೇಕೆಂದು ಮೊದಲು ಆ ಯೋಜನೆ ಜಾರಿಗೆ ತಂದಿದ್ದೇ ಎಂದರು. ಪ್ರತಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ಆರಂಭಿಸಲು ಯೋಜನೆ ರೂಪಿಸಿದ್ದೇನೆ. ಬಡವರ ಅನುಕೂಲಕ್ಕಾಗಿ ನಾನು ಇಂತಹ ಜನಪರ ಕಾರ್ಯಗಳನ್ನು ಜಾರಿಗೆ ತಂದಿದ್ದೇನೆ ಎಂದು ಹೇಳಿದರು.

ಸಚಿವ ಶಿವಾನಂದ ಪಾಟೀಲ, ಮಾಜಿ ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ, ಮಾಜಿ ಶಾಸಕರಾದ ಬಿ.ಬಿ.ಚಿಮ್ಮನಕಟ್ಟಿ, ಎಸ್‌.ಜಿ.ನಂಜಯ್ಯನಮಠ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಹೊಳಬಸು ಶೆಟ್ಟರ, ಸಂಜಯ ಬರಗುಂಡಿ, ರಾಜು ಚಿಮ್ಮನಕಟ್ಟಿ, ರಾಜು ಜವಳಿ, ಡಾ| ದೇವರಾಜ ಪಾಟೀಲ ಮಲ್ಲಣ್ಣ ಯಲಿಗಾರ, ಮಹೇಶ ಹೊಸಗೌಡ್ರ, ನಾಗಪ್ಪ ಗೌಡರ, ವೈ.ಆರ್‌.ಹೆಬ್ಬಳ್ಳಿ, ರಾಜು ತಾಪಡಿಯಾ, ಜುಗಲಕಿಶೋರ ಭಟ್ಟಡ, ಐ.ಸಿ.ಯಂಡಿಗೇರಿ, ಗೋಪಾಲ ಭಟ್ಟಡ, ಮುಬಾರಕ ಮಂಗಳೂರು, ಪುರಸಭೆ ಸದಸ್ಯರಾದ ಶ್ಯಾಮ ಮೇಡಿ, ಅಂಬು ಕವಡಿಮಟ್ಟಿ, ವಿನೋದ ಮದ್ದಾನಿ, ವಿದ್ಯಾ ಮುರಗೋಡ, ವಂದನಾ ಭಟ್ಟಡ, ಶಿಲ್ಪಾ ಹಳ್ಳಿ, ಜಿಲ್ಲಾಧಿಕಾರಿ ಎಸ್‌.ರಾಮಚಂದ್ರನ, ಸಿಇಒ ಗಂಗೂಬಾಯಿ ಮಾನಕರ, ಡಿಎಚ್ಒ ದೇಸಾಯಿ, ಎಸಿ ಎಚ್.ಜಯಾ, ತಹಶೀಲ್ದಾರ್‌ ಇಂಗಳೆ, ವೈದ್ಯಾಧಿಕಾರಿ ಡಾ| ನಾಗರಾಜ ಕುರಿ ಇತರರು ಇದ್ದರು.

ಸಚಿವರು ನನ್ನ ಮಾತು ಕೇಳುತ್ತಾರೆ:

ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಪ್ರಯತ್ನಿಸುತ್ತೆನೆ. ಮಾಜಿ ಮುಖ್ಯಮಂತ್ರಿಯಾಗಿರುವುದರಿಂದ ಸಚಿವರು ನನ್ನ ಮಾತು ಕೇಳುತ್ತಾರೆ. ಹಾಗಾಗಿ ಕೆಲಸಗಳು ನಡೆಯುತ್ತವೆ ಎಂದು ಸಿದ್ದರಾಮಯ್ಯ ಹೇಳಿದರು. ಮೈಸೂರಿನಿಂದ ಬಂದ ನನ್ನನ್ನು ಗೆಲ್ಲಿಸಿದ್ದೀರಿ, ಆ ಋಣ ತೀರಿಸಬೇಕಲ್ಲವೇ ಅದಕ್ಕೋಸ್ಕರ ಹೆಚ್ಚಿನ ಕೆಲಸ ಮಾಡಿಸಬೇಕೆಂಬುದು ನನ್ನ ಉದ್ದೇಶ. ಬಾದಾಮಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next