ಮೈಸೂರು: ವಿವಿಧ ಸಂಘಟನೆಗಳು ಜ.10 ರಂದು ಮಂಗಳವಾರ ನಗರದ ರಂಗಾಯಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಂಗಾಯಣ ಸುತ್ತಮುತ್ತ 200ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.೩೧ರಂದು ರಂಗಾಯಣ ಆವರಣದಲ್ಲಿ ಪ್ರದರ್ಶನ ಗೊಂಡ ಸಾಂಬಶಿವ ಪ್ರಹಸನ ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಕುರುಬರ ಸಂಘ, ಕರ್ನಾಟಕ ರಾಜ್ಯ ಹಿಂದುಳಿದ ವೇದಿಕೆ, ಕಾಂಗ್ರೆಸ್ ಮುಖಂಡರು ಸೇರಿ ಸುಮಾರು 10ಸಾವಿರ ಜನರು ರಂಗಾಯಣಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ. ಆದ್ದರಿಂದ ರಂಗಾಯಣದ ಸಾರ್ವಜನಿಕ ಆಸ್ತಿಯ ನಷ್ಟ ಹಾಗೂ ನೌಕರರ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗುವು ಸಾಧ್ಯತೆ ಇದ್ದು, ಆದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗೃತಾ ಕ್ರಮವಾಗಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಯಾವುದೇ ಸಂಘಟನೆ ಹಾಗೂ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ಮೆರವಣಿಗೆ ಮತ್ತು ಮುತ್ತಿಗೆ ಚಳವಳಿಯನ್ನು ನಡೆಸಲು ಪ್ರಯತ್ನಿಸಿದರೆ ಅಂತವರ ವಿರುದ್ಧ ಅಕ್ರಮ ಕೂಟವೆಂದು ಪರಿಗಣಿಸಿ ಅದೇಶ ಉಲ್ಲಂಘನೆ ಕುರಿತಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕೌಟಿಲ್ಯ ವೃತ್ತದಿಂದ, ಪದ್ಮಾ ವೃತ್ತ ಹಾಗೂ ರಂಗಾಯಣದ ಕಡೆಗೆ
ಡಿ.ಸಿ. ಕಚೇರಿ ಆರ್ಚ್ ಗೇಟ್ ನಿಂದ ರಂಗಾಯಣದ ಕಡೆಗೆ
ವಿಎಂಡಿ ಜಂಕ್ಷನ್, ಪದ್ಮಾ ವೃತ್ತದಿಂದ ರಂಗಾಯಣದ ಕಡೆಗೆ
ವಾಲ್ಮೀಕಿ ವೃತ್ತದಿಂದ ರಂಗಾಯಣದ ಕಡೆಗೆ