Advertisement

ಪ್ರವೀಣ್‌ ಹತ್ಯೆ: ಪ್ರಮುಖ ಮೂವರು ಆರೋಪಿಗಳಿಗಾಗಿ ಕಾರ್ಯಾಚರಣೆ; ಎಡಿಜಿಪಿ ಅಲೋಕ್‌ ಕುಮಾರ್‌

02:38 PM Aug 10, 2022 | Team Udayavani |

ಮಂಗಳೂರು: ಬಿಜೆಪಿ ಯುವಮುಖಂಡ ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಜನರನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರು ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಲು ಬೇರೆ ಬೇರೆ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಬುಧವಾರ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಾರಿಯಾದ ಮೂವರು ಆರೋಪಿಗಳ ಫೋಟೋ , ಮನೆ ವಿಳಾಸ, ಮನೆಯವರ ಬಗ್ಗೆ ತಿಳಿದಿದೆ. ಆದರೆ ಆರೋಪಿಗಳನ್ನು ಕೆಲವರು ಸೇರಿ ಬಚ್ಚಿಟ್ಟಿದ್ದಾರೆ.  ಅವರನ್ನು ಯಾವ ರೀತಿ ಪತ್ತೆ ಹಚ್ಚಬೇಕು ಎಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನೆ ನೀಡಿದವರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರ ಮೇಲೂ ಕಾನೂನು ಕ್ರಮ ಕೈಗೊಳ್ಳುತ್ತೇವೆ.  ಯಾರೆಲ್ಲಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರೆಲ್ಲರ ಮೇಲೆ ಕರ್ನಾಟಕ ಪೊಲೀಸ್‌ ಹಾಗೂ ಎನ್‌ಐಎ ಮೂಲಕ ಕ್ರಮ ಜರುಗಿಸುತ್ತೇವೆ. ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ಕೋರ್ಟ್‌ ಮುಖಾಂತರ ವಾರೆಂಟ್‌ ಪಡೆದು ಆರೋಪಿಗಳ ಆಸ್ತಿ ಮುಟ್ಟುಗೋಲು  ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ದಾಖಲೆಗಳ ಆಧಾರದ ಮೇಲೆ ಸಾಕ್ಷಿ ಸಂಗ್ರಹಿಸಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಪಿಎಫ್‌ಐ ಜತೆ ಶಂಕಿತ ನಂಟು ಕಂಡು ಬಂದಿದೆ. ತನಿಖೆ ನಂತರ  ಯಾರಿಗೆಲ್ಲಾ ಪಿಎಫ್‌ಐ ಜತೆ ನಂಟು ಇದೆ ಎನ್ನುವುದನ್ನು ಹೇಳಬಹುದು. ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ:ರಾಜ್ಯದಲ್ಲಿ ಮತ್ತೊಂದು ಅಕ್ರಮ ಬಯಲಿಗೆ: ಪರೀಕ್ಷೆ ವೇಳೆ ಸ್ಮಾರ್ಟ್ ವಾಚ್ ಬಳಸಿದ್ದವ ಸೆರೆ

Advertisement

ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಷನ್‌ 144 ಜಾರಿ ಮಾಡಲಾಗಿದೆ. ಅದರ ಕುರಿತಾಗಿಯೂ ಸಭೆ ನಡೆಸಲಿದ್ದೇವೆ. ಮುಂದೆಯೂ ಕಾನೂನು ಸುವ್ಯವಸ್ಥೆ ಉತ್ತಮ ರೀತಿಯಲ್ಲಿ ಇರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next