Advertisement

ಪ್ರವೀಣ್‌ ಹಂತಕರಿಗೆ ತೆರೆಮರೆಯಲ್ಲಿ ರಕ್ಷಣೆ ? ಆರು ಜಿಲ್ಲೆಗಳಲ್ಲಿ ಹರಡಿರುವ ಹಂತಕರ ಅಡಗು ತಾಣ

08:03 AM Aug 11, 2022 | Team Udayavani |

ಪುತ್ತೂರು : ಬಿಜೆಪಿ ಜಿಲ್ಲಾ ಮೋರ್ಚಾ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆಯ ಪ್ರಮುಖ ಮೂವರು ಹಂತಕರು ಕಾರ್ಯಾಚರಣೆ ತಂಡದ ಕಣ್ತಪ್ಪಿಸುತ್ತಿದ್ದು ಆರು ಜಿಲ್ಲೆಗಳ ವ್ಯಾಪ್ತಿಯೊಳಗೆ ಓಡಾಟ ನಡೆಸುತ್ತಿರುವ ಸುಳಿವು ದೊರೆತರೂ ಪತ್ತೆ ಕಾರ್ಯ ಮಾತ್ರ ದಿನೇ ದಿನೇ ಕ್ಲಿಷ್ಟವಾಗುತ್ತಿದೆ.

Advertisement

ಬೆಳ್ಳಾರೆ ಆಸುಪಾಸಿನವರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದ್ದು ಸಂಪೂರ್ಣ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅವರು ಆಗಾಗ್ಗೆ ವಾಸಸ್ಥಳ ಬದಲಾಯಿಸುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಂಘಟನೆಯ ಆಶ್ರಯ
ರಾಷ್ಟ್ರಮಟ್ಟದಲ್ಲಿ ಹರಡಿಕೊಂಡಿರುವ ಮತೀಯವಾದಿ ಸಂಘಟನೆಯೊಂದು ಈ ಹಂತಕರಿಗೆ ರಕ್ಷಣೆ ನೀಡುತ್ತಿರುವ ಅನುಮಾನ ವ್ಯಕ್ತವಾಗಿದೆ. ಆಧುನಿಕ ನೆಟ್‌ವರ್ಕ್‌ ಬಳಸಿ ಅವರು ಸುರಕ್ಷಿತ ಸ್ಥಳದತ್ತ ತೆರಳುವಲ್ಲಿ ಹಲವು ಕಾಣದ ಕೈಗಳು ನೆರವು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪ್ರವೀಣ್‌ ಹತ್ಯೆಯ ಹಿಂದೆ ಮತೀಯವಾದ ಅಂಶ ಇರುವುದು ಬಹುತೇಕ ಖಚಿತವಾಗಿದೆ.

ಆರು ಜಿಲ್ಲೆಯೊಳಗೆ ಅಡಗುತಾಣ?
ದ.ಕ., ಉಡುಪಿ ಭಾಗದಲ್ಲಿ ಓಡಾಡು ತ್ತಿದ್ದ ಆರೋಪಿಗಳು ಪೊಲೀಸರ ತನಿಖೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಮೊದಲಾದ ಭಾಗದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಇದೆ. ಅಡಗುತಾಣದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿ ಸ್ಥಳಕ್ಕೆ ತಲುಪುವ ಕೆಲವು ತಾಸುಗಳ ಮೊದಲು ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುವ ಅಂಶವನ್ನು ಕಾರ್ಯಾಚರಣೆ ತಂಡವೇ ದೃಢಪಡಿಸಿದೆ.

ಬೆಳ್ಳಾರೆಯಲ್ಲಿ ಉನ್ನತ ಪೊಲೀಸ್‌ ಅಧಿಕಾರಿಗಳ ಸಭೆ
ಬೆಳ್ಳಾರೆ/ಸುಳ್ಯ : ಪ್ರವೀಣ್‌ ಹತ್ಯೆಗೆ ಸಂಬಂಧಿಸಿ ಮೂವರು ಹಂತಕರನ್ನು ಶೀಘ್ರ ಬಂಧಿಸುವಂತೆ ಕಾರ್ಯಾಚರಣೆ ತಂಡಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆಲೋಕ್‌ ಕುಮಾರ್‌ ತಿಳಿಸಿದರು.

