Advertisement

ಶತಕ್ರಿಯೆಗಳ ಮೂಲಕ ಧರ್ಮ ಪ್ರಭಾವನೆಗೆ ಆದ್ಯತೆ: ವೀರಸಾಗರ ಶ್ರೀ

06:00 AM Jul 15, 2018 | Team Udayavani |

ಕಾರ್ಕಳ: ಮುನಿಶ್ರೀ ವೀರಸಾಗರ ಮುನಿಮಹಾರಾಜರ ಚಾತುರ್ಮಾಸ್ಯ ಜು. 27ರಿಂದ ನಡೆಯಲಿದೆ. ಗೊಮ್ಮಟೇಶ್ವರನ ನಾಡಿನಲ್ಲಿ  65 ವರ್ಷಗಳ ಅನಂತರ ಜೈನ ಮುನಿಗಳ ಚಾತುರ್ಮಾಸ್ಯ ನಡೆಯುತ್ತಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಹಸೂರು ಶ್ರೀಗಳು ಉದಯವಾಣಿಯ ಜೀವೇಂದ್ರ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

Advertisement

65 ವರ್ಷಗಳ ಬಳಿಕ ಕಾರ್ಕಳದಲ್ಲಿ ಚಾರ್ತುರ್ಮಾಸ್ಯ ನಡೆಯುತ್ತಿದೆ…
        ಹೌದು;  ಹಲವು ವರ್ಷದ ಅನಂತರ ಚಾತುರ್ಮಾಸ್ಯ ಮಾಡುವ ಭಾಗ್ಯ ಇಲ್ಲಿಗೆ ಬಂದಿದೆ. ಇಲ್ಲಿನ ಶ್ರಾವಕರಿಗೆ, ಕಾರ್ಕಳ ಜೈನ ಸಮುದಾಯದವರಿಗೆ ಬಹಳ ಉತ್ಸಾಹವಿದೆ. ಧರ್ಮದ ಪ್ರಭಾವನೆ, ಮುನಿಗಳ ಸೇವೆ ಮಾಡುವಂತಾಗಿದೆ.

ಚಾತುರ್ಮಾಸ್ಯದ ಪ್ರಾಮುಖ್ಯತೆ?
       ದಿಗಂಬರ ಜೈನ ಧರ್ಮದ ಪ್ರಕಾರ ಚಾತುರ್ಮಾಸ್ಯದ ಅವಧಿಯಲ್ಲಿ ನಾವು ವಿಹಾರ ಮಾಡುವುದಿಲ್ಲ. ಅದನ್ನು ವರ್ಷಾಯೋಗ ಎನ್ನುತ್ತಾರೆ. ನಾಲ್ಕು ತಿಂಗಳ ಅವಧಿಯಲ್ಲಿ ಮಳೆ ಹೆಚ್ಚು. ಸೂಕ್ಷ್ಮ ಜೀವಿಗಳು ಉತ್ಪತ್ತಿಯಾಗುತ್ತವೆ. ಕಣ್ಣಿಗೆ ಕಾಣುವ ಜೀವಿಗಳನ್ನು ನಾವು ರಕ್ಷಣೆ ಮಾಡಬಹುದು. ಮಳೆಗಾಲದ ಸೂಕ್ಷ್ಮಜೀವಿಗಳಿಗೆ ಅಹಿಂಸೆ ಆಗಬಾರದು ಎಂಬ ಕಾರಣಕ್ಕೆ ವಿಹಾರ ನಿಷಿದ್ಧ. ಯಾವುದಾದರೂ ಒಂದು ನಿರ್ದಿಷ್ಟ ಸ್ಥಳದಲ್ಲಿ ನೆಲೆಸುತ್ತೇವೆ.

