Advertisement

ನಗರದ ಮನೆಮನೆ ಕಸದಿಂದ ರಸ

07:06 PM Sep 17, 2021 | Team Udayavani |

ಹಾವೇರಿ: ಕಸದಿಂದ ಏನು ಮಾಡಲು ಸಾಧ್ಯ ಎನ್ನುವವರೇ ಹೆಚ್ಚು. ಆದರೆ ಇಲ್ಲಿಯ ನಗರಸಭೆ ಕಸದಿಂದಲೇ ರಸ ತೆಗೆಯವ ಕಾರ್ಯಕ್ಕೆ
ಮುಂದಾಗಿದೆ. ಮನೆ-ಮನೆಯಿಂದ ಸಂಗ್ರಹಿಸಿದ ತ್ಯಾಜ್ಯದಲ್ಲಿ ಸಾವಯವ ಗೊಬ್ಬರ ತಯಾರಿಸಿ “ವರದಾ’ ರಸಗೊಬ್ಬರ ಎಂಬ ಬ್ರ್ಯಾಂಡ್ ಹೆಸರಲ್ಲಿ ಮಾರಾಟ ಮಾಡುತ್ತಿದೆ. ಈ ಮೂಲಕ ನಗರಸಭೆಯ ಆದಾಯ ಹೆಚ್ಚಿಸುವ ಮೂಲ ಕಂಡುಕೊಂಡು ಇತರರಿಗೆ ಮಾದರಿಯಾಗಿದೆ.

Advertisement

ತಾಲೂಕಿನ ಗೌರಾಪುರದ ಗುಡ್ಡದಲ್ಲಿರುವ 10 ಎಕರೆ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಬಹುವರ್ಷಗಳ ಹಿಂದೆಯೇ ಸ್ಥಾಪಿಸಲಾಗಿತ್ತು.
ನಗರದಿಂದ ಹತ್ತಾರು ಕಿಮೀ ದೂರದಲ್ಲಿದ್ದ ಈ ಘಟಕಕ್ಕೆ ನಗರದಲ್ಲಿ ಸಂಗ್ರಹಿಸುವ ತ್ಯಾಜ್ಯವನ್ನು ನಿತ್ಯ ಟ್ರ್ಯಾಕ್ಟರ್ ಗಳ ಮೂಲಕ ಸಂಗ್ರಹಿಸಿ ಕೊಂಡು ಹೋಗಿ ಸುರಿದು ಬರಲಾಗುತ್ತಿತ್ತು. ಕೆಲವೊಮ್ಮೆ ಟ್ರ್ಯಾಕ್ಟರ್ ಚಾಲಕರು ನಗರದ ಹೊರಭಾಗದಲ್ಲಿಯೇ ತ್ಯಾಜ್ಯವನ್ನು ಸುರಿದು
ಹೋಗುತ್ತಿದ್ದರು.

ಇದರಿಂದ ಅನೇಕ ದೂರುಗಳು ನಗರಸಭೆಗೆ ಬರುತ್ತಿದ್ದವು. ಈ ಬಗ್ಗೆ ಎಷ್ಟು ಸೂಚನೆ ನೀಡಿದರೂ ಈ ಪ್ರಕ್ರಿಯೆ ನಿಂತಿರಲಿಲ್ಲ. ಹೀಗಾಗಿ ನಗರದಲ್ಲಿನ ತ್ಯಾಜ್ಯ ವಿಲೇವಾರಿಯದ್ದು ಬಹುದೊಡ್ಡ ಸಮಸ್ಯೆಯೇ ಆಗಿತ್ತು. ಇದೀಗ ತ್ಯಾಜ್ಯದಿಂದ ರಸಗೊಬ್ಬರ ತಯಾರಿಕೆ ಪ್ರಕ್ರಿಯೆ ಆರಂಭಗೊಂಡ ನಂತರ ನಗರದಲ್ಲಿ ಉತ್ಪತ್ತಿಯಾಗುತ್ತಿದ್ದ ಕಸಕ್ಕೆ ಮುಕ್ತಿ ದೊರೆಯುತ್ತಿದ್ದು, ನಗರಸಭೆಗೆ ಹೆಚ್ಚಿನ ಆದಾಯವನ್ನು
ತಂದುಕೊಡುತ್ತಿದೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1003 ಹೊಸ ಪ್ರಕರಣ : 1199 ಸೋಂಕಿತರು ಗುಣಮುಖ

