Advertisement

ಕುಮಾರವ್ಯಾಸನ ತಾಳೆಗರಿ ಹಸ್ತಪ್ರತಿ ಸಂರಕ್ಷಣೆ

07:13 PM Nov 25, 2020 | Mithun PG |

ಹುಬ್ಬಳ್ಳಿ: ತೀವ್ರ ನಿರ್ಲಕ್ಷ್ಯಕ್ಕೊಳಗಾಗಿ ಜೀರ್ಣಾವಸ್ಥೆ ಹಂತಕ್ಕೆ ತಲುಪಿದ್ದ ಮಹಾಕವಿ ಕುಮಾರವ್ಯಾಸರು ರಚಿಸಿದ ತಾಳೆಗರಿ ಹಸ್ತಪ್ರತಿ ಸಂರಕ್ಷಣೆಗೆ ಕಾಲ ಕೂಡಿ ಬಂದಿದೆ. ಕೋಳಿವಾಡ ಗ್ರಾಮದಲ್ಲಿ ಕುಮಾರವ್ಯಾಸರ ವಂಶಸ್ಥರ ಬಳಿಯಿದ್ದ ಈ ಜ್ಞಾನನಿಧಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಕಾರ್ಯ ಆರಂಭವಾಗಿದೆ.

Advertisement

ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಕೋಳಿವಾಡ ಗ್ರಾಮದಲ್ಲಿರುವ ಕುಮಾರವ್ಯಾಸರ ವಂಶಸ್ಥರ ಬಳಿಯಿದ್ದ ತಾಳೆಗರಿಗಳು ವೈಜ್ಞಾನಿಕ ಸಂರಕ್ಷಣಾ ಪದ್ಧತಿ ಇಲ್ಲದ ಪರಿಣಾಮ ನಶಿಸುವ ಹಂತದಲ್ಲಿದ್ದವು. “ಕರ್ಣಾಟ ಭಾರತ ಕಥಾ ಮಂಜರಿಯ’ ಮೂಲ ಹಸ್ತಪ್ರತಿಯಾಗಿವೆ. ಕೋಳಿವಾಡ ಕುಮಾರವ್ಯಾಸರ ಜನ್ಮಸ್ಥಳ ಹಾಗೂ ಅವರ ವಂಶಸ್ಥರೆನ್ನಲು ಇವು ಪ್ರಮುಖ ದಾಖಲೆಯಾಗಿವೆ.

13-14ನೇ ಶತಮಾನದಲ್ಲಿನ ಕುಮಾರವ್ಯಾಸರ ಸಾಹಿತ್ಯ  ಜೀವಂತವಿಡಲು ಈ ತಾಳೆಗರೆ ಪ್ರಮುಖವಾಗಿವೆ. ಸೂಕ್ತ ಸಂರಕ್ಷಣೆಯಿಲ್ಲದಿದ್ದರಿಂದ ಕಾಲ ಕ್ರಮೇಣ ತಾಳೆಗರಿ ಮುರಿದು ತುಂಡಾಗಿ ಜೀರ್ಣಾವಸ್ಥೆಗೆ ತಲುಪಿದ್ದವು.

ಈ ಬಗ್ಗೆ ಸರ್ಕಾರದ ಗಮನ ಸೆಳೆಯವಪ್ರಯತ್ನ ಮಾಡಲಾಗಿತ್ತಾದರೂ ಅವ್ಯಾವವೂ ಪೂರ್ಣಗೊಂಡಿರಲಿಲ್ಲ. ಇದೀಗ ನಶಿಸುತ್ತಿರುವ ತಾಳೆಗರಿ ಬಗ್ಗೆ ಗಮನ ಹರಿಸಿದ ರಾಷ್ಟ್ರೀಯ ಹಸ್ತಪ್ರತಿ ಅಧ್ಯಯನದಡಿ ಕಾರ್ಯ ನಿರ್ವಹಿಸುತ್ತಿರುವ ಇಂಡಿಯನ್‌ ನ್ಯಾಶನಲ್‌ ಟ್ರಸ್ಟ್‌ ಫಾರ್‌ ಆರ್ಟ್ಸ್  ಆ್ಯಂಡ್‌ ಕಲ್ಚರ್‌ ಹೆರಿಟೇಜ್‌ (ಇಂಟ್ಯಾಕ್‌) ಸಂಸ್ಥೆ ಸಂರಕ್ಷಣಾ ಕಾರ್ಯಕ್ಕೆ ಮುಂದಾಗಿದೆ.

ಇಂಟ್ಯಾಕ್‌ ಇಲ್ಲಿಯವರಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ತಾಳೆಗರಿ ಹಸ್ತಪ್ರತಿಗಳ ಸಂರಕ್ಷಣಾ ಕಾರ್ಯ ಮಾಡಿದ್ದು, ಇದೀಗ ಜಿಲ್ಲಾ ಘಟಕದ ಮೂಲಕ ಇಲ್ಲಿನ ಹಸ್ತಪ್ರತಿಗಳನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿದೆ. ಬಹುತೇಕ ತಾಳೆಗರಿಗಳು ಹರಿದು ಹೋಗಿದ್ದು, ಸಂರಕ್ಷಣೆಗಾಗಿ ಸ್ಥಳೀಯವಾಗಿಅಂಟಿನ ಪಟ್ಟಿ, ಅಂಟು ಹಚ್ಚಲಾಗಿದೆ.

