Advertisement

ಕಬ್ಬು ನಾಟಿ ಮಾಡಿ, ಗದ್ದೆಗೆ ಗೊಬ್ಬರ ಹಾಕಿದ ಕೃಷಿ ಸಚಿವ ಬಿ.ಸಿ ಪಾಟೀಲ್

08:23 PM Feb 20, 2021 | Team Udayavani |

ಬೀದರ್ :ರೈತ ಬಾಂಧವರಲ್ಲಿ ಸಮಗ್ರ ಕೃಷಿ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಂಪೂರ್ಣ ಒಂದು ದಿನ ಅನ್ನದಾತರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಕೃಷಿ ಸಚಿವ ಬಿ.ಸಿ ಪಾಟೀಲ್  ಆಯೋಜಿಸಿರುವ ‘ರೈತರೊಂದಿಗೊಂದು ದಿನ’ ಕಾರ್ಯಕ್ರಮ ಶನಿವಾರ ಬಸವಕಲ್ಯಾಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯಿತು. ಈ ಸಮಯದಲ್ಲಿ ಪ್ರಗತಿಪರ ರೈತರ ಕೃಷಿ ಪದ್ಧತಿಗಳನ್ನು ಸಚಿವರು ವೀಕ್ಷಿಸಿ ಬೆನ್ನು ತಟ್ಟಿದರು.

Advertisement

ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಕೃಷಿ ಸಚಿವ ಬಿ.ಸಿ ಪಾಟೀಲ್, ಶನಿವಾರ ಬೆಳಿಗ್ಗೆ ಬೀದರ್ ನಗರದ ನೌಬಾದ್‌ನಲ್ಲಿ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡವನ್ನು ವೀಕ್ಷಿಸಿ ಬಳಿಕ ನೇರವಾಗಿ ಬಸವಕಲ್ಯಾಣ ತಾಲೂಕಿನ ಧನ್ನೂರ (ಕೆ) ಗ್ರಾಮಕ್ಕೆ ತೆರಳಿದರು. ಈ ಸಂದರ್ಭದಲ್ಲಿ  ಸಚಿವರನ್ನು ಎತ್ತಿನ ಬಂಡಿಯಲ್ಲಿ ಸ್ವಾಗತಿಸಿ ಸನ್ಮಾನಿಸಿದರು. ತದನಂತರ ಮುಸ್ತಾಪೂರ, ಧನ್ನೂರ ಗ್ರಾಮ ವ್ಯಾಪ್ತಿಯ ಜಮೀನುಗಳಿಗೆ ಭೇಟಿ ನೀಡಿ, ಯಶಸ್ವಿ ರೈತರು ಯಾವ ರೀತಿ ಪದ್ಧತಿ ಅಳವಡಿಸಿಕೊಂಡಿದ್ದಾರೆ ಮತ್ತು ಆದಾಯ ಪಡೆಯುತ್ತಿದ್ದಾರೆ ಎಂಬುದರ ಮಾಹಿತಿ ಸಂಗ್ರಹಿಸಿದರು.

ಕಬ್ಬಿನ ಗಾಣ ಹಾಯಿಸಿದ ಪಾಟೀಲ್:

ಸಮಗ್ರ ಕೃಷಿ ಪದ್ಧತಿ ಮಾಡುತ್ತಿರುವ ದಯಾನಂದ ಪಾಟೀಲ್ ಅವರ ತೋಟದಲ್ಲಿ ಕಬ್ಬಿಣ ಗಾಣ (ಆಲೆಮನೆ)ಯ ಚಟುವಟಿಕೆಯನ್ನು ವೀಕ್ಷಿಸಿದರಲ್ಲದೆ ಕಬ್ಬಿನ ಬೆಳೆಗೆ ಜಿಪ್ಸಂ ಮತ್ತು ಸಾವಯವ ಗೊಬ್ಬರ ಹಾಕುವುದರ ಜೊತೆಗೆ ಮಣ್ಣು ಏರಿಸಿ ಗಮನ ಸೆಳೆದರು. ಈ ವೇಳೆ ಕಬ್ಬಿನ ಹಾಲು ಸೇವಿಸಿ, ಬೆಲ್ಲದ ರುಚಿಯನ್ನು ಸವಿದರು. ಕಬ್ಬಿನ ಗಾಣ ನಡೆಸಲು ಎದುರಾಗುತ್ತಿರುವ ಸಮಸ್ಯೆಗಳು, ಬೆಲ್ಲಕ್ಕೆ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ರೈತ ಪಾಟೀಲ್ ಸಚಿವರ ಗಮನಕ್ಕೆ ತಂದರು.

