Advertisement

ಹಣ ದುರ್ಬಳಕೆ ಮಾಡಿಕೊಂಡ ಆರೋಪಿಗಳ ಸೆರೆ

05:14 AM Jan 08, 2019 | |

ಬೆಂಗಳೂರು: ಮಣಿಪಾಲ್‌ ಎಜುಕೇಷನ್‌ ಹಾಗೂ ಮೆಡಿಕಲ್‌ ಗ್ರೂಪ್‌(ಎಂಇಎಂಜಿ) ಕಂಪನಿಗೆ ವಂಚಿಸಿ ಕಂಪನಿಯ ಸುಮಾರು 62 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಎಂಇಎಂಜಿ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಆಗಿದ್ದ ಸಂದೀಪ್‌ ಗುರುರಾಜ್‌ (38)ಆತನ ಪತ್ನಿ ಚಾರುಸ್ಮಿತಾ (30)
ಮೀರಾ ಚಂಗಪ್ಪ ( 59) ಈಕೆಯ ಮಗಳು ಅಮ್ರಿತಾ ಚಂಗಪ್ಪ (32) ಬಂಧಿತರು. ಮೀರಾ ಚಂಗಪ್ಪ ಅವರ ಮಗ ಕತಾರ್‌ ಏರ್‌ ವೇಸ್‌ನಲ್ಲಿ ಫೈಲಟ್‌ ಆಗಿರುವ ವಿಶಾಲ್‌ ಸೋಮಣ್ಣ ಬಂಧನಕ್ಕೆ ಲುಕ್‌ಔಟ್‌ ನೋಟಿಸ್‌ ಹೊರಡಿಸಲಾಗಿದೆ.

ಎಂಇಎಂಜಿ ಕಂಪನಿಯ ಅಧ್ಯಕ್ಷ ಡಾ. ರಂಜನ್‌ ಪೈ ಹಾಗೂ ಅವರ ಪತ್ನಿ ಶ್ರುತಿ ಪೈ ಅವರ ಮತ್ತು ಕಂಪನಿಯ ಖಾತೆಗಳಿಂದ ಸಂದೀಪ್‌, ತನ್ನ ಪತ್ನಿ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ ಸಂಗತಿ ಕಂಪನಿಯ ಆಡಿಟಿಂಗ್‌ ವೇಳೆ ಗೊತ್ತಾಗಿತ್ತು. ಪರಿಶೀಲನೆ ನಡೆಸಿದಾಗ ಆರೋಪಿ 62 ಕೋಟಿ ರೂ, ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಂಇಎಂಜಿ ಸಿಇಒ ನೀಡಿದ್ದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. 

15 ವರ್ಷಗಳಿಂದ ಎಂಇಎಂಜಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದೀಪ್‌, ಕಂಪನಿ ಆತನ ಮೇಲಿಟ್ಟಿದ್ದ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಎಸಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಎಂಇಎಂಜಿ ಕಂಪನಿಯ ಅಕೌಂಟ್‌ಗಳಿಂದ ಆತನ ಪತ್ನಿ ಚಾರುಸ್ಮಿತಾ ಹಾಗೂ ಸ್ನೇಹಿತ ದೋಹಾ ನಗರ ನಿವಾಸಿ ವಿಶಾಲ್‌ ಸೋಮಣ್ಣ ಅಕೌಂಟ್‌ಗಳಿಗೆ ಕೋಟ್ಯಾಂತರ ರೂ. ಹಣ
ವರ್ಗಾವಣೆ ಮಾಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪೈಕಿ ಕಂಪನಿಯ ಅಂತಾರಾಷ್ಟ್ರೀಯ ಬ್ಯಾಂಕ್‌ ಖಾತೆಯಿಂದ ವಿಶಾಲ್‌ ಸೋಮಣ್ಣ ಬ್ಯಾಂಕ್‌ ಖಾತೆಗೆ 18. 87 ಕೋಟಿ ರೂ, ಎಫ್ .ಸಿ ಫ್ರೈಮ್‌ ಮಾರ್ಕೆಟ್ಸ್‌ ಹಾಗೂ ಎ.ವಿ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ 6.9 ಕೋಟಿ ರೂ. ವರ್ಗಾವಣೆ ಮಾಡಿದ್ದಾನೆ. ಪಿನಾಕಲ್‌ ಅಸೆಟ್‌ ಇನ್‌ವೆಸ್ಟ್‌ಮೆಂಟ್‌ ಹೆಸರಿನಲ್ಲಿ ಷೇರು ಮಾರುಕಟ್ಟೆಯಲ್ಲಿ 10.35 ಕೋಟಿ ಹೂಡಿಕೆ ಮಾಡಿದ್ದು, ಎಂಇಎಂಜಿ ಕಂಪನಿ ದುಬೈನ ಡಿಎಂಸಿಸಿ ಕಂಪನಿ ಮುಚ್ಚುವಂತೆ ಸೂಚಿಸಿದ್ದರೂ ಕೇಳದ ಸಂದೀಪ್‌ ಕಂಪನಿಯ ಗಮನಕ್ಕೆ ತರದೇ ಅದೇ ಕಂಪನಿಗೆ ಅಕ್ರಮವಾಗಿ 10.35 ಕೋಟಿ ರೂ . ಹಣ ಹೂಡಿಕೆ ಮಾಡಿ ವಂಚನೆ ಎಸಗಿರುವುದು ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ರಿಯಲ್‌ ಎಸ್ಟೇಟ್‌ ಹಾಗೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಸಲುವಾಗಿ ಸಂಚು ರೂಪಿಸಿದ ಸಂದೀಪ್‌, ಅಮ್ರಿತಾ
ಸಹೋದರ ವಿಶಾಲ್‌ ಆತನಿಗೆ ಹೇಳಿ ದುಬೈನಲ್ಲಿ ವೇದಾಂತ ಜನರಲ್‌ ಟ್ರೇಡಿಂಗ್‌, ಎಫ್.ಸಿ ಫ್ರೈಮ್‌ ಮಾರ್ಕೆಟ್ಸ್‌ ಹಾಗೂ ಎ.ವಿ ಪ್ರೈವೇಟ್‌ ಲಿಮಿಟೆಡ್‌, ಪಿನಾಕಲ್‌ ಅಸೆಟ್‌ ಇನ್‌ವೆಸ್ಟ್‌ಮೆಂಟ್‌ ಕಂಪನಿಗಳನ್ನು ಆರಂಭಿಸಿದ್ದಾನೆ. ಜತೆಗೆ ಪತ್ನಿ ಚಾರುಲತಾ ಹೆಸರಿನಲ್ಲಿ ಸ್ಯಾಂಕುcಮ್‌ ಷೇರು ಮಾರುಕಟ್ಟೆ ಕಂಪನಿ ತೆರೆದು, ಆ ಕಂಪನಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡು ಅಕ್ರಮ ಎಸಗಿದ್ದಾನೆ.