Advertisement

ಬೆಳ್ಳಾರೆಯಲ್ಲಿ ವಿವಿಧ ಜಿಲ್ಲೆಗಳ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಜತೆ ಮಾತನಾಡಿದರು. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಹಾಗೂ ರಾಜ್ಯ ಪೊಲೀಸ್‌ ತಂಡವು ತನಿಖೆ ನಡೆಸುತ್ತಿದೆ. ಕಾರ್ಯಾಚರಣೆ ಕುರಿತಂತೆ ಮಹತ್ವದ ಸಭೆ ನಡೆಸಿದ್ದೇವೆ. ಹಂತಕರನ್ನು ಶೀಘ್ರ ಬಂಧಿಸಲಿದ್ದೇವೆ ಎಂದರು.

ಸಿಇಎನ್‌ (ಸೆನ್‌) ಇನ್ನಷ್ಟು ಚುರುಕು
ಈ ಹಿಂದೆ ಡಿಸಿಐಬಿ ತಂಡದಲ್ಲಿ ಸ್ಥಳೀಯರು ಇದ್ದು ಅಪರಾಧ ಪ್ರಕರಣ ನಡೆದ ವೇಳೆ ಪ್ರಕರಣ ಭೇದಿಸಲು ಸಹಕಾರಿಯಾಗುತ್ತಿತ್ತು. ಆದರೆ ಈಗಿನ ತಂಡದಲ್ಲಿ ಹೊರ ಜಿಲ್ಲೆಯವರು ಇರುವುದರಿಂದ ಅಪರಾಧ ಪ್ರಕರಣ ಭೇದಿಸಲು ತಡವಾಗುತ್ತಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆಲೋಕ್‌, ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಈಗ ಇರುವ ಸಿಇಎನ್‌(ಸೆನ್‌) ಅನ್ನು ಇನ್ನಷ್ಟು ಚುರುಕು ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಾನೂನು ಮತ್ತು ಸುವ್ಯವಸ್ಥೆಗೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೂಕ್ಷ್ಮ ಪ್ರದೇಶ ಎಚ್ಚರಿಕೆಗೆ ಕ್ರಮ
ಪುತ್ತೂರು, ಸುಳ್ಯ, ಬೆಳ್ಳಾರೆ ಜಿಲ್ಲಾ ಕೇಂದ್ರದಿಂದ ದೂರವಿದ್ದು ಇದು ಸೂಕ್ಷ್ಮ ಪ್ರದೇಶವಾಗಿದೆ. ಕೇರಳ ಗಡಿ ಪ್ರದೇಶವು ಹತ್ತಿರದಲ್ಲಿದೆ. ಅರಣ್ಯ ಪ್ರದೇಶವು ಆಗಿರುವುದರಿಂದ ಇಲ್ಲಿ ಬೇರೆಯದ್ದೆ ರೀತಿಯ ಸನ್ನಿವೇಶಗಳಿವೆ. ಇಲ್ಲಿನ ಅಧಿಕಾರಿಗಳು ಸುರಕ್ಷಿತವಾಗಿ ಕೆಲಸ ನಿರ್ವಹಿಸಲು ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದರು.

ಅಧಿಕಾರಿಗಳ ದಂಡು
ಸಭೆಯಲ್ಲಿ ಪೊಲೀಸ್‌ ಅಧಿಕಾರಿಗಳ ದಂಡೇ ಭಾಗವಹಿಸಿತ್ತು. ದ.ಕ., ಹಾಸನ, ಮೈಸೂರು, ಮಡಿಕೇರಿ, ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದ.ಕ. ಎಸ್ಪಿ ಹೃಷಿಕೇಶಿ ಭಗವಾನ್‌ ಸೋನಾವಣೆ ಸೇರಿದಂತೆ ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಆರೋಪಿ ಕಬೀರ್‌ಗೆ ನ್ಯಾಯಾಂಗ ಬಂಧನ
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಸುಳ್ಯ ಜಟ್ಟಿಪಳ್ಳದಿಂದ ಬಂಧಿಸಲಾದ ಆರೋಪಿ ಸಿ.ಎ. ಕಬೀರ್‌ನನ್ನು ಬುಧವಾರ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸುಳ್ಯ ನ್ಯಾಯಾಲಯ ಆಗಸ್ಟ್‌ 12ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next