Advertisement

ಎಫ್‌ಎಸ್‌ಎಲ್‌ ಸ್ಥಾಪನೆಗೆ ಭರದ ಸಿದ್ಧತೆ

05:33 PM Nov 29, 2021 | Team Udayavani |

ಹುಬ್ಬಳ್ಳಿ: ಅಪರಾಧ ಪ್ರಕರಣಗಳ ತನಿಖೆ ಹಾಗೂ ನ್ಯಾಯದಾನ ತ್ವರಿತಗತಿಯಲ್ಲಿ ನಡೆಯಬೇಕು ಎನ್ನುವ ಕಾರಣಕ್ಕೆ ನಗರದಲ್ಲಿ ಆರಂಭಿಸಲು ಉದ್ದೇಶಿಸಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ಸ್ಥಾಪನೆ ಕಾರ್ಯಗಳು ಭರದಿಂದ ಸಾಗಿದೆ. ಗೋಕುಲ ರಸ್ತೆಯಲ್ಲಿ ವಾಯವ್ಯ  ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಟ್ಟಡ ಸಿದ್ಧಗೊಳ್ಳುತ್ತಿದೆ. ಬೆಂಗಳೂರು ಪ್ರಯೋಗಾಲಯ ಹೊರತು ಪಡಿಸಿದರೆ ಪ್ರಮುಖ ವಿಭಾಗಗಳು ಇಲ್ಲಿ ಕಾರ್ಯನಿರ್ವಹಿಸಲಿವೆ.

Advertisement

ಈಗಾಗಲೇ ಉತ್ತರ ಕರ್ನಾಟಕದ ಬೆಳಗಾವಿ, ಕಲಬುರಗಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು ಇದು ಮೂರನೇಯದ್ದಾಗಿದೆ. ಬಳ್ಳಾರಿಯಲ್ಲೂ ಒಂದು ಪ್ರಯೋಗಾಲಯ ಆರಂಭಕ್ಕೆ ಸಿದ್ಧತೆಗಳು ನಡೆದಿದ್ದು, ಈ ವಲಯಕ್ಕೆ ಮೊದಲ ಕೊಡುಗೆಯಾಗಿದೆ.ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಂಗ್ರಹಿಸಿದ ಸಾಕ್ಷ್ಯದ ವೈಜ್ಞಾನಿಕ ವಿಶ್ಲೇಷಣೆಯ ವರದಿ ಪಡೆಯಲು ಪ್ರಯೋಗಾಲಯದ ಅಗತ್ಯತೆ ಹೆಚ್ಚು.

ಆದರೆ ಈ ಭಾಗದಲ್ಲಿ ಕೇವಲ ಎರಡು ಪ್ರಯೋಗಾಲಯಗಳು ಇರುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ ಸಕಾಲದಲ್ಲಿ ಫೂರೆನ್ಸಿಕ್‌ ವರದಿ ತಲುಪದೆ ತನಿಖೆ ವಿಳಂಬ ಹಾಗೂ ನ್ಯಾಯದಾನಲ್ಲೂ ತಡವಾಗುತ್ತಿದೆ. ಇದಕ್ಕೆ ಬ್ರೇಕ್‌ ಹಾಕಲು ಸರಕಾರ ಇಲ್ಲಿನ ಪ್ರಾದೇಶಿಕ ಮಟ್ಟದ ವಿಧಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣ ಮಾಡುತ್ತಿದ್ದು, ಗೋಕುಲ ರಸ್ತೆಯಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆಗೆ ಸೇರಿದ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಭವನದ ಕಟ್ಟಡವನ್ನು
ಆಯ್ದಕೊಂಡಿದೆ. ಒಂದರಿಂದ ಎರಡು ತಿಂಗಳಲ್ಲಿ ಪ್ರಯೋಗಾಲಯ ಆರಂಭಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ. ಪ್ರಯೋಗಾಲಯಕ್ಕಾಗಿ ಸಾರಿಗೆ ಸಂಸ್ಥೆಯ ಕಟ್ಟಡ ಗುರುತಿಸಿರುವುದು ಸಂಸ್ಥೆಗೆ ಪರ್ಯಾಯ ಆದಾಯ ದೊರಕಿದಂತಾಗಿದೆ.

ಒತ್ತಡ ತಗ್ಗಿಸುವ ಉಪಕ್ರಮ: ಈಗಾಗಲೇ ಬೆಂಗಳೂರಿನಲ್ಲಿ ಸುಸಜ್ಜಿತ ವಿಧಿ ವಿಜ್ಞಾನ ಪ್ರಯೋಗಾಲಯವಿದೆ. ಆದರೆ ರಾಜ್ಯದ ಎಲ್ಲಾ ಕಡೆಗಳಿಂದಲೂ ಪ್ರಮುಖ ಪ್ರಕರಣಗಳ ವೈಜ್ಞಾನಿಕ ವಿಶ್ಲೇಷಣೆಗಾಗಿ ಇಲ್ಲಿಗೆ ಬರುತ್ತಿರುವ ಕಾರಣ ಒತ್ತಡ ಹೆಚ್ಚಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾದೇಶಿಕ ಮಟ್ಟದ ಪ್ರಯೋಗಾಲಯವನ್ನು ಆರಂಭಿಸಲಾಗುತ್ತಿದೆ. ಇದಕ್ಕಾಗಿಯೇ ಈ ಭಾಗದ ಪ್ರಯೋಗಾಲಯದಲ್ಲಿರುವ ವಿಭಾಗಗಳನ್ನು ಹೊರತುಪಡಿಸಿ ಹಾಗೂ ಬೆಂಗಳೂರಿನ
ಪ್ರಯೋಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೈಜ್ಞಾನಿಕ ವಿಶ್ಲೇಷಣೆಗೆ ಬರುತ್ತಿರುವ ಪ್ರಕರಣಗಳನ್ನು ಗುರುತಿಸಿ ಆಯ್ದ ಪ್ರಮುಖ ವಿಭಾಗಗಳನ್ನು ಇಲ್ಲಿ ಆರಂಭಿಸಲಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕ ಸೇರಿದಂತೆ ಇತರೆ ಕೆಲ ಜಿಲ್ಲೆಗಳಿಂದಲೂ ವೈಜ್ಞಾನಿಕ ವಿಶ್ಲೇಷಣೆಗೆ ಪ್ರಕರಣಗಳು ಇಲ್ಲಿಗೆ ಬರಲಿವೆ.

