Advertisement

ಶ್ರೀ ಕ್ಷೇತ್ರ ಕಟೀಲು ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ

08:03 PM Jan 31, 2020 | mahesh |

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜ. 22ರಿಂದ ಫೆ. 3ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಜ. 22ರಂದು ತೋರಣ ಮುಹೂರ್ತದೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಜ. 24ರಂದು ಸುವರ್ಣ ಧ್ವಜಪ್ರತಿಷ್ಠೆ, ಜ. 30ರಂದು ಬ್ರಹ್ಮಕಲಶ, ಫೆ. 1ರಂದು ನಾಗಮಂಡಲ, 2ರಂದು ಕೋಟಿ ಜಪ ಯಜ್ಞ ಮತ್ತು 3ರಂದು ಸಹಸ್ರ ಚಂಡಿಕಾಯಾಗ ನಡೆಯಲಿದೆ.  ಪ್ರಧಾನ ಸಮಿತಿಯನ್ನೊಳಗೊಂಡ 30 ಸಮಿತಿಗಳು ರಚನೆಗೊಂಡಿವೆ. ಸಾವಿರಾರು ಸ್ವಯಂಸೇವಕರು ಆಗಮಿಸಿ ಕರಸೇವೆಯಲ್ಲಿ ತೊಡಗಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮತ್ತು ಶಾಸಕ ಉಮಾನಾಥ ಕೋಟ್ಯಾನ್‌ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

Advertisement

ಅಭಿವೃದ್ಧಿ ಕಾರ್ಯಗಳು
ದೇವಸ್ಥಾನದ ಮುಂಭಾಗದ ಅಂಗಡಿಗಳನ್ನು ತೆರವುಗೊಳಿಸಿ, ರಥ ಬೀದಿಯನ್ನು ವಿಶಾಲಗೊಳಿಸಲಾಗಿದೆ. ಸುಸಜ್ಜಿತ ಪಾಕಶಾಲೆ ನಿರ್ಮಾಣಗೊಂಡಿದೆ. ಯಾತ್ರೀ ನಿವಾಸದ ಎರಡನೇ ಹಂತದ ನಿರ್ಮಾಣ, ಇಂಟರ್‌ಲಾಕ್‌ ಅಳವಡಿಸುವಿಕೆ ಸಂಪೂರ್ಣಗೊಂಡಿದೆ. 50 ಲಕ್ಷ ರೂ. ವೆಚ್ಚದ ಸಾರ್ವಜನಿಕ ಶೌಚಾಲಯ ಉದ್ಘಾಟನೆಗೊಂಡಿದೆ. ದೇವಾಲಯಕ್ಕೆ ಹೋಗುವುದಕ್ಕೆ ಸ್ಟೀಲ್‌ ಬ್ರಿಜ್‌, ಹೊಸದಾದ ರಥದ ಕೊಟ್ಟಿಗೆ ನಿರ್ಮಿಸಲಾಗಿದೆ. ಸ್ವರ್ಣಲೇಪಿತ ಧ್ವಜಸ್ತಂಭದ ನಿರ್ಮಾಣವಾಗಿದೆ. 36 ಕೊಠಡಿಗಳ ಬ್ರಾಮರೀ ವಸತಿಗೃಹ ನಿರ್ಮಾಣಗೊಂಡಿದೆ. ಬಸ್‌ ನಿಲ್ದಾಣದಲ್ಲಿ ವಿಶಾಲವಾದ ವೇದಿಕೆ ಮತ್ತು 2,500 ಜನರು ಕುಳಿತುಕೊಳ್ಳಬಹುದಾದ ಸಭಾಂಗಣ ಸಿದ್ಧವಾಗಿದೆ.

ರಸ್ತೆ ವಿಸ್ತರಣೆ
ಕಿನ್ನಿಗೋಳಿ-ಉಲ್ಲಂಜೆ- ಕಟೀಲು, ಬಜಪೆ-ಕಟೀಲು, ಮೂರುಕಾವೇರಿ- ಕಟೀಲು ರಸ್ತೆಗಳನ್ನು 25 ಕೋ.ರೂ. ವೆಚ್ಚದಲ್ಲಿ ಅಗಲಗೊಳಿಸಲಾಗುತ್ತಿದೆ. ತಾತ್ಕಾಲಿಕ ಬೈಪಾಸ್‌ ರಸ್ತೆಗಳನ್ನೂ ನಿರ್ಮಿಸಲಾಗಿದೆ.

ಕುದುರು ಅಭಿವೃದ್ಧಿ
ಮೂಲಸ್ಥಾನವಾದ ಕುದುರುವಿನಲ್ಲಿ ನಾಗಮಂಡಲ, ಕೋಟಿ ಜಪಯಜ್ಞ, ಸಹಸ್ರ ಚಂಡಿಕಾ ಯಾಗ ನಡೆಯಲಿದೆ. ಕುದುರುವಿನಲ್ಲಿ ಯಂತ್ರಗಳನ್ನು ಬಳಸದೆ ಶ್ರಮದಾನದಿಂದ ನೆಲವನ್ನು ಹದಗೊಳಿಸಲಾಗಿದೆ.

