Advertisement

ದ್ವೀಪರಾಷ್ಟ್ರಗಳಿಗೆ ಮೋದಿ ಗಿಫ್ಟ್ : ಪ್ರಾಕೃತಿಕ ವಿಕೋಪ ತಡೆಯಲು ಇಸ್ರೋದಿಂದ ವಿಶೇಷ ವ್ಯವಸ್ಥೆ

08:11 PM Nov 02, 2021 | Team Udayavani |

ಗ್ಲ್ಯಾಸ್ಕೋ/ನವದೆಹಲಿ : ಮಾಲ್ಡೀವ್ಸ್‌, ಮಾರಿಷಿಯಸ್‌ ಸೇರಿದಂತೆ ಹಲವು ಸಣ್ಣ ದ್ವೀಪ ರಾಷ್ಟ್ರಗಳಿಗೆ ಪ್ರಾಕೃತಿಕ ವಿಕೋಪಗಳ ಮುನ್ನೆಚ್ಚರಿಕೆ (ಐಆರ್‌ಐಎಸ್‌)
ನೀಡುವ ನಿಟ್ಟಿನಲ್ಲಿ ವಿಶೇಷ ಮಾಹಿತಿ ಕೋಶ ಅಭಿವೃದ್ಧಿಪಡಿಸಲಾಗುತ್ತದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸ್ರೋ ಅದರ ನಿರ್ಮಾಣ ಹೊಣೆ ಹೊರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗ್ಲ್ಯಾಸ್ಕೋದಲ್ಲಿ ಸೋಮವಾರ ನಡೆದ 26ನೇ ಹವಾಮಾನ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭದಲ್ಲಿ ಈ ಅಂಶ ಉಲ್ಲೇಖೀಸಿದ್ದಾರೆ.

Advertisement

ಈ ವ್ಯವಸ್ಥೆಯಿಂದಾಗಿ ಸೈಕ್ಲೋನ್‌, ಹವಳದ ನಿಕ್ಷೇಪಗಳು, ಕರಾವಳಿ ತೀರ ರಕ್ಷಣೆಗೆ ಉಪಗ್ರಹದ ಮೂಲಕ ನಿಗಾ ಸೇರಿದಂತೆ ಹಲವು ಅನುಕೂಲಗಳು ಸಣ್ಣ ದ್ವೀಪ ರಾಷ್ಟ್ರಗಳಿಗೆ ಲಭ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಫೆಸಿಫಿಕ್‌ ವ್ಯಾಪ್ತಿಯ ದ್ವೀಪಗಳು ಮತ್ತು ಕ್ಯಾರಿಕಾಮ್‌ ದ್ವೀಪ ರಾಷ್ಟ್ರಗಳು (ಆ್ಯಂಟಿಗುವಾ ಮತ್ತು ಬಾರ್ಬುಡಾ, ಬಹಮಾಸ್‌, ಬಾರ್ಬುಡಾಸ್‌, ಬೆಲ್ಜಿ, ಡೊಮಿನಿಕಾ, ಗ್ರೆನಾಡಾ, ಗಯಾನಾ, ಹೈಟಿ, ಜಮೈಕಾ, ಮೊಂಟೆಸೆರಾಟ್‌, ಸೈಂಟ್‌ ಲೂಯೀಸ್‌, ಸೈಂಟ್‌ ಕಿಟ್ಸ್‌ ಮತ್ತು ನೇವಿಸ್‌, ಸೈಂಟ್‌ ವಿನ್ಸೆಂಟ್‌ ಮತ್ತು ಗ್ರೆನಡೈನ್ಸ್‌, ಸುರಿನಾಮ್‌, ಟ್ರಿನಿಡಾಡ್‌ ಮತ್ತು ಟೊಬಾಗೋ, ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌, ಕೇಮನ್‌ ದ್ವೀಪ, ಟರ್ಕ್ಸ್ ಮತ್ತು ಕೈಕೋಸ್‌ ದ್ವೀಪ) ಇದರಿಂದ ಬಹಳಷ್ಟು ಪ್ರಯೋಜನ ಪಡೆಯಲಿದೆ ಎಂದಿದ್ದಾರೆ. ಈ ಎಲ್ಲಾ ರಾಷ್ಟ್ರಗಳ ಜನರಿಗೆ ಸೌರ ತಂತ್ರಜ್ಞಾನ ಬಳಕೆಯ ಬಗ್ಗೆ ತರಬೇತಿ ನೀಡಿದ್ದೇವೆ ಎಂದೂ ಪ್ರಧಾನಿ ಹೇಳಿದ್ದಾರೆ.

