ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಕೇವಲ 10 ದಿನಗಳಲ್ಲಿ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಮಹೇಶ್ ಬಾಬು ಎಂಬುವವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ರಾಜಸ್ಥಾನ ಮೂಲದ ಪ್ರೀತಿ ಗೆಹ್ಲೋಟ್ ಅವರು, 2016ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದರು. ತುಮಕೂರಿನಲ್ಲಿ ಪ್ರಭೇಷನರಿ ಮೂರ್ಣಗೊಳಿಸಿದ್ದ ಇವರು, ನಂತರ ಕುಮಟಾದಲ್ಲಿ ಸಹಾಯಕ ಆಯುಕ್ತರಾಗಿ, ಉಡುಪಿಯಲ್ಲಿ ಜಿಪಂ ಸಿಇಒ ಆಗಿ ತಲಾ ಒಂದೊಂದು ವರ್ಷ ಕರ್ತವ್ಯ ನಿರ್ವಹಿಸಿದ್ದರು.
ಕಳೆದ ನ.13 ರಂದು ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದ ಇವರನ್ನು ರಾಜ್ಯ ಸರ್ಕಾರ ಕೇವಲ 10 ದಿನದಲ್ಲಿ ವರ್ಗಾವಣೆ ಮಾಡಿದೆ.
ಇದನ್ನೂ ಓದಿ:ಪ್ರಕೃತಿ ವಿಸ್ಮಯ: ಬೆಳ್ತಂಗಡಿಯಲ್ಲಿ 2 ತಲೆ, 7 ಕಾಲು ಹೊಂದಿದ ಕರುವಿನ ಜನನ !
ತೆರವಾಗಿದ್ದ ಇವರ ಜಾಗಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ (ಕೆಎಎಸ್ ಕಿರಿಯ ಶ್ರೇಣಿ) ಎನ್.ಮಹೇಶ್ ಬಾಬು ಅವರನ್ನು ನಿಯೋಜಿಸಿ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಮಹೇಶ್ ಬಾಬು ಅವರನ್ನು ಬಳ್ಳಾರಿ ಪಾಲಿಕೆಗೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.