Advertisement

ಕಡಲಲ್ಲೇ ಉಳಿದ ಪ್ರಿನ್ಸೆಸ್‌ ಮಿರಾಲ್‌ ಹಡಗು

12:51 AM Jul 18, 2022 | Team Udayavani |

ಮಂಗಳೂರು: ಸಿರಿಯಾದ “ಪ್ರಿನ್ಸೆಸ್‌ ಮಿರಾಲ್‌’ ಸರಕು ಸಾಗಾಟ ಹಡಗು ಉಳ್ಳಾಲ ಬಟಪಾಡಿ ಕಡಲಿನಲ್ಲಿ ಮುಳುಗಿ ತಿಂಗಳು ಸಮೀಪಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್‌ ಅಂತ್ಯದ ವರೆಗೂ ನೌಕೆಯಿಂದ ತೈಲ ತೆರವು ಮಾಡುವ ಸಾಧ್ಯತೆ ಇಲ್ಲ.

Advertisement

ಮುಂಬಯಿ ಹಾಗೂ ಗೋವಾದಿಂದ ಎರಡು ಪ್ರತ್ಯೇಕ ತಂಡ ಆಗಮಿಸಿ ತೈಲ ತೆರವು ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಪರಿಶೀಲಿಸಿ ತೆರಳಿರುವುದು ಬಿಟ್ಟರೆ ಯಾವುದೇ ಬೆಳವಣಿಗೆ ಇಲ್ಲ. ಸದ್ಯದ ಮಟ್ಟಿಗೆ ಹಡಗು ಬಟ್ಟಪಾಡಿಯಲ್ಲಿ ನೆಲಸ್ಪರ್ಶಿಸಿ ನಿಂತಿದೆ. ಆದರೆ ಪೂರ್ತಿ ಮುಳುಗಿಲ್ಲ. ಆದರೆ ಡೆಕ್‌ ವರೆಗೂ ನೀರು ತುಂಬಿಕೊಂಡಿರುವುದರಿಂದ ಅದರೊಳಗೆ ಪ್ರವೇಶಿಸಲು ತಜ್ಞರ ಕಾರ್ಯಾಚರಣೆ ಅಗತ್ಯವಿದೆ. ಈಗಿನ ಪರಿಸ್ಥಿತಿಯಲ್ಲಿ ಕಡಲಿನ ಅಬ್ಬರ ಜೋರಾಗಿರುವುದರಿಂದ ಕಾರ್ಯಾ ಚರಣೆ ನಡೆಸುವ ಸ್ಥಿತಿಯಲ್ಲಿ ತಜ್ಞರಿಲ್ಲ.

ಸದ್ಯ ನೌಕಾಯಾನ ಸಚಿವಾಲಯದ ಟಗ್‌ಬೋಟ್‌ ವಾಟರ್‌ಲಿಲ್ಲಿಯನ್ನು ಮಂಗಳೂರು ಬಂದರಿನಲ್ಲಿ ತಂದು ನಿಲ್ಲಿಸಲಾಗಿದೆ. ತೈಲ ಸೋರಿಕೆಯಾದರೆ ಅದನ್ನು ನಿಯಂತ್ರಿಸುವುದು ಇದರ ಉದ್ದೇಶ. ಅಲ್ಲದೆ ಕೋಸ್ಟ್‌ ಗಾರ್ಡ್‌ ನೌಕೆ ಹಾಗೂ ಕರಾವಳಿ ಕಾವಲು ಪೊಲೀಸ್‌ ಬೋಟ್‌ಗಳು ನಿಗಾ ಇರಿಸಿವೆ. ಆದರೆ ನಿರಂತರವಾಗಿ ಹಡಗಿನ ಮೇಲೆ ಕಣ್ಗಾವಲು ಸದ್ಯ ನಡೆಸಲಾಗುತ್ತಿಲ್ಲ, ಇಂತಹ ಪ್ರಕರಣ ಗಳಲ್ಲಿ ಸುದೀರ್ಘ‌ವಾಗಿ ಕಣ್ಗಾವಲು ನಡೆಸಲಾಗದು ಎಂದು ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಜೂ. 21ರಂದು ಸಿರಿಯಾದ ಪ್ರಿನ್ಸಿಸ್‌ ಮಿರಾಲ್‌ ಹೆಸರಿನ ಸರಕು ನೌಕೆ ಉಳ್ಳಾಲ ಸಮುದ್ರ ತೀರದಲ್ಲಿ ಮುಳುಗಡೆ ಯಾಗಿತ್ತು. ಕೋಸ್ಟ್‌ ಗಾರ್ಡ್‌ ಸಿಬಂದಿ ಈ ನೌಕೆಯಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದರು. ಈ ಮಂದಿ ಈಗ ಮಂಗಳೂರಿನಲ್ಲೇ ಇದ್ದಾರೆ. ಅವರಲ್ಲಿ ದಾಖಲೆ ಸಮಸ್ಯೆ ಇರುವ ಕಾರಣ ಸಿರಿಯಾ ದೇಶಕ್ಕೆ ಕರೆದೊಯ್ಯುವ ಕಾರ್ಯ ಪೂರ್ಣ ಗೊಂಡಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹಡಗಿನ ಮಾಲಕರ ಪ್ರತಿನಿಧಿಗಳು ನಿರಂತರ ಯತ್ನದಲ್ಲಿದ್ದು ಮುಂದಿನ ವಾರ ಅವರ ದೇಶಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ.

ಈ ಮಧ್ಯೆ ಸಿರಿಯಾದ ನೌಕೆ ಮಲೇಷ್ಯಾದಿಂದ ಇಟಲಿಗೆ ತೆರಳುವ ಮಧ್ಯೆ ಉಳ್ಳಾಲ ಕಡಲ ತೀರಕ್ಕೆ ಬರಲು ಕಾರಣವಾದ ಅಂಶಗಳನ್ನು ಡಿಜಿ ಶಿಪ್ಪಿಂಗ್‌ ಹಾಗೂ ಕಸ್ಟಮ್ಸ್‌ ಅಧಿಕಾರಿಗಳು ಪತ್ತೆ ಮಾಡಿದೆ. ಲಭ್ಯ ಮಾಹಿತಿ ಪ್ರಕಾರ ಶ್ರೀಲಂಕಾ ಮಾರ್ಗವಾಗಿ ತೆರಳುವ ವೇಳೆ ನೌಕೆಯ ತಳಭಾಗದಲ್ಲಿ ರಂಧ್ರ ಕಾಣಿಸಿದ ಕಾರಣ ಕಡಲ ತೀರದ ಮಾರ್ಗವಾಗಿ ಪ್ರಯಾಣ ಬೆಳೆಸಿತ್ತು. ಇದರಿಂದಾಗಿ ಉಳ್ಳಾಲ ಸಮುದ್ರ ತೀರ ತಲುಪಿದೆ ಎನ್ನುವುದು ವರದಿಯ ಮುಖ್ಯಾಂಶ.

Advertisement
Advertisement

Udayavani is now on Telegram. Click here to join our channel and stay updated with the latest news.

Next