ಚಾತುರ್ಮಾಸ್ಯದ ವಿಶೇಷ ಕಾರ್ಯಕ್ರಮಗಳೇನು?
        ಮುನಿಗಳ ನಿತ್ಯ ಕ್ರಿಯೆಗಳು ನಡೆಯು ತ್ತಿರುತ್ತವೆ. ಜತೆಗೆ ಜೈನ ಶ್ರಾವಕರಿಗೋಸ್ಕರ ನಿತ್ಯದೇವ ಪೂಜೆ, ಗುರುಪಾಸ್ತಿ, ಸ್ವಾಧ್ಯಾಯ, ಸಂಯಮ, ತಪ ಮತ್ತು ದಾನ ಇವು ಆರು ಪ್ರಕಾರದ ಶತಕ್ರಿಯೆಗಳು. ಶ್ರಾವಕರು ಮಾಡುವಂಥದ್ದು. ನಾವು ಅವರಿಗೆ ತಿಳಿಯ ಹೇಳುತ್ತೇವೆ. ಅವೆಲ್ಲದರ ಆಚರಣೆ, ನಿತ್ಯ ಅಭಿಷೇಕ, ಪ್ರತೀ ರವಿವಾರ ಭಗವಂತನ ಆರಾಧನೆ, ಪ್ರವಚನ, ಚರ್ಚೆ ನಡೆಯಲಿದೆ. ಮುಖ್ಯವಾಗಿ ಶಂಖಾ ಸಮಾಧಾನ ಹೀಗೆ ಎಲ್ಲವನ್ನು ತಿಳಿಸುತ್ತೇವೆ. ಇತರ ಧರ್ಮದವರೂ ಧರ್ಮದ ಕುರಿತ ಪ್ರಶ್ನೆಗಳನ್ನು ಕೇಳಬಹುದು. ಅದಕ್ಕಾಗಿ ರವಿವಾರ 1 ಗಂಟೆ ಮೀಸಲಿಡುತ್ತೇವೆ.

ಈ ಬಾರಿ ಕಾರ್ಕಳದಲ್ಲಿ ಹೇಗೆ ಸಾಧ್ಯವಾಯಿತು?
        ಸುಮಾರು 10 ಪ್ರದೇಶಗಳಿಂದ ಚಾತುರ್ಮಾಸ್ಯಕ್ಕೆ ಆಗ್ರಹಿವಿತ್ತು. ಆದರೆ ಕಾರ್ಕಳ ಜೈನ ಸಮುದಾಯದವರಿಂದ ಭಾರೀ ಆಗ್ರಹವಿತ್ತು. ಜತೆಗೆ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿಯೂ ಕಾರ್ಕಳದಲ್ಲಿ ಮಾಡುವಂತೆ ಆಗ್ರಹಿಸಿದರು. ಇಲ್ಲಿ ಬ್ರಹ್ಮಚಾರಿ ಆಶ್ರಮ, ಶ್ರಾವಿಕಾಶ್ರಮದ ಮಕ್ಕಳಿದ್ದಾರೆ. ಜೈನ ಸಮುದಾಯದವರು ಹೆಚ್ಚಿದ್ದಾರೆ. ಅವರೆಲ್ಲರಿಗೂ ಧರ್ಮದ ಜ್ಞಾನ ನೀಡುವಂತೆ ಮನವಿ ಮಾಡಿರುವುದರಿಂದ ಇಲ್ಲಿ ಉಳಿದುಕೊಳ್ಳುವಂತಾಯಿತು.

Advertisement

ಜೈನ ಧರ್ಮದ ಸಂದೇಶ ಮತ್ತು ತಣ್ತೀ ಪಾಲನೆಯ ಬಗ್ಗೆ?
        ಅಹಿಂಸಾ ಪರಮೋಧರ್ಮ ಮಹಾ ವೀರರ ಸೂತ್ರ. ಅದರಂತೆ ಸಾಗುತ್ತಿದ್ದೇವೆ. ಚಾತುರ್ಮಾಸ್ಯದ ಉದ್ದೇಶ ಅದೇ. ನೀವು ಹೇಳುವುದು ಸರಿಯಿದೆ. ನಾವು  ಹೇಳುವುದೂ ಸತ್ಯ ಇದೆ. ನಾನೇ ಹೇಳುವುದು ಸತ್ಯ ಅಂದ್ರೆ ಅದನ್ನು ಜೈನಧರ್ಮ ಒಪ್ಪಲ್ಲ. ಅದೇ ಜೈನ ಧರ್ಮದ ಸಂದೇಶ.

