Advertisement

ಬಕ್ರೀದ್‌; ಈದ್ಗಾ ಮೈದಾನಗಳಲಿ ಪ್ರಾರ್ಥನೆ ನಿಷೇಧ

09:36 PM Jul 18, 2021 | Team Udayavani |

ಹುಬ್ಬಳ್ಳಿ: ಕೋವಿಡ್‌ ಸೋಂಕು ತಗ್ಗಿದ್ದರೂ 3ನೇ ಅಲೆ ತಡೆಗಟ್ಟುವ ದೃಷ್ಟಿಯಿಂದ ಎಲ್ಲರೂ ಎಚ್ಚರಿಕೆ ವಹಿಸಬೇಕೆಂದು ಉಪವಿಭಾಗಾಧಿಕಾರಿ ಗೋಪಾಲಕೃಷ್ಣ ಹೇಳಿದರು.

Advertisement

ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಶನಿವಾರ ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರ ಜೊತೆ ವಿಡಿಯೋ ಸಂವಾದದ ಮೂಲಕ ಅವರು ಮಾತನಾಡಿದರು. ಬಕ್ರೀದ್‌ ಹಬ್ಬದಂದು ಮಸೀದಿಗಳಲ್ಲಿ ಸ್ಯಾನಿಟೈಸ್‌ ಮಾಡಬೇಕು. ಪ್ರಾರ್ಥನೆ ವೇಳೆ ಪ್ರತಿಯೊಬ್ಬರ ನಡುವೆ ಆರು ಅಡಿ ಸಾಮಾಜಿಕ ಅಂತರ ಇರಬೇಕು. ಹಬ್ಬದಂದು ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಒಂದು ಬಾರಿಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸರದಿಯಂತೆ ಪ್ರಾರ್ಥನೆ ಮಾಡಬಹುದಾಗಿದೆ. ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ.

60 ವಯಸ್ಸು ಮೇಲ್ಪಟ್ಟ ಹಾಗೂ 10 ವರ್ಷದ ಕೆಳಗಿನವರಿಗೆ ಮಸೀದಿಗಳಲ್ಲಿ ಪ್ರಾರ್ಥಿಸಲು ಅವಕಾಶವಿರುವುದಿಲ್ಲ. ಅವರು ಮನೆಯಲ್ಲಿಯೇ ಪ್ರಾರ್ಥಿಸಬೇಕು. ಮಸೀದಿಗೆ ಬರುವ ಮುನ್ನ ದೇಹದ ತಾಪಮಾನ ಪರೀಕ್ಷೆ ಮಾಡಿಸಿರಬೇಕು. ಹಸ್ತಲಾಘವ ಮತ್ತು ಆಲಿಂಗನ ನಿಷೇಧಿಸಲಾಗಿದೆ. ಆಸ್ಪತ್ರೆ, ಶಾಲೆ-ಕಾಲೇಜು ಆವರಣ, ಆಟದ ಮೈದಾನ, ಫುಟ್‌ಪಾತ್‌ ಹಾಗೂ ಉದ್ಯಾನವನದ ಒಳಗಡೆ ಮತ್ತು ಹೊರಗಡೆ ಬಲಿದಾನ ಮಾಡುವುದನ್ನು ನಿಷೇಧಿಸಲಾಗಿದೆ ಎಂದರು. ಕೋವಿಡ್‌ ನಿಯಮಗಳ ಪಾಲನೆ ಜೊತೆಗೆ ಈದ್ಗಾ ಮೈದಾನದಲ್ಲಿ 50 ಜನರಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕೆಂದು ಅಂಜುಮನ್‌ ಸಂಸ್ಥೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ, ಸಾಮೂಹಿಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥಿಸುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸುತ್ತೇನೆ. ಸರ್ಕಾರದ ಆದೇಶ ಪ್ರಕಾರ ರಾಜ್ಯಾದ್ಯಂತ ಈದ್ಗಾ ಮೈದಾನದಲ್ಲಿ ಪಾರ್ಥನೆ ಸಲ್ಲಿಸಲು ಅವಕಾಶವಿಲ್ಲ ಎಂದು ಹೇಳಿದರು. ಶಹರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಅಂಜುಮನ್‌ ಸಂಸ್ಥೆ ಅಧ್ಯಕ್ಷ ಯೂಸಫ್‌ ಸವಣೂರು, ಉಪಾಧ್ಯಕ್ಷ ಅಲ್ತಾಫ್‌ ಕಿತ್ತೂರು ಮೊದಲಾದವರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next