ಇದನ್ನೂ ಓದಿ:ಜುಲೈ 2ರಿಂದ ತೆರೆಮೇಲೆ ರಾರಾಜಿಸಲಿದ್ದಾನೆ “ಶೇರ್ ಶಾ”

Advertisement

ಇದಕ್ಕೂ ಮುನ್ನ ಶಂಕರರಾವ್ ಬಿರಾದಾರ, ಬಾಲಾಜಿ ಪಾಟೀಲ್ ಮತ್ತು ನಾನಾ ಪಾಟೀಲ್ ಅವರ ಹೊಲದಲ್ಲಿ ಕಬ್ಬಿನ ಎಸ್‌ಎಸ್‌ಐ ಮಾದರಿಯ ನಾಟಿ, ಹನಿ ನೀರಾವರಿ ಘಟಕ ಅಳವಡಿಕೆ ಮತ್ತು ಕಬ್ಬಿನ ಬೆಳೆಯಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರ ಸಿಂಪಡಣೆ ಮಾಡಿದರು. ಜೋಳದ ಹೊಲದಲ್ಲಿ ಧ್ವನಿವರ್ಧಕ ಹಾಗೂ ಹೊಳೆಯುವ ರಿಬ್ಬನ್ ಕಟ್ಟುವ ಮುಖಾಂತರ ಹಕ್ಕಿ ಓಡಿಸುವ, ಗೋಧಿ ಬೆಳೆಯಲ್ಲಿ ಕಂಬೈನ್ಡ್ ಹಾರ್ವೇಸ್ಟರ್ ಮೂಲಕ ರಾಶಿ ಮಾಡುವ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಈ ನಡುವೆ ಟ್ರ್ಯಾಕ್ಟರ್ ಓಡಿಸಿ ಗಮನ ಸೆಳೆದರು.

ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಕೆ:

ಇದಾದ ಬಳಿಕ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ರೈತರಿಂದ ಕೃಷಿಗೆ ಸಂಬಂಧಿತ ಸಲಹೆ ಮತ್ತು ಬೇಡಿಕೆಗಳನ್ನು ಆಲಿಸಿದರು. ಈ ವೇಳೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ವಿಕಾಸ ಸೌಧದಲ್ಲಿ ಆಡಳಿತ ನಡೆಸುವ ಬದಲು ಸರ್ಕಾರವನ್ನು ರೈತರ ಮನೆ ಬಾಗಿಲಿಗೆ ತರುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ‘ರೈತರೊಂದಿಗೊಂದು ದಿನ’ ಹಮ್ಮಿಕೊಂಡಿದ್ದು, ಬೀದರ್ ಐದನೇ ಜಿಲ್ಲೆಯಾಗಿದೆ. ಆಯಾ ಭಾಗದ ಕೃಷಿಗೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಿ, ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಈ ಮೂಲಕ ಅನ್ನದಾತರನ್ನು ಸಂಕಷ್ಟದಿಂದ ಪಾರು ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸರ್ಕಾರ ನಡೆಯುತ್ತಿದೆ. ಬಜೆಟ್‌ನಲ್ಲಿ ಕೃಷಿಗೆ ಉತ್ತೇಜನಕ್ಕಾಗಿ ಹೆಚ್ಚಿನ ಒತ್ತು ನೀಡಲು ಸಿಎಂಗೆ ಮನವಿ ಮಾಡಲಾಗಿದೆ. ಆಕಸ್ಮಿಕವಾಗಿ ಸಾವನ್ನಪ್ಪುವ ರೈತರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 2 ರಿಂದ 5 ಲಕ್ಷಕ್ಕೆ ಹೆಚ್ಚಿಸುವುದು, ಜಾನುವಾರುಗಳು ಮೃತಪಟ್ಟರೆ ಪರಿಹಾರ ಹಾಗೂ ಹುಲ್ಲಿನ ಬಣಮಗೆ ಬೆಂಕಿಯಿಂದ ನಷ್ಟವಾದಲ್ಲಿ ಪರಿಹಾರ ಮೊತ್ತ ಹೆಚ್ಚಳಕ್ಕೆ ಒತ್ತಾಯಿಸಲಾಗಿದ್ದು, ಇದಕ್ಕೆ ಸಿಎಂ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ನಾನು ರೈತರು ನೀಡಿರುವ ಸಲಹೆಗಳನ್ನು ಜಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ, ಜಿಪಂ ಅಧ್ಯಕ್ಷೆ ನಿರ್ಮಲಾ ಮಾನಗೋಪಾಳೆ,  ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮತ್ತು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಪಂ ಸದಸ್ಯ ಗುಂಡು ರೆಡ್ಡಿ ಮತ್ತಿತರರರು ಸಚಿವ ಪಾಟೀಲ ಅವರಿಗೆ ಸಾಥ್ ನೀಡಿದರು. ಕೃಷಿ ಇಲಾಖೆ ಅಧಿಕಾರಿಗಳು, ರೈತರು ಭಾಗವಹಿಸಿದ್ದರು.