ಸಾವಯವ ಗೊಬ್ಬರ ತಯಾರಿ: ಸ್ಥಳೀಯ ನಗರಸಭೆಯು ನಗರದಲ್ಲಿನ ಮನೆಮನೆಯಿಂದ ಸಂಗ್ರಹಿಸುವ ಹಸಿಕಸ ಹಾಗೂ ಚರಂಡಿ ತ್ಯಾಜ್ಯ ದಿಂದ ಸಾವಯವ ಗೊಬ್ಬರ ತಯಾರಿಸುತ್ತಿದೆ. ಮನೆಯಿಂದ ಸಂಗ್ರಹಿಸುವ ಹಸಿಕಸವನ್ನು ಆರಂಭದಲ್ಲಿಯೇ ಬೇರ್ಪಡಿಸಿ ಪ್ರತ್ಯೇಕವಾಗಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಹೀಗೆ ಬಂದ ಕಸವನ್ನು ಸಾವಯವ ಗೊಬ್ಬರ ತಯಾರಿಕೆಯ ತೊಟ್ಟಿಯಲ್ಲಿ ಹಾಕಿ ಎರೆಹುಳುಗಳನ್ನು ಬಿಟ್ಟು ಕೊಳೆಸಿ ಗೊಬ್ಬರ ತಯಾರಿಸಲಾಗುತ್ತಿದೆ.

Advertisement

20 ಸಾವಿರ ಮೊತ್ತದ ಗೊಬ್ಬರ ಮಾರಾಟ: ಕಳೆದ ಮಾರ್ಚ್‌ನಿಂದ ಗೊಬ್ಬರ ತಯಾರಿಕೆ ಘಟಕ ಆರಂಭವಾಗಿದ್ದು, ವರದಾ ಸಾವಯವ ರಸಗೊಬ್ಬರ ಎಂಬ ಹೆಸರಿಟ್ಟು 5 ಕೆಜಿ, 10 ಕೆಜಿ, 20 ಕೆಜಿ, 25 ಕೆಜಿ, 50 ಕೆಜಿಯ ಬ್ಯಾಗ್‌ಗಳನ್ನು ತಯಾರಿಸಿ ಕಳೆದ ಎರಡು ತಿಂಗಳಿಂದ ಗೊಬ್ಬರದ ಮಾರಾಟ ಆರಂಭ ಮಾಡಲಾಗಿದೆ. ಸದ್ಯ ರಸಗೊಬ್ಬರವನ್ನು ಕೆಜಿಗೆ 3 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕಳೆದ ಎರಡು ತಿಂಗಳಲ್ಲಿ 20 ಸಾವಿರಕ್ಕೂ ಹೆಚ್ಚು ಮೊತ್ತದ ಗೊಬ್ಬರ ಮಾರಾಟ ಮಾಡಲಾಗಿದೆ. 5 ಕೆಜಿ, 10 ಕೆಜಿಯ ಗೊಬ್ಬರದ ಬ್ಯಾಗ್‌ಗಳನ್ನು ಸ್ಥಳೀಯ ನಗರಸಭೆಯಲ್ಲಿಯೇ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಬೇಕಾಗಿದ್ದಲ್ಲಿ ಉತ್ಪಾದನಾ ಘಟಕಕ್ಕೆ ಕಳುಹಿಸಿ ಅಲ್ಲಿಯೇ ತೂಕ ಮಾಡಿಸಿ ಮಾರಾಟ ಮಾಡಲಾಗುತ್ತಿದೆ.

