ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯರಿಗಾಗಿ ರಾಷ್ಟ್ರೀಯ ತನಿಖಾ ದÙ (ಎನ್ಐಎ) ಶೋಧ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಪ್ರಕರಣದ ನಾಲ್ಕು ಮಂದಿ ಸದಸ್ಯರ ಬಗ್ಗೆ ಮಾಹಿತಿ ನೀಡಿದವರಿಗೆ ತನಿಖಾ ದಳ ಲಕ್ಷಾಂತರ ರೂ. ಬಹುಮಾನ ಘೋಷಿಸಿದೆ.
ಸುಳ್ಯ ತಾಲೂಕಿನ ಬಳ್ಳಾರೆ ಗ್ರಾಮದ ಬೂಡು ಮನೆಯ ಮೊಹಮ್ಮದ್ ಮುಸ್ತಫ ಅಲಿಯಾಸ್ ಮುಸ್ತಫ ಪೈಜಾರು (ಪತ್ತೆಗೆ 5 ಲಕ್ಷ ರೂ.), ಕೊಡುಗು ಜಿಲ್ಲೆ ಮಡಿಕೇರಿ ನಗರದ ಗದ್ದಿಗೆ ಮಸೀದಿ ಹಿಂಭಾಗ ನಿವಾಸಿ ಎಂ.ಎಚ್.ತುಫೈಲ್ (5 ಲಕ್ಷ ರೂ.), ಸುಳ್ಯ ನಗರದ ಕಲ್ಲುಮುಟ್ಲು ಮನೆ ಎಂ.ಆರ್. ಉಮ್ಮರ್ ಫಾರೂಕ್ (2 ಲಕ್ಷ ರೂ.) ಮತ್ತು ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ಅಲಿಯಾಸ್ ಪೈಂಟರ್ ಸಿದ್ದಿಕ್ ಅಲಿಯಾಸ್ ಗುಜರಿ ಸಿದ್ದಿಕ್(2 ಲಕ್ಷ ರೂ.) ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ.
ಆರೋಪಿಗಳು ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದು, ನಿರಂತರವಾಗಿ ಶೋಧ ಕಾರ್ಯ ನಡೆಯುತ್ತಿದೆ. ಆದರೂ ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಈ ಆರೋಪಿಗಳ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ದೊಮ್ಮಲೂರಿನ ಸರ್ ಎಂ. ವಿಶ್ವೇಶ್ವರಯ್ಯ ಕೇಂದ್ರಿಯ ಸದನ 8ನೇ ಮಹಡಿಯಲ್ಲಿರುವ ಎನ್ಐಎ ಪೊಲೀಸ್ ಅಧೀಕ್ಷಕರ ಕಚೇರಿಗೆ ಮಾಹಿತಿ ನೀಡಬಹುದು.
ದೂರವಾಣಿ ಸಂಖ್ಯೆ-080-29510900, 8904241100 ಮತ್ತು info.blr.nia@gov.in ಗೆ ಮಾಹಿತಿ ನೀಡಬಹುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.