ಅನ್ನದಾತರ ಸಲಹೆ, ಬೇಡಿಕೆಗಳು

‘ರೈತರೊಂದಿಗೊಂದು ದಿನ’ ಕಾರ್ಯಕ್ರಮದಲ್ಲಿ ಅನ್ನದಾತರು ಕೃಷಿ ಸಚಿವರ ಮುಂದೆ ಬೇಡಿಕೆಗಳನ್ನು ಮುಂದಿಟ್ಟು ಆದ್ಯತೆ ಮೇರೆ ಜಾರಿಗೊಳಿಸುವ ಮೂಲಕ ಕೃಷಿ ಮತ್ತು ಕೃಷಿಕರನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಸಮಸ್ಯೆ ಎದುರಾಗುತ್ತಿರುವ ಹಿನ್ನಲೆ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ಪ್ರಮಾಣ ಹೆಚ್ಚಿಸಬೇಕು. ಆಸಕ್ತ ಎಲ್ಲ ರೈತರಿಗೆ ಶೇ. 75ರ ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ನೀಡಿದ್ದಲ್ಲಿ ಕಡಿಮೆ ಬಜೆಟ್‌ನಲ್ಲಿ ಕೃಷಿ ಮಾಡಲು ಸುಲಭವಾಗುತ್ತದೆ ಎಂದು ನಾಗನಾಥ ಧನ್ನೂರ ಮತ್ತು ಗುರುನಾಥ ವಡ್ಡೆ ಸಲಹೆ ನೀಡಿದರೆ, ಹೊಲದಲ್ಲಿ ಶೆಡ್ ನಿರ್ಮಾಣ ಸೇರಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಅನುಷ್ಠಾನದಲ್ಲಿ ಜಾತಿ ತಾರತಮ್ಯ ತಡೆಯಬೇಕು. ಹೈನುಗಾರಿಕೆಗೆ ಒತ್ತು ಕೊಡಲು ಪ್ರತಿ ರೈತ ಕುಟುಂಬಕ್ಕೆ 2 ದೇಸಿ ಆಕಳು ನೀಡಬೇಕು ಎಂದು ಒತ್ತಾಯಿಸಿದರು.

ಕೃಷಿಕರು ಕಷ್ಟಪಟ್ಟು ಬೆಳೆದಿರುವ ಬೆಳೆಗಳನ್ನು ಪ್ರಾಣಿಗಳು ಹಾಳು ಮಾಡುತ್ತಿದ್ದು, ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದೆ ಪರಿಹಾರ ಕಲ್ಪಿಸಬೇಕು. ಜಮೀನುಗಳಿಗೆ ತೆರಳಲು ದಾರಿ ವ್ಯವಸ್ಥೆ ಆಗಬೇಕು. ಸಬ್ಸಿಡಿ ಮೂಲಕ ರಸಗೊಬ್ಬರ, ಬೀಜಗಳನ್ನು ಏಪ್ರಿಲ್ ತಿಂಗಳಿಂದಲೇ ವಿತರಣೆ ಮಾಡಬೇಕು. ಮುಖ್ಯವಾಗಿ ರೈತರು ಬೆಳೆಗಳನ್ನು ಮಾರುಕಟ್ಟೆಯಲ್ಲಿ ಮಾರಿದ ಬಳಿಕ ಖರೀದಿ ಕೇಂದ್ರಗಳನ್ನು ಆರಂಭಿಸಿದರೆ ಪ್ರಯೋಜನವಿಲ್ಲ, ರಾಶಿ ಪೂರ್ವದಲ್ಲಿಯೇ ಕೇಂದ್ರ ಸ್ಥಾಪನೆ ಪ್ರಕ್ರಿಯೆ ಶುರು ಮಾಡಬೇಕು ಎಂದು ಎಚ್. ಕಾಶಿನಾಥ ಸಲಹೆ ನೀಡಿದರು.

ಸರ್ಕಾರ 21 ಬೆಳೆಗಳಿಗೆ ಮಾತ್ರ ಬೆಂಬಲ ಬೆಲೆ ಘೋಷಿಸಿದ್ದು, ಇನ್ನುಳಿದ ಬೆಳೆಗೂ ಬೆಲೆ ನಿಗದಿ ಮಾಡಬೇಕು. ಮಾರಾಟಕ್ಕಾಗಿ ವಿಧಿಸುವ ಷರತ್ತುಗಳನ್ನು ತೆಗೆದು, ಕೇವಲ 15 ದಿನದಲ್ಲಿ ಬೆಳೆಗಾರರಿಗೆ ಹಣ ಪಾವತಿಗೆ ಕ್ರಮ ವಹಿಸಬೇಕು. ರಾತ್ರಿ ಸಮಯದಲ್ಲಿ ಹೊಲಗಳಿಗೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು ಎಂದು ರೈತ ಮುಖಂಡ ಪಾಟೀಲ್ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next