Advertisement

ಕೋವಿಡ್‌ ಮುಂಜಾಗ್ರತವಾಗಿ 50 ಬೆಡ್‌ ತಯಾರಿ : ತಹಶೀಲ್ದಾರ್‌ ಕುಲಕರ್ಣಿ

07:26 PM Apr 26, 2021 | Team Udayavani |

ಗುಳೇದಗುಡ್ಡ: ತಾಲೂಕಿನಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾದರೆ ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಮತ್ತು ಕೊರೊನಾದಿಂದ ಬಳಲುವವರಿಗೆ 50 ಹಾಸಿಗೆ ಬೆಡ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್‌ ಜಿ.ಎಂ. ಕುಲಕರ್ಣಿ ತಿಳಿಸಿದ್ದಾರೆ.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಆದರೂ ಈ ಭಾಗದಲ್ಲಿ ಹೆಚ್ಚು ಕೊರೊನಾ ಬಂದರೆ, ಕಮತಗಿಗೆ ರಸ್ತೆಗೆ ಹೊಂದಿಕೊಂಡಿರುವ ಮೆಟ್ರಿಕ್‌ ನಂತರದ ಬಾಲಕರ ವಸತಿ ಗೃಹವನ್ನು ಇದಕ್ಕಾಗಿ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಸದ್ಯ ಕೊರೊನಾ ಎರಡು ಕೇಸ್‌ ಕಂಡು ಬಂದಿವೆ. ಇನ್ನೂ ಹೆಚ್ಚಾದರೆ ಅವುಗಳನ್ನು ನಿಯಂತ್ರಿಸಲಾಗುವುದು ಎಂದರು.

ಎಂಟು ಮದುವೆ: ತಾಲೂಕಿನಲ್ಲಿ ಒಟ್ಟು ಎಂಟು ಮದುವೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. 50 ಜನರು ಸೇರಲು ಸೂಚಿಸಿದ್ದು, ಪೊಲೀಸ್‌ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಪಿಡಿಒಗಳಿಗೆ ಮದುವೆ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಮದುವೆಯಲ್ಲಿ ಕಡಿಮೆ ಜನರು ಸೇರಿದ್ದರಿಂದ ಕಾರ್ಯಕ್ರಮಗಳು ಸುಸೂತ್ರವಾಗಿ ಜರುಗಿವೆ ಎಂದು ಹೇಳಿದರು. 10 ಸಾವಿರ ದಂಡ: ಪಟ್ಟಣದಲ್ಲಿ ಮಾಸ್ಕ್ ಧರಿಸದೇ ಓಡಾಡುವವರ ವಿರುದ್ಧ ಹಾಗೂ ಅನಾವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿರುವವರಿಗೆ ದಂಡ ವಿಧಿ ಸಿ ಅವರಿಂದ 10 ಸಾವಿರ ರೂ. ಪೊಲೀಸರು, ಪುರಸಭೆಯ ಸಿಬ್ಬಂದಿ ವಸೂಲಿ ಮಾಡಿದ್ದಾರೆ ಎಂದು ಕುಲಕರ್ಣಿ ಹೇಳಿದರು.

ಪಟ್ಟಣದಲ್ಲಿ ವೀಕೆಂಡ್‌ ಕರ್ಫ್ಯೂ ಇದ್ದರೂ ಅಂಗಡಿ ತೆರೆದಿರುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ತಹಶೀಲ್ದಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ. 30 ವಾಹನ ಮೇಲೆ ಕೇಸ್‌: ಮಾಸ್ಕ್ ಹಾಕಿಕೊಳ್ಳದೇ ಪಟ್ಟಣದಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ಸವಾರರ ವಿರುದ್ಧ ಪೊಲೀಸರು 2500 ರೂ. ದಂಡ ಹಾಕಿದ್ದು, ಅಲ್ಲದೇ ಕರ್ಫ್ಯೂ ಸಮಯದಲ್ಲಿ ಜನಸಂಚಾರ ನಿರ್ಬಂಧವಿದ್ದರೂ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 30 ವಾಹನಗಳನ್ನು ಸೀಜ್‌ ಮಾಡಿ ಕೇಸ್‌ ದಾಖಲಿಸಿದ್ದಾಗಿ ಎಸ್‌ಐ ಪುಂಡಲಿಕ ಪಟಾತರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next