Advertisement

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಡಗರಕ್ಕೆ ಕಡಲ ನಗರಿ ಸಜ್ಜು

03:24 PM Aug 08, 2022 | Team Udayavani |

ಮಹಾನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷಾಚರಣೆಯ ಅಂಗವಾಗಿ ದ.ಕ. ಜಿಲ್ಲೆಯಾದ್ಯಂತ “ಹರ್‌ ಘರ್‌ ತಿರಂಗಾ’ (ಮನೆ ಮನೆಗೂ ರಾಷ್ಟ್ರಧ್ವಜ) ಅಭಿಯಾನ ಆಯೋಜಿಸಲಾಗಿದ್ದು, ಇದಕ್ಕೆ ಕಡಲ ನಗರಿ ಮಂಗಳೂರು ಸಜ್ಜಾಗಿದೆ.

Advertisement

ಜಿಲ್ಲಾಡಳಿತ, ಮಹಾನಗರ ಪಾಲಿಕೆ, ವಿವಿಧ ರಾಜಕೀಯ ಪಕ್ಷಗಳು, ಸಂಘ – ಸಂಸ್ಥೆಗಳ ವತಿಯಿಂದ ಅಮೃತ ಸಡಗರ ಸಾಕಾರವಾಗಲಿದ್ದು, ನಗರದ ಎಲ್ಲ ಮನೆಗಳಲ್ಲಿಯೂ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಆ. 13ರಿಂದ 15ರ ವರೆಗೆ ಹಾರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 60 ಸಾವಿರ ರಾಷ್ಟ್ರಧ್ವಜವನ್ನು ಪ್ರತಿ ಮನೆಗಳಲ್ಲಿ, ಸರಕಾರಿ ಕಚೇರಿ ಕಟ್ಟಡಗಳು, ಸರಕಾರೇತರ ಸಂಘ – ಸಂಸ್ಥೆಗಳ ಕಟ್ಟಡಗಳು ಮತ್ತು ಇತರ ಎಲ್ಲ ಕಟ್ಟಡಗಳ ಮೇಲೆ ಹಾರಿಸಲು ಉದ್ದೇಶಿಸಲಾಗಿದೆ. ಶಾಲಾ-ಕಾಲೇಜು, ಸಂಸ್ಥೆಗಳ ಸಹಕಾರದೊಂದಿಗೆ ಮಕ್ಕಳ ಮುಖಾಂತರ ರಾಷ್ಟ್ರಧ್ವಜವನ್ನು ಎಲ್ಲ ಮನೆಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ರಾಷ್ಟ್ರಧ್ವಜವನ್ನು ಪ್ರತಿ ಧ್ವಜಕ್ಕೆ 22 ರೂ.ಗಳಂತೆ ವಿತರಿಸಲಾಗುತ್ತಿದೆ. ಪಾಲಿಕೆ, ವಲಯ/ವಾರ್ಡ್‌ ಕಚೇರಿ, ಮಾಲ್‌, ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರಧ್ವಜ ವಿತರಿಸಲಾಗುತ್ತದೆ.

ಪಾಲಿಕೆ-ಮಾಲ್‌ನಲ್ಲಿ ಸೆಲ್ಫಿ! ಪಾಲಿಕೆಯ ಕೇಂದ್ರ ಕಚೇರಿ, ಸುರತ್ಕಲ್‌ ವಲಯ ಕಚೇರಿಗಳಲ್ಲಿ “ದೇಶ ಭಕ್ತಿಯೊಂದಿಗೆ ಸೆಲ್ಫಿ’ ಎಂಬ ಪರಿಕಲ್ಪನೆಯ ಬೂತ್‌ಗಳನ್ನು ತೆರೆಯಲಾಗುತ್ತದೆ. ಸಿಟಿ ಸೆಂಟರ್‌, ಫಾರಂ ಮಾಲ್‌ನಲ್ಲಿಯೂ ಇದು ಜಾರಿಯಾಗಲಿದೆ. ಇಲ್ಲಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಲು ಅವಕಾಶವಿದೆ. ಸಾರ್ವಜನಿಕರು ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಬಗ್ಗೆ ಜಾಗೃತಿ ನೀಡುವುದು ಈ ಬೂತ್‌ನ ಉದ್ದೇಶ.

