Advertisement

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ

04:59 PM Jul 28, 2022 | Team Udayavani |

ಮಹಾಲಿಂಗಪುರ: ಪಟ್ಟಣದ ಸ್ವಚ್ಛತೆ, ಕುಡಿವ ನೀರು, ಪರಿಸರ ರಕ್ಷಣೆ ಸೇರಿದಂತೆ ಪಟ್ಟಣದ ಸಮಗ್ರ ಅಭಿವೃದ್ಧಿಯ ಜೊತೆಗೆ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡುವುದಾಗಿ ಪುರಸಭೆ ನೂತನ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಹೇಳಿದರು.

Advertisement

ಪುರಸಭೆ ಸಭಾಭವನದಲ್ಲಿ ಜರುಗಿದ ಪ್ರಥಮ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದ 23 ವಾರ್ಡ್‌ಗಳಿಗೂ ತಾರತಮ್ಯವಿಲ್ಲದೇ ಸಮಾನವಾಗಿ ಅನುದಾನ ಹಂಚಲಾಗಿದೆ. ಇದಕ್ಕೆ ಎಲ್ಲ ಸದಸ್ಯರು ಪಕ್ಷಭೇದ ಮರೆತು ಸಹಕಾರ ನೀಡಿದ್ದು, ಬಿಜೆಪಿ ಸೇರಿದಂತೆ ಎಲ್ಲ ಸದಸ್ಯರು ಜೊತೆಗೂಡಿ ಪಟ್ಟಣ ಅಭಿವೃದ್ಧಿ ಮಾಡೋಣ ಎಂದರು.

ಕಾಂಗ್ರೆಸ್‌ ಸದಸ್ಯ ಜಾವೇದ್‌ ಬಾಗವಾನ ಮಾತನಾಡಿ, 5 ವರ್ಷಗಳ ಕಾಲ ಆಡಿಟ್‌ ಆಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ 5 ವರ್ಷದ ಪ್ರತಿ ವಾರ್ಡಿನ ಅನುದಾನ, ಟೆಂಡರ್‌, ಕಾಮಗಾರಿಗಳ ಸಂಪೂರ್ಣ ಮಾಹಿತಿ ಕೇಳಿದರಲ್ಲದೇ, ಕಳಪೆ ಕಾಮಗಾರಿಗಳ ರಿಕವರಿ ಆಗದಿರುವ ಬಗ್ಗೆ ಆಕ್ಷೇಪಿಸಿದರು. ಕೆಲವು ಸಂಭಾವಿತ ಸದಸ್ಯರ ವಾರ್ಡ್‌ಗಳಿಗೆ ಅನುದಾನ ಸರಿಯಾಗಿ ನೀಡಿಲ್ಲವೇಕೆಂದು ಪ್ರಶ್ನಿಸಿದರು.

ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ 15ನೇ ಹಣಕಾಸು ಯೋಜನೆಯಡಿ 1.88 ಕೋಟಿ ರೂ. ಹಾಗೂ ಎಸ್‌ ಎಫ್‌ಸಿ ನಿ ಧಿಯ 73 ಲಕ್ಷ ರೂ. ಸೇರಿದಂತೆ ಒಟ್ಟು 2.61 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದಿಸಲಾಯಿತು. ಸಭೆ ಪ್ರಾರಂಭದಲ್ಲಿ ನೂತನ ರಾಷ್ಟ್ರಪತಿ, ಬುಡಕಟ್ಟು ಜನಾಂಗದ ಪ್ರಥಮ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರದ ಪ್ರಯುಕ್ತ ಸದನದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

Advertisement

ಕಣ್ಣೀರಿಟ್ಟ ಕಾವಲುಗಾರ: ಪಟ್ಟಣದ ಸ್ಮಶಾನ ಕಾವಲುಗಾರ ಯಮನಪ್ಪ ಸಾಮಾನ್ಯ ಸಭೆ ಆವರಣಕ್ಕೆ ಆಗಮಿಸಿ ನನಗೆ ವಯಸ್ಸಾಗಿದ್ದು, ಸ್ಮಶಾನ ಕಾಯುತಿದ್ದೇನೆ ಹಾಗೂ ಮನೆ ಇಲ್ಲದೇ ಆಂಜನೇಯನ ದೇವಸ್ಥಾನದಲ್ಲಿ ಜೀವನ ಸಾಗಿಸುತ್ತಿದ್ದೇನೆ, ದಯಮಾಡಿ ಮನೆ ಒದಗಿಸಿ ಎಂದು ಕಣ್ಣೀರಿಟ್ಟನು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮತ್ತು ಸದಸ್ಯರು ಶೀಘ್ರ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಈ ವೇಳೆ ಪುರಸಭೆ ಉಪಾಧ್ಯಕ್ಷೆ ಗೋದಾವರಿ ಬಾಟ, ಮುಖ್ಯಾಧಿ ಕಾರಿ ಜಗದೀಶ ಈಟಿ, ಸದಸ್ಯರಾದ ಯಲ್ಲನಗೌಡ ಪಾಟೀಲ, ಮುಸ್ತಾಕ್‌ ಚಿಕ್ಕೋಡಿ, ರವಿ ಜವಳಗಿ, ಸುಜಾತ ಮಾಂಗ, ಬಲವಂತಗೌಡ ಪಾಟೀಲ, ಲಕ್ಷ್ಮೀ ಮುದ್ದಾಪುರ, ಬಸಪ್ಪ ಬುರುಡ, ಸ್ನೇಹಲ ಅಂಗಡಿ, ಡಾ| ಸವಿತಾ ಕೋಳಿಗುಡ್ಡ, ಸರಸ್ವತಿ ರಾಮೋಜಿ, ಬಸವರಾಜ ಯರಗಟ್ಟಿ, ಬಿ.ಎಲ್‌. ಚಮಕೇರಿ, ರಾಜು ಗೌಡಪ್ಪಗೋಳ, ಭಾವನಾ ಪಾಟೀಲ, ಸವಿತಾ ಹುರಕಡ್ಲಿ, ಚಾಂದಿನಿ ನಾಯಕ, ಶೀಲಾ ಭಾವಿಕಟ್ಟಿ, ನಾಮ ನಿರ್ದೇಶಿತರಾದ ಜಯವಂತ ಕಾಗಿ, ಈರಪ್ಪ ಚುನಮರಿ, ಅರ್ಜುನ ಮೋಪಗಾರ, ಹನುಮಂತ ಯರಗಟ್ಟಿ, ತಿಪ್ಪಣ್ಣ ಬಂಡಿವಡ್ಡರ, ಮ್ಯಾನೇಜರ್‌ ರಾಘು ನಡುವಿನಮನಿ, ಅಭಿಯಂತರ ರಾಜ್ಯ ಚವ್ಹಾಣ, ಕಂದಾಯ ಅಧಿಕಾರಿ ಎನ್‌.ಎ. ಲಮಾಣಿ, ಎಸ್‌.ಎನ್‌. ಪಾಟೀಲ, ವಿ.ಜಿ. ಕುಲಕರ್ಣಿ, ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ರಾಜೇಶ್ವರಿ ಸೋರಗಾವಿ, ರಾಮು ಮಾಂಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next