ಅಂದು ಮತ್ತು ಇಂದಿನ ವ್ಯವಸ್ಥೆ ಬಗ್ಗೆ…
         ಪ್ರತಿಯೊಬ್ಬರೂ ತಮ್ಮ ಶಕ್ತಿಗಾನು ಸಾರವಾಗಿ ಆಚರಿಸುತ್ತಾ ಹೋಗಬೇಕು. ಅಂದಿನಂತೆಯೇ ಆಗಲ್ಲ. ಅದು ಮುನಿಗಳ ಕಾಲವಾಗಿತ್ತು. ಆಗಿನ ಶ್ರಾವಾಕರಂತೆ ಈಗ ಇರುವುದಕ್ಕೂ ಆಗುವುದಿಲ್ಲ. ಈಗಿನ ಸ್ವಲ್ಪ ಬದಲಾವಣೆಯನ್ನು ಒಪ್ಪಿಕೊಂಡು ಅದಕ್ಕೆ ಸರಿಯಾಗಿ ಧರ್ಮದ ಪಾಲನೆ ಮಾಡಬೇಕು. ಧರ್ಮ ಪಾಲನೆಯಲ್ಲಿ ವ್ಯತ್ಯಾಸ ಬರುವುದಿಲ್ಲ. ಅವರವರ ಧರ್ಮದ ಆಚರಣೆ ಮಾಡಿದರೆ ಸುಜ್ಞಾನ, ಸದ್ಬುದ್ಧಿ ಪ್ರಾಪ್ತಿಯಾಗಲಿದೆ.

ಋಷಿಮುನಿಗಳ ಪರಂಪರೆಯ ಭಾರತ  ಬದಲಾವಣೆಯತ್ತ ಸಾಗುತ್ತಿದೆಯೇ?
          ಬದಲಾಗುವುದಿಲ್ಲ. ಭಾರತ ದೇಶವನ್ನು ಭಗವಂತನ ಸ್ಥಾನವನ್ನಾಗಿ ನೋಡುತ್ತಾರೆ. ದೇಶ ಮೊದಲಿನಿಂದ ಯಾವ ಪರಂಪರೆಯಲ್ಲಿ ಬಂದಿದೆಯೋ ಕೊನೆಯವರೆಗೂ ಅದೇ ಪರಂಪರೆಯಲ್ಲಿ ಸಾಗಲಿದೆ. ಋಷಿಮುನಿ ಪರಂಪರೆ ಬದಲಾವಣೆ ಆಗಲು ಸಾಧ್ಯವಿಲ್ಲ.

ಶಿಕ್ಷಣ ವ್ಯವಸ್ಥೆ ಬಗ್ಗೆ…
ಹಿಂದೆ ದೇಶದ ಶಿಕ್ಷಣ ವ್ಯವಸ್ಥೆ ಗುರುಕುಲ ಪದ್ಧತಿಯಲ್ಲಿತ್ತು. ಈಗ ಬದಲಾವಣೆ ಆಗಿದೆ. ಮಕ್ಕಳಿಗೆ ಗುರುಕುಲ ಪದ್ಧತಿಯಿಂದ ಸಂಸ್ಕಾರ ನೀಡಿದರೆ ಭವಿಷ್ಯಕ್ಕೆ ಒಳ್ಳೆಯದು. ಆದರೆ ಈಗ ಸ್ಪರ್ಧೆ ಏರ್ಪಟ್ಟಿದೆ. ಅಂಕಗಳ ದೃಷ್ಟಿಯಿಂದ ನಡೆಯುತ್ತಿದೆ. ಜ್ಞಾನ ಪ್ರಾಪ್ತಿಗಾಗಿ ಶಿಕ್ಷಣ ಪಡೆಯಲಾಗುತ್ತಿಲ್ಲ. ಭವಿಷ್ಯದ ದೃಷ್ಟಿಯಿಂದ ಗುರುಕುಲ ಪದ್ಧತಿ ಪ್ರಕಾರ ಶಿಕ್ಷಣ ನೀಡಬೇಕು.

ಮಹಾರಾಷ್ಟ್ರದ ಹಸೂರು ಶ್ರೀಗಳ ಹುಟ್ಟೂರು. 25ನೇ ವಯಸ್ಸಿನಲ್ಲಿ ಬ್ರಹ್ಮಚರ್ಯ ಸ್ವೀಕರಿಸಿದ್ದಾರೆ. 2011ರಲ್ಲಿ ಮಹಾರಾಷ್ಟ್ರಾದ ಶಿರವಾಡದಲ್ಲಿ ಆಚಾರ್ಯ 108 ಶ್ರೀ ಸನ್ಮತಿ ಸಾಗರ ಮಹಾರಾಜರಿಂದ ದೀಕ್ಷೆ ಪಡೆದಿದ್ದಾರೆ. ಸದ್ಯ 33ರ ಹರೆಯದ ಶ್ರೀಗಳು ಧರ್ಮ ಪ್ರಭಾವನೆಯೊಂದಿಗೆ ಆತ್ಮಕಲ್ಯಾಣದ ಸಾಧನೆಯಲ್ಲಿ ತೊಡಗಿದ್ದಾರೆ.
– ಹಸೂರು ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next