Advertisement

ಇದರಿಂದ ಹಸ್ತಪ್ರತಿಯ ಮೂಲ ಸ್ವರೂಪ ಕಳೆದುಕೊಂಡಿವೆ. ಅವನತಿಯಲ್ಲಿದ್ದ ತಾಳೆಗರಿಗಳಿಗೆ ಮರು ಜೀವತುಂಬುವ ಕಾರ್ಯ ಅಗತ್ಯವಾಗಿತ್ತು. ಹೀಗಾಗಿ ಸಂರಕ್ಷಣಾ ಕಾರ್ಯ ಕಳೆದ ಒಂದು ತಿಂಗಳಿನಿಂದ ವೈಜ್ಞಾನಿಕವಾಗಿ ನಡೆದಿದ್ದು, ಸುಮಾರು ಎರಡು ತಿಂಗಳೊಳಗೆ ಈ ಕಾರ್ಯ ಮುಗಿದು ಪುನಃ ತಾಳೆಗರಿ ಹಸ್ತಪ್ರತಿಗಳು ಕೋಳಿವಾಡದಲ್ಲಿರುವ ಕುಮಾರವ್ಯಾಸರ ವಂಶಸ್ಥರ ಕೈ ಸೇರಲಿವೆ.

ಇದನ್ನೂ ಓದಿ:ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

30 ವರ್ಷ ಸುರಕ್ಷಿತ: 2003ರಿಂದ ಹಸ್ತಪ್ರತಿ ಸಂರಕ್ಷಣಾಕಾರ್ಯದಲ್ಲಿ ತೊಡಗಿರುವ ಇಂಟ್ಯಾಕ್‌ ಸಂಸ್ಥೆಯ ಈ ಕಾರ್ಯದಿಂದ ಸುಮಾರು 25-30 ವರ್ಷಗಳ ಕಾಲ ಸುರಕ್ಷಿತವಾಗಿ ಇಡಬಹುದಾಗಿದೆ. ಯಾವುದೇ ರಾಸಾಯಿನಿಕ ಬಳಸದೆ ಹುಳುಗಳು ತಿನ್ನದಂತೆ ಸಂರಕ್ಷಣೆ ಮಾಡಬಹುದಾಗಿದೆ.

ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಉನ್ನತ ಮಟ್ಟದ ಸಂರಕ್ಷಣಾ ತಂತ್ರಜ್ಞಾನಬಂದರೂ ಹೊಸ ವಿಧಾನ ಅಳವಡಿಸಿಕೊಳ್ಳುವ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಇನ್ನು ತುಂಡಾಗಿರುವ ಗರಿಗಳನ್ನು ಗುರುತಿಸಿ ಜೋಡಿಸುವ ಕೆಲಸಗಳು ನಡೆದಿವೆ. ಅಕ್ಷರಗಳು ಸ್ಪುಟವಾಗಿ ಕಾಣುವಂತೆ ಮಾಡುವ ಕಾರ್ಯಗಳು ನಡೆದಿವೆ. ಕಾರ್ಯ ಪೂರ್ಣಗೊಂಡ ನಂತರ ಇವುಗಳ ನಿರ್ವಹಣೆ ಕುರಿತು ತರಬೇತಿ ಕೂಡ ನೀಡಲಿದ್ದಾರೆ.

ಇರುವ ತಾಳೆಗರಿ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವ ಕುರಿತು ವಂಶಸ್ಥರು ಕೇಂದ್ರ, ರಾಜ್ಯಸರ್ಕಾರಗಳಿಗೆ ಪತ್ರ ವ್ಯವಹಾರ ಮಾಡಿದ್ದಾರೆ. ಆದರೆ ಯಾರಿಂದಲೂ ಸ್ಪಂದನೆ ದೊರೆಯದಿದ್ದಾಗ ಬೇಸತ್ತು ಕೈಬಿಟ್ಟಿದ್ದರು. ಕುಮಾರವ್ಯಾಸರ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಿಸಲಾಗಿದೆ.

ಕೆಲ ಸೌಲಭ್ಯಗಳನ್ನು ನೀಡಿಲ್ಲ. ಕುಮಾರವ್ಯಾಸರ ಜನ್ಮಸ್ಥಳದಲ್ಲಿ ಸ್ಮಾರಕ ಭವನ ನಿರ್ಮಿಸಿದ್ದರೆ ಅರ್ಥ ಇರುತ್ತಿತ್ತು. ಪ್ರಮುಖವಾಗಿ ಈ ಸ್ಥಳವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎನ್ನುವ ಅಭಿಪ್ರಾಯಗಳು ಗ್ರಾಮಸ್ಥರಲ್ಲಿದ್ದು, ಅಳಿದುಳಿದಿರುವ ಮಹಾಕವಿ ಕುಮಾರವ್ಯಾಸರ ಸಾಹಿತ್ಯ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ.

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next