Advertisement

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿಗತಿ : ಉದಯವಾಣಿ ರಿಯಾಲಿಟಿ ಚೆಕ್‌

11:53 AM Jan 15, 2022 | Team Udayavani |

ಉಡುಪಿ: ಜಿಲ್ಲೆಯಾದ್ಯಂತ ಕೋವಿಡ್‌ ಸೋಂಕು ದಿನಂಪ್ರತಿ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದೆ. ಆದರೂ ಕೆಲವೆಡೆ ಕೋವಿಡ್‌ ನಿಯಮಾವಳಿ ಉಲ್ಲಂಘನೆ ಸಹಿತ ಅಸಮರ್ಪಕ ವ್ಯವಸ್ಥೆಗಳು ಮತ್ತಷ್ಟು ಸೋಂಕು ಉಲ್ಬಣವಾಗಲು ಕಾರಣವಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಲು ಉದಯವಾಣಿ ತಂಡ ಗುರುವಾರ ಬನ್ನಂಜೆಯಲ್ಲಿರುವ ನಗರ ಪ್ರಾ.ಆ. ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ಆ. ಕೇಂದ್ರದ ಗುರುತು ಪತ್ತೆ ಬಲುಕಷ್ಟ
ಬನ್ನಂಜೆಯ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಈ ಆರೋಗ್ಯ ಕೇಂದ್ರವಿದೆ. ಆದರೆ ಇದನ್ನು ಹುಡುಕುವುದೇ ಬಲುಕಷ್ಟದ ಕೆಲಸವಾಗಿದೆ. ರಸ್ತೆ ಬದಿ ಯಾವುದೇ ಫ‌ಲಕವನ್ನೂ ಅಳವಡಿಸಿಲ್ಲ. ಇದರಿಂದ ರೋಗಿಗಳಿಗೆ ಹಲವಾರು ಸಂದರ್ಭಗಳಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ.

ವಿದೇಶದಿಂದ ಆಗಮನ: ತಪಾಸಣೆ
ವಿದೇಶದಿಂದ ಆಗಮಿಸಿರುವ ಪ್ರಯಾಣಿಕರು ಇಲ್ಲಿ ನ.11ರಿಂದ ತಪಾಸಣೆ ನಡೆಸುತ್ತಿದ್ದಾರೆ. ಮೊದಲ ದಿನ 50 ಮಂದಿ ಹಾಗೂ ಜ.12ರಂದು 62 ಮಂದಿ ಕೋವಿಡ್‌ ಮಾದರಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ರ್ಯಾಪಿಡ್‌ ಹಾಗೂ ಆರ್‌ಟಿಪಿಸಿಆರ್‌ ಎರಡೂ ಪರೀಕ್ಷೆಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಕೋವಿಡ್‌ ಮಾದರಿ ತಪಾಸಣೆೆಗೆಂದೇ ದಿನಕ್ಕೆ 100ರಿಂದ 150ರಷ್ಟು ಮಂದಿ ಆಗಮಿಸುತ್ತಿದ್ದಾರೆ.

ಮನೆಮನೆಗೆ ತೆರಳಿ ತಪಾಸಣೆ
ಇಲ್ಲಿ ತಪಾಸಣೆ ನಡೆಸಿದವರಿಗೆ ಪಾಸಿಟಿವ್‌ ಕಂಡುಬಂದರೆ ಅವರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ. ನಗರದ 13 ವಾರ್ಡ್‌ ವ್ಯಾಪ್ತಿಗೆ ಈ ಆರೋಗ್ಯ ಕೇಂದ್ರದ ಚಟುವಟಿಕೆಗಳು ನಡೆಯುತ್ತಿವೆ. ಪ್ರಾಥಮಿಕ ಸಂಪರ್ಕಿತರನ್ನು ಅವರಿರುವ ಜಾಗಕ್ಕೆ ತೆರಳಿ ಅವರ ಸ್ವಾéಬ್‌ ಮಾದರಿಯನ್ನು ಸಿಬಂದಿ ಪರೀಕ್ಷೆ ಮಾಡುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿಯೂ ಸೋಂಕು ಬಂದವರು ಕಂಡುಬಂದರೆ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗುತ್ತಿದೆ.

ಇತರ ತಪಾಸಣೆ ಸಂಖ್ಯೆಯೂ ಹೆಚ್ಚಳ
ಕೇವಲ ಕೋವಿಡ್‌ ಸಂಬಂಧಿತ ಪ್ರಕರಣಗಳಲ್ಲದೆ ಜ್ವರ ಸಹಿತ ಇತರ ಪ್ರಕರಣಗಳ ತಪಾಸಣೆಗೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ತಪಾಸಣೆಗೆ ಆಗಮಿಸುತ್ತಿದ್ದಾರೆ.

Advertisement

ಆಸನ, ಸ್ಥಳಾವಕಾಶದ ಕೊರತೆ!
ಆರೋಗ್ಯ ಕೇಂದ್ರಕ್ಕೆ ಆಗಮಿಸುವ ರೋಗಿಗಳು ಕುಳಿತುಕೊಳ್ಳಲು ಸೂಕ್ತ ಆಸನಗಳ ಕೊರತೆ ಇದೆ. ಹೊರಭಾಗದಲ್ಲಿ ಅಂದರೆ ಕೋವಿಡ್‌ ಪರೀಕ್ಷೆ ಮಾಡುವ ಸ್ಥಳದಲ್ಲಿ 10ರಷ್ಟು ಕುರ್ಚಿಗಳನ್ನು ಹಾಕಲಾಗಿದೆ. ಒಳಭಾಗದಲ್ಲಿ ಕುಳಿತುಕೊಳ್ಳಲು ಇರುವುದು 6 ಕುರ್ಚಿಗಳು ಮಾತ್ರ. ಉಳಿದಂತೆ ಆಸ್ಪತ್ರೆಯಲ್ಲಿದ್ದ ಒಂದೇ ಒಂದು ವ್ಹೀಲ್‌ಚೆಯರ್‌ನಲ್ಲಿ ಔಷಧಗಳನ್ನು ಪೂರ್ಣಪ್ರಮಾಣದಲ್ಲಿ ತುಂಬಿಸಿ ಇಡಲಾಗಿದೆ. ಒಳಭಾಗದಲ್ಲಿರುವ ಲ್ಯಾಬ್‌ನಲ್ಲಿಯೂ ಸ್ಥಳಾವಕಾಶದ ಕೊರತೆ ಇದೆ. ರಾಸಾಯನಿಕ ಸಹಿತ ವಸ್ತುಗಳನ್ನು ಸಮರ್ಪಕವಾಗಿ ಇಟ್ಟಿಲ್ಲ.

ಹುದ್ದೆ ಖಾಲಿ
ವೈದ್ಯಕೀಯ ಅಧಿಕಾರಿ, ಫಾರ್ಮ ಸಿಸ್ಟ್‌, ಆರೋಗ್ಯಾಧಿಕಾರಿ, ಆರೋಗ್ಯ ನಿರೀಕ್ಷಕರು, 7 ಮಂದಿ ದಾದಿಯರು, ಇಬ್ಬರು ಸ್ಟಾಫ್ ನರ್ಸ್‌ ಸಹಿತ 18 ಮಂದಿ ಆಶಾ ಕಾರ್ಯಕರ್ತೆಯರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಕಿರಿಯ ಆರೋಗ್ಯ ಸಹಾಯಕರ ಒಂದು ಹುದ್ದೆ ಖಾಲಿ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next