Advertisement

ಬಯೋ ಡೀಸೆಲ್‌ ಬಳಕೆಗೆ ಆದ್ಯತೆ ಅಗತ್ಯ

01:29 PM Aug 13, 2022 | Team Udayavani |

ಕಲಬುರಗಿ: ಮುಂದಿನ ದಿನಗಳಲ್ಲಿ ಉಂಟಾಗ ಬಹುದಾದ ತೈಲ ಕೊರತೆಗೆ ಪರ್ಯಾಯವಾಗಿ ಬಯೋ ಡಿಸೇಲ್‌ ಬಳಕೆಗೆ ಯುವ ಜನಾಂಗ ಆದ್ಯತೆ ನೀಡಬೇಕು ಎಂದು ಗುವಿವಿ ಕುಲಪತಿ ಪ್ರೊ| ದಯಾನಂದ ಅಗಸರ್‌ ಹೇಳಿದರು.

Advertisement

ಗುವಿವಿ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಅರಣ್ಯ ಇಲಾಖೆ, ಜಿಲ್ಲಾ ಪಂಚಾಯತ್‌, ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಳಕೆಯಲ್ಲಿರುವ ಇಂಧನ ಮುಗಿದು ಹೋಗುವ ಸಂಪತ್ತು. ಎಷ್ಟೇ ಜಾಗರೂಕವಾಗಿ ಬಳಕೆ ಮಾಡಿದರೂ ಒಂದಲ್ಲ ಒಂದು ದಿನ ಮುಗಿಯುತ್ತದೆ. ಆದ್ದರಿಂದ ನೈಸರ್ಗಿಕವಾಗಿ ಸಿಗಬಹುದಾದ ಜೈವಿಕ ಇಂಧನದ ಕಡೆಗೆ ನಾವು ಹೋಗಲೇಬೇಕು. ಈ ನಿಟ್ಟಿನಲ್ಲಿ ನಮ್ಮ ಪಯಣವನ್ನು ಈಗಿನಿಂದಲೇ ಆರಂಭಿಸಬೇಕು. ಯುವ ಜನತೆಗೆ ಈ ಕುರಿತು ತಿಳಿವಳಿಕೆ ನೀಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಸಿಇಒ ಡಾ| ಗಿರೀಶ ದಿಲೀಪ್‌ ಬದೋಲೆ, ಮುಂದಿನ ದಿನಗಳಲ್ಲಿ ಗುವಿವಿ ಕ್ಯಾಂಪಸ್‌ನಲ್ಲಿ ಕಾಡು ಮರಗಳನ್ನು ಬೆಳೆಸುವ ಮೂಲಕ ಇಲ್ಲಿನ ಪರಿಸರವನ್ನು ಇನ್ನಷ್ಟು ಹಸಿರಾಗಿಸುವ ಮತ್ತು ಜೈವಿಕ ಇಂಧನ ಮೂಲದ ಮರಗಳನ್ನು ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಅರಣ್ಯ ಇಲಾಖೆ ಸಾತ್‌ ನೀಡಲಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕೆಎಸ್‌ಸಿಎಸ್‌ಟಿ ಸಲಹಾ ಸಮಿತಿ ಅಧ್ಯಕ್ಷ ಡಾ| ಎಂ.ಎಸ್‌.ಜೋಗದ್‌ ಮಾತನಾಡಿ, ನಾವು ಭೂಮಿ ಮೇಲೆ ಬಹಳ ದಿನಗಳವರೆಗೆ ಇರಬೇಕಾದರೆ ಪರ್ಯಾಯ ಇಂಧನ ಮೂಲಗಳನ್ನು ಹುಡುಕಬೇಕಿದೆ. ಈ ನಿಟ್ಟಿನಲ್ಲಿ ಗುವಿವಿ ಸೇರಿದಂತೆ ಹಲವೆಡೆಗಳಲ್ಲಿ ಸಂಶೋಧನೆಗಳು ನಡೆಯಬೇಕು. ಪರ್ಯಾಯ ಇಂಧನ ಮೂಲಗಳಲ್ಲಿ ಒಂದಾದ ಎಥೆನಾಲ್‌ ಬಳಗೆಗೆ ಸರ್ಕಾರಗಳು ಮುಂದಡಿ ಇಡುತ್ತಿವೆ. ಪ್ರಮಾಣ ಕಡಿಮೆ ಇದೆ. ಸಕ್ಕರೆ ಕಾರ್ಖಾನೆಗಳು ಹೆಚ್ಚಾಗುತ್ತಿರುವುದು ಇದೇ ಉದ್ದೇಶಕ್ಕೆ ಎಂದು ಹೇಳಿದರು.

