Advertisement

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಳಶೆಟ್ಟಿ ರಾಜೀನಾಮೆ

05:36 PM May 02, 2022 | Team Udayavani |

ಗದಗ: ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೋಹನ ಪಿ.ಮಾಳಶೆಟ್ಟಿ ಅವರು ರಾಜೀನಾಮೆ ನೀಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಮುಂದಿನ ಒಂದೂವರೆ ವರ್ಷದಲ್ಲಿ ಸಾಲುಸಾಲು ಚುನಾವಣೆಗಳು ಎದುರಾಗಲಿದ್ದು, ತೆರವಾಗಿರುವ ಪಕ್ಷದ ಸಾರಥ್ಯವನ್ನು ಯಾರು ವಹಿಸಿಕೊಳ್ಳುವರು ಎಂಬುದು ಕುತೂಹಲ ಮೂಡಿಸಿದೆ.

Advertisement

2001ರಲ್ಲಿ ನಡೆದ ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಜನತಾದಳದಿಂದ ಆಯ್ಕೆಯಾಗಿದ್ದ ಮೋಹನ ಮಾಳಶೆಟ್ಟಿ, ಸ್ಥಾಯಿ ಸಮಿತಿ ಸದಸ್ಯರೂ ಆಗಿದ್ದರು. ಬಳಿಕ 2007ರಲ್ಲಿ ಬಿಜೆಪಿ ಪ್ರವೇಶಿಸಿರುವ ಅವರು ಸಾಮಾನ್ಯ ಕಾರ್ಯಕರ್ತನಿಂದ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದರು. ಈ ನಡುವೆ 2007 ರಿಂದ 200, 2013 ರಿಂದ 2016 ಹಾಗು 2016 ರಿಂದ 2020ರ ವರೆಗೆ ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2020ರ ಮಾರ್ಚ್‌ 11 ರಿಂದ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು.

ಜಿಲ್ಲೆಯ ಬಿಜೆಪಿ ಶಾಸಕರು, ಸಚಿವರೊಂದಿಗೆ ಸಮನ್ವಯತೆ ಸಾಧಿಸಿ, ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಅವರು, ತಮ್ಮ ಅವಧಿಯಲ್ಲಿ ಎದುರಾದ ವಿಧಾನಸಭಾ ಚುನಾವಣೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳು, ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ರಣತಂತ್ರ ರೂಪಿಸಿದ್ದಾರೆ. ಅಲ್ಲದೇ, ಪಕ್ಷದ ಗೆಲುವಿಗೆ ಅವಿರತ ಶ್ರಮವಹಿಸಿದ್ದರು.

ರಾಜೀನಾಮೆ ಪತ್ರದಲ್ಲೇನಿದೆ?

ಬಿಜೆಪಿ ರಾಜ್ಯಾದ್ಯಕ್ಷ ನಳಿನ್‌ ಕುಮಾರ್‌ ಕಟೀಲ ಅವರಿಗೆ ದಿ.1-5-22ರಂದು ಪತ್ರ ಬರೆದಿರುವ ಮೋಹನ ಮಾಳಶೆಟ್ಟಿ, ಕಳೆದ ಸುಮಾರು 9.5 ವರ್ಷಗಳಿಂದ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಪಕ್ಷದ ರಾಷ್ಟ್ರೀಯ ಮಟ್ಟದ, ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಆದೇಶಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಸದ್ಯದ ಸಮಯದಲ್ಲಿ ನನ್ನ ವೈಯಕ್ತಿಕ ಕಾರಣಗಳಿಂದ ನನ್ನಿಂದ ಪಕ್ಷದ ಚಟುವಟಿಕೆಗಳಿಗೆ ಹಿನ್ನಡೆಯಾಗಬಾರದೆಂಬ ಉದ್ದೇಶದಿಂದ ನಾನು ಸ್ವಇಚ್ಛೆಯಿಂದ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇಲ್ಲಿಯವರೆಗೆ ನನಗೆ ಮಾರ್ಗದರ್ಶನ ಮಾಡಿದ ನಿಮ್ಮೆಲ್ಲರಿಗೂ ಅಭಿನಂದಿಸುತ್ತೇನೆ’ ಎಂದು ಉಲ್ಲೇಖೀಸಿದ್ದಾರೆ.

Advertisement

ವಿಧಾನಸಭಾ ಚುನಾವಣೆಗೆ ಸಿದ್ಧತೆ?