ಅಲ್ಲದೆ, ವಿಶಾಲ್‌ ಸೋಮಣ್ಣ ಬ್ಯಾಂಕ್‌ ಖಾತೆಗಳಿಗೆ ಕೋಟ್ಯಂತರ ರೂ. ಹಣ ವರ್ಗಾವಣೆ ಮಾಡುತ್ತಿದ್ದ. ಆ ಹಣವನ್ನು ವಿಶಾಲ್‌, ತನ್ನ ಸಹೋದರಿ ಅಮ್ರಿತಾ ಚಂಗಪ್ಪ ಹಾಗೂ ತಾಯಿ ಮೀರಾ ಚಂಗಪ್ಪ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಶಕ್ಕೆ ಪಡೆದಿದ್ದೆಷ್ಟು?
ಸಂದೀಪ್‌ ಗುರುರಾಜ್‌ ಸೇರಿ ಉಳಿದ ಆರೋಪಿಗಳ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿರುವ ಪೊಲೀಸರು, ಸಂದೀಪ್‌ ಬ್ಯಾಂಕ್‌ ಖಾತೆಯಲ್ಲಿದ್ದ 1.81 ಕೋಟಿ ರೂ.ಗಳನ್ನು ಪಡೆಯದಂತೆ ಮಾಡಿದ್ದಾರೆ. ಸಂದೀಪ್‌ ಹೆಸರಿನಲ್ಲಿರುವ ಪದ್ಮನಾಭನಗರದಲ್ಲಿ 38 ಲಕ್ಷ ರೂ. ಮೌಲ್ಯದ ಎರಡು ಬೆಡ್‌ರೂಂ ಮನೆ, ತಮಿಳುನಾಡಿನ ಶ್ರೀರಂಗಂನಲ್ಲಿ 32 ಲಕ್ಷ ರೂ.ಮೌಲ್ಯದ ನಿವಾಸ, ಥಾಣೆಯಲ್ಲಿ 94. 13 ಲಕ್ಷ ರೂ.ಮೌಲ್ಯದ ಫ್ಲ್ಯಾಟ್‌, ಕನಕಪುರ ರಸ್ತೆಯಲ್ಲಿ 1.25 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್‌. 

ಜಿಗಣಿಯಲ್ಲಿ 20.25 ಲಕ್ಷ ರೂ. ಮೌಲ್ಯದ ನಿವೇಶನ, ಒಂದು ಮಹೀಂದ್ರಾ ಎಸ್‌ಯುವಿ ಕಾರು ಹಾಗೂ ಒಂದು ಸ್ವಿಪ್ಟ್ ಕಾರು
ಹೊಂದಿದ್ದು, ಈ ಕುರಿತ ದಾಖಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂಇಎಂಜಿ ಕಂಪನಿಯ ನಿರ್ದೇಶಕರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡಿರುವ ಸಂದೀಪ್‌ ಗುರುರಾಜ್‌, ಅಮ್ರಿತಾ ಹಾಗೂ ಇತರ ಆರೋಪಿಗಳ ಜತೆ ಒಳ ಸಂಚು ರೂಪಿಸಿ, ಕಂಪನಿಗೆ ಹಣ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ. ಆರೋಪಿ ಸಂದೀಪ್‌, ಹಲವು ಬಾರಿ ಕಂಪನಿಯ ಬ್ಯಾಂಕ್‌ ಖಾತೆಗಳಿಂದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ದೋಹದಲ್ಲಿ
ನೆಲೆಸಿರುವ ವಿಶಾಲ್‌ ಸೋಮಣ್ಣ ಬಂಧನಕ್ಕೆ ಲುಕ್‌ ಔಟ್‌ ನೋಟಿಸ್‌ ಹೊರಡಿಸಲಾಗಿದೆ.
  ಡಿ.ದೇವರಾಜ್‌, ಡಿಸಿಪಿ, ಕೇಂದ್ರ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next