ಶಾಂತಿಸಾಗರ ಮತ್ತು ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಹಲವು ರೀತಿಯಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ನಿಟ್ಟಿನಲ್ಲಿ ಅದರ ಮೇಲೆ ಕಣ್ಣಿಡಲು ಈ ನಿರ್ಧಾರ ಪ್ರಮುಖವಾಗಲಿದೆ.
ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಮತ್ತು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರೆಸ್‌ ಅವರು ಪ್ರಧಾನಿ ಮೋದಿಯವರ ಭಾಷಣದ ವೇಳೆ ಉಪಸ್ಥಿತರಿದ್ದರು. ಬ್ರಿಟನ್‌ ಪ್ರಧಾನಿ ಜಾನ್ಸನ್‌ ಮಾತನಾಡಿ, ಜಾಗತಿಕ ತಾಪಮಾನದಿಂದಾಗಿ ಜಗತ್ತಿನ ಸಣ್ಣ ರಾಷ್ಟ್ರಗಳು ಪ್ರಧಾನವಾಗಿ ತುತ್ತಾಗುವುದು ಕಳವಳಕಾರಿ ಎಂದರು. ಯುನೈಟೆಡ್‌ ಕಿಂಗ್‌ಡಮ್‌ ಕೂಡ ದ್ವೀಪ ರಾಷ್ಟ್ರಗಳಿಗೆ ಮೂಲ ಸೌಕರ್ಯ ನೀಡುವ ಯೋಜನೆ (ಐಆರ್‌ಐಎಸ್‌)ಗೆ ನೆರವು ನೀಡಲಿದೆ ಎಂದರು.

ಇದನ್ನೂ ಓದಿ : ಮಾಜಿ ಸಚಿವ ಅನಿಲ್‌ ದೇಶ್‌ಮುಖ್‌ ಬಂಧನ

ತೀವ್ರಗಾಮಿ ಚಟುವಟಿಕೆ ಹತ್ತಿಕ್ಕಲು ಬ್ರಿಟನ್‌- ಭಾರತ ಸಹಮತ
ಗ್ಲ್ಯಾಸ್ಕೋ: ಉಗ್ರ ನಿಗ್ರಹ ಮತ್ತು ತೀವ್ರಗಾಮಿ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಭಾರತ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ಒಪ್ಪಿಕೊಂಡಿವೆ. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಶೃಂಗ್ಲಾ ಗ್ಲ್ಯಾಸ್ಕೋ ದಲ್ಲಿ ತಿಳಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯು.ಕೆ.ಪ್ರಧಾನಮಂತ್ರಿ ಬೋರಿಸ್‌ ಜಾನ್ಸನ್‌ ನಡುವಿನ ಚರ್ಚೆಯಲ್ಲಿ ಈ ಅಂಶ ಪ್ರಸ್ತಾಪವಾಗಿದೆ ಎಂದು ಹೇಳಿದ್ದಾರೆ. 26ನೇ ಹವಾಮಾನ ಸಮ್ಮೇಳನದ ಮೊದಲ ದಿನದ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಶೃಂಗ್ಲಾ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಅತ್ಯಂತ ಸಣ್ಣ ಅವಧಿಯಲ್ಲಿ ಇಬ್ಬರು ಮುಖಂಡರ ಭೇಟಿ ನಡೆಯಿತು. ಎರಡೂ ದೇಶಗಳಿಗೆ ಸಂಬಂಧಿತ ವಿಚಾರಗಳನ್ನು ಚರ್ಚಿಸಲಾಯಿತು ಎಂದರು.

Advertisement

2030ರ ಒಳಗಾಗಿ ಭಾರತ 500 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿ ಹೊಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಹೇಳಿದ್ದಾರೆ. 2030ರ ಒಳಗಾಗಿ ದೇಶದ ಒಟ್ಟು ಇಂಧನ ವ್ಯವಸ್ಥೆಯ ಶೇ.50ರಷ್ಟು ನವೀಕರಿಸಿದ ಮೂಲಗಳಿಂದಲೇ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next