ಇತರೆ ಪ್ರಯೋಗಾಲಯಕ್ಕಿಂತ ವಿಭಿನ್ನ ಹೇಗೆ?
ಉತ್ತರ ಕರ್ನಾಟಕ ಭಾಗದಲ್ಲಿ ಎರಡು ಹಾಗೂ ಹತ್ತಿರದ ದಾವಣಗೆರೆಯಲ್ಲೂ ಒಂದು ವಿಧಿ ವಿಜ್ಞಾನ ಪ್ರಯೋಗಾಲಯವಿದೆ. ಇವುಗಳೊಂದಿಗೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರಯೋಗಾಲಯವಿದ್ದು, ಮಂಗಳೂರು, ಮೈಸೂರಿನಲ್ಲಿ ಪ್ರಾದೇಶಿಕ ಪ್ರಯೋಗಾಲಯಗಳಿವೆ. ಆದರೆ ಹುಬ್ಬಳ್ಳಿಯಲ್ಲಿ ಆರಂಭವಾಗಲಿರುವ ಪ್ರಯೋಗಾಲಯದಲ್ಲಿ ಬೆಂಗಳೂರು ಹೊರತುಪಡಿಸಿ ಇತರೆ ಪ್ರಯೋಗಾಲಯದಲ್ಲಿ ಇರದಿರುವ ವಿಭಾಗಗಳನ್ನು ಆರಂಭಿಸಲಾಗುತ್ತಿದೆ. ಪ್ರಮುಖವಾಗಿ
ಡಿಎನ್‌ಎ, ಕಂಪ್ಯೂಟರ್‌ ಫೂರೆನ್ಸಿಕ್‌, ಮೊಬೈಲ್‌ ಫೂರೆನ್ಸಿಕ್‌, ಆಡಿಯೋ-ವಿಡಿಯೋ ಹಾಗೂ ಫಿಸಿಕ್ಸ್‌ ಐದು ವಿಭಾಗಗಳು ಆರಂಭವಾಗಲಿವೆ. ಸದ್ಯಕ್ಕೆ ಅಧಿಕಾರಿ ಸೇರಿದಂತೆ 8 ಸಿಬ್ಬಂದಿ ನಿಯೋಜಿಸಲಾಗಿದೆ.

Advertisement

ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರೆ ವಿಭಾಗಗಳು ಇಲ್ಲಿ ಆರಂಭವಾಗಲಿವೆ. ಪೊಲೀಸ್‌ ಇಲಾಖೆಯ ಎಲ್ಲಾ ವಲಯಗಳಲ್ಲಿ ಒಂದೊಂದು ಪ್ರಯೋಗಾಲಯವಿದ್ದರೆ ಬೆಳಗಾವಿ ಪಶ್ಚಿಮ ವಲಯದಲ್ಲಿ ಎರಡು ವಿಧಿ ವಿಜ್ಞಾನ ಪ್ರಯೋಗಾಲಯಗಳು ಆಗಲಿದೆ.

ಜಿಲ್ಲೆಗೊಂದು ಲ್ಯಾಬ್‌ ಸ್ಥಾಪನೆ ಗುರಿ
ವಿಧಿ ವಿಜ್ಞಾನ ಪ್ರಯೋಗಾಲಯಗಳ ಕೊರತೆಯಿಂದಾಗಿ ನ್ಯಾಯನ ವಿಳಂಬ ಆಗುತ್ತಿರುವ ಕುರಿತು ಹೈಕೋರ್ಟ್‌ ಈ ಹಿಂದೆ ಸರಕಾರಕ್ಕೆ ಛಾಟಿ ಬೀಸಿತ್ತು. ರಾಜ್ಯದಲ್ಲಿ ಕೇವಲ ಆರು ಪ್ರಯೋಗಾಲಯಗಳ್ದಿ, ಅವುಗಳ ಪೈಕಿ ಕೆಲ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಅಂಶವನ್ನು ಹೈಕೋರ್ಟ್‌ ಗಮನಿಸಿ ಸರಕಾರಕ್ಕೆ ನೋಟಿಸ್‌ ಕೂಡ ಜಾರಿ ಮಾಡಿತ್ತು. ಇದಕ್ಕೆ ಪೂರಕವಾಗಿ ಸರಕಾರ ಅಗತ್ಯಕ್ಕೆ ತಕ್ಕಂತೆ ಪ್ರಯೋಗಾಲಯ
ಆರಂಭಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೊಂದು ಆಯ್ದ ವಿಭಾಗಗಳನ್ನು ಹೊಂದಿದ ಪ್ರಯೋಗಾಲಯ ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next