ಕೋಟಿ ಜಪ ಯಜ್ಞ
ಒಂದು ತಿಂಗಳಿಂದ ಹಗಲು ಭಜನೆ ನಡೆಯುತ್ತಿದ್ದು, ಫೆ. 4ರ ವರೆಗೆ ಮುಂದುವರಿಯಲಿದೆ. ಕೋಟಿ ಜಪಯಜ್ಞದ ಅಂಗವಾಗಿ ಫೆ. 2ರಂದು ಜಪಸಮರ್ಪಣೆ, ಪ್ರಸಾದ ವಿತರಣೆ ನಡೆಯಲಿದೆ. ಹೊರೆ ಕಾಣಿಕೆಯನ್ನು ಸಂಗ್ರಹಿಸಲು ವಿಶಾಲ ಉಗ್ರಾಣ ನಿರ್ಮಾಣ ಮಾಡಲಾಗಿದೆ ಎಂದು ಆನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಆಸ್ರಣ್ಣ ಮತ್ತು ಅನಂತಪದ್ಮನಾಭ ಆಸ್ರಣ್ಣ ವಿವರಿಸಿದರು.

Advertisement

ಆನುವಂಶಿಕ ಮೊಕ್ತೇಸರರು ಮತ್ತು ಆನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ, ಆಡಳಿತ ಸಮಿತಿಯ ಅಧ್ಯಕ್ಷ ಮತ್ತು ಆನುವಂಶಿಕ ಮೊಕ್ತೇಸರ ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರುಗುತ್ತು, ಡಾ| ಆಶಾಜ್ಯೋತಿ ರೈ ಉಪಸ್ಥಿತರಿದ್ದರು.

ಪಾರ್ಕಿಂಗ್‌ಗೆ 40 ಎಕರೆ
ಭಕ್ತರ ವಾಹನಗಳಿಗೆ ದೇವಸ್ಥಾನದ ನಾಲ್ಕು ದಿಕ್ಕುಗಳಲ್ಲಿ 19 ಕಡೆಗಳಲ್ಲಿ 40 ಎಕರೆ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಒಟ್ಟು 5 ಸಾವಿರ ವಾಹನಗಳನ್ನು ಇಲ್ಲಿ ನಿಲುಗಡೆ ಮಾಡಬಹುದು. ಅಲ್ಲಿಂದ ಭಕ್ತರನ್ನು ದೇವಸ್ಥಾನಕ್ಕೆ ಪ್ರತ್ಯೇಕ ವಾಹನದಲ್ಲಿ ಕರೆದೊಯ್ಯಲಾಗುವುದು. ಅಜಾರಿನಿಂದ ಗಿಡಿಗೆರೆಯವರೆಗೆ, ಮಾಂಜದ ಪಾರ್ಕಿಂಗ್‌ ಜಾಗದಲ್ಲಿ ವಿವಿಧ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಪದವಿ ಕಾಲೇಜಿನ ಕ್ರೀಡಾಂಗಣದಲ್ಲಿ ಮಳಿಗೆಗಳು, ಮನೋರಂಜನೆಗೆ ವ್ಯವಸ್ಥೆ ಮಾಡಲಾಗಿದೆ.

25 ಲಕ್ಷ ಭಕ್ತರ ನಿರೀಕ್ಷೆ ನಿರಂತರ ಊಟೋಪಹಾರ
ಉತ್ಸವಕ್ಕೆ 25 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. 7 ಕೋ.ರೂ. ಖರ್ಚು ನಿರೀಕ್ಷಿಸಲಾಗಿದೆ. ಏಕಕಾಲದಲ್ಲಿ 5 ಸಾವಿರ ಭಕ್ತರಿಗೆ ಊಟೋಪಹಾರಕ್ಕೆ ಸಿತ್ಲಬಯಲಿನಲ್ಲಿ ಚಪ್ಪರ, ಪಾಕಶಾಲೆ ಸಿರ್ಮಿಸಲಾಗಿದೆ. ಬೆಳಗ್ಗೆ 6ರಿಂದ 11ರ ವರೆಗೆ ಉಪಾಹಾರ, 11.30ರಿಂದ 3.30ರ ವರೆಗೆ ಅನ್ನ ಪ್ರಸಾದ, ಸಂಜೆ 4ರಿಂದ 6ರವರೆಗೆ ಉಪಾಹಾರ, ರಾತ್ರಿ 12ರ ವರೆಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಬ್ರಹ್ಮಕಲಶೋತ್ಸವ: ಪ್ರಮುಖ ಅಂಶಗಳು
ಜ. 22: ತೋರಣ ಮುಹೂರ್ತ
ಜ. 24: ಸ್ವರ್ಣಧ್ವಜಸ್ತಂಭ ಪ್ರತಿಷ್ಠೆ
ಜ. 30: ಬ್ರಹ್ಮಕಲಶಾಭಿಷೇಕ
ಫೆ. 1: ನಾಗಮಂಡಲ
ಫೆ. 2: ಕೋಟಿ ಜಪಯಜ್ಞ
ಫೆ. 3: ಸಹಸ್ರ ಶ್ರೀ ಚಂಡಿಕಾಯಾಗ

Advertisement

Udayavani is now on Telegram. Click here to join our channel and stay updated with the latest news.

Next