Advertisement

ಬಸ್ ನಲ್ಲಿ ಗಾಂಜಾ ಮಾರಾಟ : ಕೇರಳದ ಬಸ್‌ ಮಾಲೀಕ ಸೇರಿ ನಾಲ್ವರ ಬಂಧನ

07:40 PM Apr 12, 2021 | Team Udayavani |

ಬೆಂಗಳೂರು: ಕೇರಳದಿಂದ ಖಾಸಗಿ ಬಸ್‌ ನಲ್ಲಿ ಗಾಂಜಾ ಹಾಗೂ ಹ್ಯಾಷ್‌ ಆಯಿಲನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಸೇರಿ ಒಟ್ಟು ನಾಲ್ವರನ್ನು ಮಡಿವಾಳ ಉಪವಿಭಾಗದ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಕೇರಳದ ಕಾಸರಗೋಡಿನ ಮೋಹಮ್ಮದ್‌ ಮುಸ್ತಾಕ್‌(31) ಮತ್ತು ಮೊಹಮ್ಮದ್‌ ಆಶೀಕ್‌(19) ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬಂಟವಾಳ ತಾಲೂಕಿನ ಪಿ. ಸಮೀರ ಹಾಗೂ ಮೊಹಮ್ಮದ್‌ ಅಫ್ರೀದ್‌ (23) ಬಂಧಿತರು. ಅವರಿಂದ 15 ಲಕ್ಷ ರೂ. ಮೌಲ್ಯದ 48 ಕೆ.ಜಿ. 180 ಗ್ರಾಂ ತೂಕದ ಗಾಂಜಾ, 45 ಲಕ್ಷ ರೂ. ಮೌಲ್ಯದ 1 ಕೆ.ಜಿ. 134 ಗ್ರಾಂ ಹ್ಯಾಷ್‌ ಆಯಿಲ್‌, ಕೃತ್ಯಕ್ಕೆ ಬಳಸಿದ್ದ ಒಂದು ತೂಕದ ಯಂತ್ರ, ಖಾಸಗಿ ಬಸ್‌, ಒಂದು ಕಾರು, 4.700 ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿಚಾರಣೆಯಲ್ಲಿ ನಗರದ ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ :ನನ್ನ ಸಂಗೀತ ಕಲೆಗೆ ಮನೆಯವರಿಂದಲೇ ಪ್ರೋತ್ಸಾಹ: ಕಲಾವತಿ ದಯಾನಂದ್

ಸ್ಲೀಪರ್‌ ಬಸ್‌ನಲ್ಲಿ ಸಾಗಾಟ
ಆರೋಪಿಗಳ ಪೈಕಿ ಮೊಹಮ್ಮದ್‌ ಮುಸ್ತಾಕ್‌ ಸ್ಲೀಪರ್‌ ಖಾಸಗಿ ಬಸ್‌ ಮಾಲೀಕನಾಗಿದ್ದು, ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಳೀಯ ಗಾಂಜಾ ಮಾರಾಟಗಾರರ ಸಂಪರ್ಕ ಪಡೆದು ಅಕ್ರಮ ದಂಧೆಯಲ್ಲಿ ತೊಡಗಿದ್ದಾನೆ. ನೂರಾರು ಕೆ.ಜಿ.ಗಾಂಜಾ ಬೇಯಿಸಿ ಹ್ಯಾಷ್‌ ಆಯಿಲ್‌ ತಯಾರಿಸಿ ಅವುಗಳನ್ನು ಬಾಟಲಿಗಳಲ್ಲಿ ತುಂಬಲಾಗಿತ್ತು. ಅನಂತರ ಕೇರಳದ ಕಾಸರಗೋಡಿನಿಂದ ನಿತ್ಯ ಬೆಂಗಳೂರಿಗೆ ಬರುವ ಬಸ್‌ ನ ಲಗೇಜ್‌ ಬಾಕ್ಸ್‌ ಮತ್ತು ಟೂಲ್‌ ಬಾಕ್ಸ್‌ಗಳಲ್ಲಿ ಇಟ್ಟು ಹ್ಯಾಷ್‌ ಆಯಿಲ್‌ ಮತ್ತು ಗಾಂಜಾವನ್ನು ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದರು. ಅನಂತರ ಇಲ್ಲಿನ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು.

ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಮಡಿವಾಳ ಉಪ ವಿಭಾಗದ ಎಸಿಪಿ ಸುಧೀರ್‌ ಎಂ.ಹೆಗಡೆ ಮತ್ತು ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯ ವಿ.ಮುನಿರೆಡ್ಡಿ ನೇತೃತ್ವದ ತಂಡ ಬಸ್‌ ಮೇಲೆ ದಾಳಿ ನಡೆಸಿದಾಗ ಅಲ್ಲಿನ ಲಗೇಜ್‌ ಮತ್ತು ಟೂಲ್‌ ಬಾಕ್ಸ್‌ಗಳಲ್ಲಿ ಅಕ್ರಮವಾಗಿ ಮಾದಕ ವಸ್ತುಗಳು ಪತ್ತೆಯಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next