Advertisement

ಕಂಗೊಳಿಸಲಿದೆ ಕ್ಲಾಕ್‌ಟವರ್‌, ಸರ್ಕಲ್‌ಗ‌ಳು ಮಂಗಳೂರಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವೈವಿಧ್ಯ ಮಯ, ವರ್ಣರಂಜಿತವಾಗಿ ಆಚರಿಸಿ ಸ್ಮರಣೀಯವಾಗಿರಿಸಲು ನಗರದ ಪ್ರಮುಖ ವೃತ್ತಗಳನ್ನು ಅಲಂಕರಿಸಲಾಗುತ್ತದೆ. ಮಹಾನಗರ ಪಾಲಿಕೆ, ಸುರತ್ಕಲ್‌ ವಲಯ ಕಚೇರಿ, ಪುರಭವನ, ಈಜುಕೊಳ ಸಹಿತ ಪ್ರಮುಖ ಕಟ್ಟಡಗಳು ಬೆಳಕಿನಿಂದ ಶೃಂಗಾರವಾಗಲಿದೆ. ಉಳಿದಂತೆ ಲಾಲ್‌ಬಾಗ್‌ ವೃತ್ತ, ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಗೋವಿಂದ ಪೈ ವೃತ್ತ, ಎ.ಬಿ. ಶೆಟ್ಟಿ ವೃತ್ತ, ಕ್ಲಾಕ್‌ ಟವರ್‌ ವೃತ್ತ, ಮಾರ್ನಮಿಕಟ್ಟೆ ವೃತ್ತ, ಕೋಟಿಚೆನ್ನಯ ವೃತ್ತ ನಂದಿಗುಡ್ಡೆ, ಸಕೀìಟ್‌ ಹೌಸ್‌ ವೃತ್ತ, ಮಲ್ಲಿಕಟ್ಟೆ ವೃತ್ತ, ಬೊಂದೇಲ್‌ ವೃತ್ತ, ಸುರತ್ಕಲ್‌ ವೃತ್ತ, ಜಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿಯ ವೃತ್ತಗಳಿಗೆ ಕೇಸರಿ, ಬಿಳಿ, ಹಸಿರು ವರ್ಣದ ಎಲ್‌.ಇ.ಡಿ. ದೀಪಗಳೊಂದಿಗೆ ಆ. 13ರಿಂದ 15ರ ವರೆಗೆ ವರ್ಣರಂಜಿತ ವಿದ್ಯುತ್‌ ದೀಪಾಲಂಕಾರ ಮಾಡಲು ಪಾಲಿಕೆ ನಿರ್ಧರಿಸಿದೆ.

ಭದ್ರಾ ಡ್ಯಾಂ ಸ್ವರೂಪದಲ್ಲಿ ತುಂಬೆ ಡ್ಯಾಂಗೆ ದೀಪಾಲಂಕಾರ! ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಈ ಬಾರಿ ವರ್ಣರಂಜಿತ ದೀಪಾಲಂಕಾರಕ್ಕೆ ಉದ್ದೇಶಿಸಲಾಗಿದೆ. ತುಂಗಭದ್ರಾ ಡ್ಯಾಂ ಸಹಿತ ಕೆಲವು ಡ್ಯಾಂಗಳಲ್ಲಿ ಮಾಡುವ ದೀಪಾಲಂಕಾರ ಮಾದರಿಯನ್ನು ತುಂಬೆಯಲ್ಲಿ ಬಳಕೆ ಮಾಡಲು ಪಾಲಿಕೆ ನಿರ್ಧರಿಸಿದೆ. ಕೇಸರಿ, ಬಿಳಿ, ಹಸುರು ವರ್ಣದ ಎಲ್‌ಇಡಿ ದೀಪಗಳೊಂದಿಗೆ ಇಲ್ಲಿ ದೀಪಾಲಂಕಾರ ನಡೆಯಲಿದೆ.

ಅಮೃತ ಮಹೋತ್ಸವ; ವಿಶೇಷತೆಗಳು

-ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಪಾಲಿಕೆಯ ಎಲ್ಲ ಅಧಿಕಾರಿಗಳು, ಸಿಬಂದಿ ವರ್ಗದವರಿಂದ ದೇಶಭಕ್ತಿ ಸಾರುವ ಗೀತೆಗಳನ್ನು ಹಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ, ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಂಕಲ್ಪ ಆ. 10ರಂದು ನಡೆಯಲಿದೆ.

-“ಭಾರತದ ಸ್ವಾತಂತ್ರ್ಯ ಹೋರಾಟದ ಯಶಸ್ಸಿನ 75 ವರ್ಷಗಳು’ ಎಂಬ ಪರಿಕಲ್ಪನೆಯಲ್ಲಿ ರಂಗೋಲಿ ಸ್ಪರ್ಧೆ ಆ. 11ರಂದು ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ನಡೆಯಲಿದೆ.

-ಭಾರತೀಯ ಸಂಸ್ಕೃತಿ, ಸಾಧನೆ, ಭವ್ಯ ಇತಿಹಾಸ ಗೌರವಿಸುವ ನಿಟ್ಟಿನಲ್ಲಿ ಪಾಲಿಕೆಯ ಅಧಿಕಾರಿ-ಸಿಬಂದಿ, ವಿದ್ಯಾರ್ಥಿಗಳಿಂದ “ಸಂಭ್ರಮದ ನಡಿಗೆ’ ಆ. 12ರಂದು ನಡೆಯಲಿದೆ. ಪಾಲಿಕೆ ಕೇಂದ್ರ ಕಚೇರಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ -ಮಣ್ಣಗುಡ್ಡೆ ಕೆನರಾ ಶಾಲೆಯಾಗಿ ಕೇಂದ್ರ ಕಚೇರಿವರೆಗೆ.

ನಗರದಲ್ಲಿ ಮಾದರಿ ಸ್ವರೂಪದ ಆಚರಣೆ: ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಅಂಗವಾಗಿ “ಹರ್‌ ಘರ್‌ ತಿರಂಗಾ’ ಕಾರ್ಯಕ್ರಮವನ್ನು ನಗರ ವ್ಯಾಪ್ತಿಯಲ್ಲಿ ಮಾದರಿ ಸ್ವರೂಪದಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ 60 ಸಾವಿರ ರಾಷ್ಟ್ರಧ್ವಜಗಳ ವಿತರಣೆ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. – ಪ್ರೇಮಾನಂದ ಶೆಟ್ಟಿ, ಮೇಯರ್‌, ಮಂಗಳೂರು ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next