Advertisement

ಅಕಾಲಿಕ ಮಳೆ ಸಂಕಟ : ನಿಯಮ ತಪ್ಪಿದ ಹವೆ; ಭತ್ತ, ಕಾಫಿ, ಅಡಿಕೆ ಸಹಿತ ಎಲ್ಲ ಬೆಳೆಗೂ ತೊಂದರೆ

01:09 AM Nov 15, 2021 | Team Udayavani |

ಉಡುಪಿ/ಮಂಗಳೂರು : ಶರದೃತು ಆರಂಭವಾಗಿ ದೀಪಾವಳಿ ಕಳೆದರೂ ಮಳೆ ಹಿಂದೆ ಸರಿಯದೆ ಇರುವುದು ಉಡುಪಿ, ದಕ್ಷಿಣ ಕನ್ನಡ ಸಹಿತ ಕರಾವಳಿ, ಮಲೆನಾಡು ಭಾಗದ ರೈತರು-ಕೃಷಿಕರಿಗೆ ಕಣ್ಣೀರು ತರಿಸಿದೆ. ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ 2-3 ದಿನಗಳಿಂದ ಮೋಡ ಕವಿದ ವಾತಾವರಣ, ಭಾರೀ ಮಳೆಯಾಗುತ್ತಿದ್ದು, ಭತ್ತ ಬೇಸಾಯ ಗಾರರು, ಅಡಿಕೆ, ಕರಿಮೆಣಸು, ರಬ್ಬರ್‌ ಕೃಷಿಕರು, ಕಾಫಿ ಬೆಳೆಗಾರರು ಬೆಳೆದ ಬೆಳೆಯ ತುತ್ತು ಬಾಯಿಗೆ ಬಾರದಂತೆ ಆಗಿದೆ.

Advertisement

ರವಿವಾರ ಮುಂಜಾನೆಯಿಂದಲೇ ಕರಾವಳಿಯಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ಬಳಿಕ ಎರಡೂ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆರಂಭವಾಗಿದ್ದು, ಹಲವೆಡೆ ಕೊಯ್ಲು ಆದ ಭತ್ತದ ಬೆಳೆ ಗದ್ದೆಗಳಲ್ಲಿಯೇ ಕೊಳೆಯುವ ಸ್ಥಿತಿಯಲ್ಲಿದೆ. ಕಟಾವಿಗೆ ಸಿದ್ಧವಾದ ಪೈರು ನೆಲಕಚ್ಚಿದೆ. ಅಡಿಕೆ ಒಂದನೇ ಕೊಯ್ಲು ಆಗಿದ್ದು, ಮಳೆಯಿಂದಾಗಿ ಒಣಗಿಸಲು ಸಾಧ್ಯವಾಗದೆ ಕೊಳೆಯುವ ಸ್ಥಿತಿಯಿದೆ. ಹಾಗೆಯೇ ಕಳೆದ ಫೆಬ್ರವರಿ-ಮಾರ್ಚ್‌ನಲ್ಲಿ ಮಳೆ ಯಾಗಿದ್ದರಿಂದ ಮಲೆನಾಡಿನಲ್ಲಿ ಕಾಫಿ ಬೇಗನೆ ಹಣ್ಣಾಗಿದ್ದು, ಅಕಾಲಿಕ ಮಳೆಯಿಂದಾಗಿ ಉದುರಲು ಆರಂಭವಾಗಿದೆ.

ಬಿಸಿಲು, ಚಳಿ, ಮೋಡ ಕವಿದ ವಾತಾವರಣ, ಅಕಾಲಿಕ ಮಳೆಯಿಂದಾಗಿ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಈ ನಡುವೆ ಥಾಯ್ಲಂಡ್‌ ಮತ್ತು ದಕ್ಷಿಣ ಅಂಡಮಾನ್‌ ಸಮುದ್ರದಲ್ಲಿ ಶನಿವಾರ ಮತ್ತೆ ಕಡಿಮೆ ಒತ್ತಡದ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಬಲಗೊಳ್ಳಲಿದೆ. ನ. 18ರಂದು ಅದು ಆಂಧ್ರ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಸದ್ಯದ ಅಕಾಲಿಕ ಮಳೆ, ಮೋಡ ಕವಿದ ವಾತಾವರಣ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆಗಳಿವೆ.

ಇದನ್ನೂ ಓದಿ : ಮತ್ತಷ್ಟು ಉತ್ತಮ ಆಡಳಿತಕ್ಕೆ ಶ್ರೀಕಾರ : ಹಳೇ ಬೇರು, ಹೊಸ ಚಿಗುರಿನ ಪರಿಕಲ್ಪನೆ

Advertisement

Udayavani is now on Telegram. Click here to join our channel and stay updated with the latest news.

Next