Advertisement

ರೈತರಿಗೂ ಜೈವಿಕ ಇಂಧನ ಸಸಿಗಳನ್ನು ಬೆಳೆಸಿ ಎಂದರೆ ಹೇಗೆ? ಎಲ್ಲರೂ ಇದೇ ರೀತಿ ಮಾಡಿದರೆ, ಮುಂದಿನ ದಿನಗಳಲ್ಲಿ ಆಹಾರದ ಸಮಸ್ಯೆ ಉಂಟಾಗಬಹುದು. ಅದಕ್ಕಾಗಿ ಸರ್ಕಾರ ಯೋಜನೆ ರೂಪಿಸಬೇಕು. ರೈತರು ಕಬ್ಬು ಬೆಳೆದಾಗ ಬರುವ ನಿರೀಕ್ಷಿತ ಮತ್ತು ಪಕ್ಕಾ ಆದಾಯದಿಂದ ಇಂತಹ ಇಂಧನ ಮೂಲಗಳನ್ನು ಬೆಳೆದಾಗ ಬಯೋ ಡೀಸೆಲ್‌ ಉತ್ಪಾದನೆ ಸರಾಗವಾಗಿ ಆಗುತ್ತದೆ ಎಂದರು.

ಸಹಾರಾ ಸೇವಾ ಸಂಸ್ಥೆಯ ಮಸ್ತಾನ್‌ ಬಿರಾ ದಾರ್‌ ಮಾತನಾಡಿದರು. ಕುಲಸಚಿವ ಪ್ರೊ| ವಿ.ಟಿ. ಕಾಂಬಳೆ, ಪ್ರಾಚಾರ್ಯ ಜಿ.ಎಂ. ವಿದ್ಯಾಸಾಗರ, ಕುಸನೂರು ಗ್ರಾಪಂ ಅಧ್ಯಕ್ಷೆ ಸಂಗಮ್ಮ ಪಾಟೀಲ ಇನ್ನಿತರರು ಇದ್ದರು.

ಉದ್ಯೋಗ ಖಾತ್ರಿ ಆರಂಭವಾದ ಮೇಲೆ ಜೈವಿಕ ಇಂಧನದ ಮೂಲಗಳಾದ ಬೇವಿನ ಬೀಜ, ಹೊಂಗೆ ಬೀಜ, ಸಂಗ್ರಹ ಮಾಡಿ ಕೊಡುವ ಜನರ ಕೊರತೆ ಎದುರಾಗಿದೆ. ಅವರಿಗೂ ಸಮಸ್ಯೆಗಳಿವೆ. ಅದನ್ನು ಸರ್ಕಾರ ಸರಿ ಮಾಡಬೇಕು. ಈ ರೀತಿಯ ಬೀಜಗಳನ್ನು ಸಂಗ್ರಹ ಮಾಡಿ ತಂದುಕೊಟ್ಟರೆ ನರೇಗಾದಲ್ಲಿ ಕೂಲಿ ಕೊಡುವ ಭರವಸೆ ದೊರೆತಾಗ ಸ್ವಾವಲಂಬನೆ ಸಾಧ್ಯವಾಗುತ್ತದೆ. ಬಯೋ ಡೀಸೆಲ್‌ನ್ನು ನಾವು ಉತ್ಪಾದಿಸಲೇಬೇಕು. ಇಲ್ಲದಿದ್ದರೇ ಮುಂದಿನದ 30-40 ವರ್ಷಗಳಲ್ಲಿ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ. ಎಂ.ಎಲ್‌.ಭಾವಿಕಟ್ಟಿ , ಉಪ ಅರಣ್ಯ ಸಂರಕ್ಷಣಾಧಿಕಾರಿ

ಗುವಿವಿಯಲ್ಲಿ ಮೊದಲು ಕುಲಪತಿ ಕಾರಿಗೆ, ಕುಲಸಚಿವರ ಕಾರಿಗೆ ಬಯೋ ಡಿಸೇಲ್‌ ಬಳಕೆ ಮಾಡಲಾಗುತ್ತಿತ್ತು. ಈಚೆಗೆ ಕೆಲವು ವರ್ಷಗಳಿಂದ ಗುವಿವಿ ಕ್ಯಾಂಪಸ್‌ ನಲ್ಲಿರುವ ಜೈವಿಕ ಇಂಧನ ಉತ್ಪಾದನಾ ಘಟಕ ಸ್ಥಗಿತವಾಗಿದೆ. ಪುನಃ ಅದನ್ನು ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ಅರಣ್ಯ ಇಲಾಖೆ ಸಹಕಾರ ಕೋರಲಾಗಿದೆ. ಪ್ರೊ| ದಯಾನಂದ ಅಗಸರ್‌, ಕುಲಪತಿ, ಗುವಿವಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next