ರಾಜ್ಯಾದ್ಯಂತ 2023ರ ವಿಧಾನಸಭಾ ಚುನಾವಣಾ ಕಾವು ಪಡೆಯುತ್ತಿದೆ. ಪುನರಾಯ್ಕೆ ಬಯಸಿರುವ ಹಾಲಿ ಶಾಸಕರು ಸೇರಿದಂತೆ ಸರ್ಧಾಕಾಂಕ್ಷಿಗಳು ಈಗಾಗಲೇ ಚುನಾವಣಾ ಸಿದ್ಧತೆ ಆರಂಭಿಸಿದ್ದಾರೆ. ಅಲ್ಲದೇ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗದಗ ಮತಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮೋಹನ ಮಾಳಶೆಟ್ಟಿ ಅವರಿಗೆ ಕೊನೆ ಗಳಿಗೆಯಲ್ಲಿ ಅವಕಾಶ ಕೈತಪ್ಪಿತ್ತು. ಆದರೆ, ಈ ಬಾರಿ ಶತಾಯಗತಾಯ ಚುನಾವಣೆಯಲ್ಲಿ ಗೆಲ್ಲಬೇಕೆಂದು ನಿರ್ಧರಿಸಿದ್ದಾರೆ. ಆದರೆ, ಪಕ್ಷದ ಜವಾಬ್ದಾರಿಯೊಂದಿಗೆ ಕ್ಷೇತ್ರದಲ್ಲಿ ಸಂಘಟನೆ ಮಾಡುವುದು ಕಷ್ಟಕರ. ಅಲ್ಲದೇ, ಕೆಲ ದಿನಗಳಿಂದ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದರಿಂದ ಚಿಕಿತ್ಸೆಗಾಗಿ ಪಕ್ಷದ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದಾರೆ ಎಂಬುದು ಅವರ ಆಪ್ತರ ಅಂಬೋಣ.

ಯಾರಿಗೆ ಒಲಿಯಲಿದೆ ಸಾರಥ್ಯ?

ಮೋಹನ ಮಾಳಶೆಟ್ಟಿ ಅವರ ರಾಜೀನಾಮೆ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಒಂದೇ ವರ್ಷ ಬಾಕಿ ಉಳಿದಿದೆ. ಜೊತೆಗೆ ಇದೇ ಅವಧಿಯಲ್ಲಿ ಜಿಪಂ ಹಾಗೂ ತಾಪಂ ನಡೆಯುವ ಸಾಧ್ಯತೆಗಳಿದ್ದು, ವಿಧಾನಸಭಾ ಚುನಾವಣೆ ಹತ್ತರಿವಾಗಲಿದೆ. ಈ ಹಂತದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ಸೂಕ್ತ ಎಂಬುದು ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆಯಲ್ಲಿ ತೀರ್ಮಾನವಾಗಬೇಕಿದೆ.

ಅಲ್ಲದೇ, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಗದಗಿನಲ್ಲಿ ಮಾತ್ರ ಬಿಜೆಪಿ ಶಾಸಕರಿಲ್ಲ. ಅಲ್ಲದೇ, ಪಕ್ಷದ ಕಾರ್ಯಚಟುವಟಿಕೆಗಳ ದೃಷ್ಟಿಯಿಂದ ಗದಗ ಶಹರದ ನಾಯಕರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡಬಹುದೆಂಬ ಮಾತು ಕೇಳಿಬರುತ್ತಿವೆ.

ದಶಕಗಳಿಂದ ಪಕ್ಷದಲ್ಲಿ ದುಡಿದಿದ್ದಕ್ಕೆ ಖುಷಿಯಿದೆ. ಮುಖ್ಯವಾಗಿ ಅನಾರೋಗ್ಯದ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ಆರೋಗ್ಯ ಸಮಸ್ಯೆಯಿಂದ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗದಿರಲಿ ಎಂದು ಈ ನಿರ್ಧಾರ ಕೈಗೊಂಡಿದ್ದೇನೆ. ಈ ಬಗ್ಗೆ ಈ ಹಿಂದೆಯೇ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೆ. ಕಾರಣಾಂತರದಿಂದ ಅದು ಈಗ ಕೈಗೂಡಿದೆ. ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ದುಡಿಯುತ್ತೇನೆ. -ಮೋಹನ ಪಿ.ಮಾಳಶೆಟ್ಟಿ ಬಿಜೆಪಿ ಜಿಲ್ಲಾಧ್ಯಕ್ಷರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next