ಆದಾಯದ ನಿರೀಕ್ಷೆ
ತಾಲೂಕಿನ ‌ ಗೌರಾಪುರ ಬಳಿಯಲ್ಲಿ ‌ ತ್ಯಾಜ್ಯ ವಿಲೇವಾರಿ ಘಟಕದಲ್ಲಿಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ತರಕಾರಿ ಸಿಪ್ಪೆ, ಮುಂತಾದ
ಹಸಿಕಸಗಳನ್ನು ಒಂದೆಡೆ ಸಂಗ್ರಹಿಸಿ ಗೊಬ್ಬರ ಮಾಡಿದರೆ,ಇನ್ನೊಂದೆಡೆ ರಟ್ಟು ಪೇಪರ್‌ ಗಳನ್ನು ಪ್ರತ್ಯೇಕ ಮಾಡಲಾಗುತ್ತದೆ.ಪ್ಲಾಸ್ಟಿಕ್‌ ಬಾಟಲಿಗಳು, ಇತರ ಪ್ಲಾಸ್ಟಿಕ್‌ ತೆಂಗಿನ ಚಿಪ್ಪು,ತೆಂಗಿನ ಗರಿ,ಬಿಯರ್‌ ಬಾಟಲ್‌,ಗಾಜಿನ ಬಾಟಲ್‌,ಟೈರ್‌,ಕಬ್ಬಿಣದ ತಗಡುಗಳು ಹೀಗೆ ಎಲ್ಲವನ್ನೂ ಪ್ರತ್ಯೇಕಿಸಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ತಿಂಗಳು 30-35 ಟನ್‌ ನಷ್ಟು ಗೊಬ್ಬರ ಸದ್ಯ ಉತ್ಪಾದನೆಯಾಗುತ್ತಿದೆ. ನಗರದ ವಾರ್ಡ್‌ ಗಳಲ್ಲಿ ಕಸ ಸಂಗ್ರಹಣೆಯ ವಾಹನಗಳಲ್ಲಿ 5-10 ಕೆಜಿಯ ಗೊಬ್ಬರ ಬ್ಯಾಗ್‌ ಗಳನ್ನು ಇಟ್ಟು ಕಳುಹಿಸಿ ಮಾರಾಟ ಮಾಡಲು ಸಹ ಉದ್ದೇಶಿ ಸಲಾಗಿದ್ದು,ಇದರಿಂದ ಅಲ್ಪ ಪ್ರಮಾಣದಲ್ಲಿ ಆದಾಯವೂ ಬರಲಿದೆ ಎಂದು ನಗರಸಭೆ ಪರಿಸರ ಅಭಿಯಂತರ ಸೋಮಶೇಖರ ‌ ಮಲ್ಲಾಡದ ತಿಳಿಸಿದ್ದಾರೆ.

ನಗರದಲ್ಲಿ ಸಂಗ್ರಹಗೊಂಡ ತ್ಯಾಜ್ಯದಿಂದ ಸಾವಯವ ಗೊಬ್ಬರ ಉತ್ಪಾದಿಸಲಾಗುತ್ತಿದ್ದು,ಕಳೆದ ಎರಡು ತಿಂಗಳಿನಿಂದ ಗೊಬ್ಬರನ್ನು ಮಾರಾಟ
ಮಾಡಲಾಗುತ್ತಿದೆ. ಅಲ್ಲದೇ ಮನೆಮನೆ ಕಸ ಸಂಗ್ರಹಕ್ಕೆ ತೆರಳುವ ವಾಹನಗಳಲ್ಲೂ ಗೊಬ್ಬರವನ್ನುಕಳಿಸಿ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ನಗರಸಭೆಗೆ ಇನ್ಮುಂದೆ ಇದರಿಂದ ಸ್ವಲ್ಪ ಪ್ರಮಾಣದಲ್ಲಾದರೂ ಆದಾಯ ಬರುವ ನಿರೀಕ್ಷೆ ಹೊಂದಲಾಗಿದೆ. ಸಂಜೀವ ಕುಮಾರ ನೀರಲಗಿ, ಅಧ್ಯಕ್ಷರು ನಗರಸಭೆ ಹಾವೇರಿ

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next