Advertisement

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!

12:55 PM Feb 02, 2023 | Team Udayavani |

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ರಾಜಕಾರಣಿಗಳ ಸಿಡಿ ಚರ್ಚೆ ಮತ್ತೆ ಜೋರಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲೂ ಮಹಿಳೆಯರ ಜೊತೆಗಿರುವ ಕೆಲ ರಾಜಕಾರಣಿಗಳ ಮುಖವನ್ನು ಬ್ಲಿರ್‌ ಮಾಡಲಾದ ಪೋಸ್ಟರ್‌ಗಳು ಶೇರ್‌ ಆಗುತ್ತಿದ್ದು, ಶೀಘ್ರದಲ್ಲಿಯೇ ಟ್ರೇಲರ್‌ ಬಿಡುಗಡೆ ಎಂಬ ಸಂದೇಶಗಳು ಕೂಡ ಹರಿದಾಡುತ್ತಿವೆ. ಪ್ರಮುಖ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಅನೇಕರು ಈ ಸಿಡಿಯನ್ನು ಬಿಡುಗಡೆ ಮಾಡುವಂತೆ ಸವಾಲು ಹಾಕುತ್ತಿದ್ದಾರೆ. ಆದರೆ ರಾಜಕೀಯ ಅಂಗಳದಲ್ಲಿ ದಿನದಿಂದ ದಿನಕ್ಕೆ ಸದ್ದು ಮಾಡುತ್ತಿರುವ ಸಿಡಿ ವಿಚಾರ “ನಟ ಭಯಂಕರ’ ಪ್ರಥಮ್‌ಗೆ ತಲೆನೋವು ತಂದಿದೆಯಂತೆ.

Advertisement

ಹೌದು, ಸ್ವತಃ ಪ್ರಥಮ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ಸಿಡಿ ರಾಜಕಾರಣಿಗಳಿಗೆ ಕೈ ಮುಗಿದು “ಇಂಥ ಸಿಡಿ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಿ’ ಎಂದು ಮನವಿ ಮಾಡಿದ್ದಾರೆ.

ಅಷ್ಟಕ್ಕೂ ಪ್ರಥಮ್‌ ಇಂಥದ್ದೊಂದು ಮನವಿ ಮಾಡಿರುವುದಕ್ಕೆ ಬಲವಾದ ಕಾರಣವಿದೆ. ಇದೇ ಫೆ. 3ರಂದು ಪ್ರಥಮ್‌ ನಟಿಸಿ, ನಿರ್ದೇಶಿಸಿರುವ “ನಟ ಭಯಂಕರ’ ಸಿನಿಮಾ ತೆರೆಗೆ ಬರುತ್ತಿದೆ. ಸದ್ಯ “ನಟ ಭಯಂಕರ’ನ ಪ್ರಚಾರ ಕಾರ್ಯದಲ್ಲಿ ಬಿಝಿಯಾಗಿರುವ ಪ್ರಥಮ್‌ ಆ್ಯಂಡ್‌ ಟೀಮ್‌ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಓಡಾಡುತ್ತಿದೆ. ಇನ್ನು ಪ್ರಚಾರದ ವೇಳೆಯಲ್ಲಿ “ನಟ ಭಯಂಕರ’ನಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಪ್ರೇಕ್ಷಕರು ಕೂಡ ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ.

ಇನ್ನೇನು “ನಟ ಭಯಂಕರ’ನಿಗೆ ಒಳ್ಳೆಯ ಒಪನಿಂಗ್‌ ಸಿಗುತ್ತಿದೆ ಎನ್ನುತ್ತಿರುವಾಗಲೇ, ರಾಜಕಾರಣಿಗಳ ರಾಸಲೀಲೆ ಸಿಡಿ ಜನರ ಗಮನ ಬೇರೆ ಹೊರಳುವಂತೆ ಮಾಡುತ್ತಿರುವುದು ಪ್ರಥಮ್‌ ತಲೆಬಿಸಿಗೆ ಕಾರಣವಾಗಿದೆ. ಹೀಗಾಗಿ ಸುದೀರ್ಘ‌ ವಿಡಿಯೋವೊಂದನ್ನು ಮಾಡಿರುವ ಪ್ರಥಮ್‌ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

“ಸೋಶಿಯಲ್‌ ಮೀಡಿಯಾದಲ್ಲಿ ಸ್ಕ್ರೀನ್‌ಶಾಟ್‌ ಒಂದು ಓಡಾಡುತ್ತಿದೆ. ಒಬ್ಬ ರಾಜಕಾರಣಿ ಮತ್ತೂಬ್ಬ ಮಹಿಳೆಯ ಚಿತ್ರವನ್ನು ಮುಖ ಬ್ಲಿರ್‌ ಮಾಡಿ ಹಾಕಿಕೊಳ್ಳಲಾಗಿದೆ. ಇದೊಂಥರ ಆ ಥರ (ನೀಲಿ ಚಿತ್ರ) ವಿಡಿಯೋ ಸಿಡಿ ಹಾಗಿದೆ. ಸದ್ಯಕ್ಕೆ ಸಿಡಿ ಇನ್ನೂ ರಿಲೀಸ್‌ ಮಾಡಿಲ್ಲ ಪ್ರೋಮೋ ಥರಹ ಬರೀ ಸ್ಕ್ರೀನ್‌ ಶಾಟ್‌ ಹಾಕಿಕೊಂಡಿದ್ದಾರೆ. ನಿಮ್ಮಲ್ಲಿ ನನ್ನ ಒಂದು ಮನವಿಯೆಂದರೆ, ದಯವಿಟ್ಟು ನಿಮ್ಮ ಈ ಸಿಡಿ ಬಿಡುಗಡೆ ಕಾರ್ಯಕ್ರಮವನ್ನು ಒಂದು ವಾರ ಪೋಸ್ಟ್‌ಪೋನ್‌ ಮಾಡಿಕೊಳ್ಳಿ. ಫೆ. 3ನೇ ತಾರೀಖು ನನ್ನ ನಟನೆಯ “ನಟ ಭಯಂಕರ’ ಸಿನಿಮಾ ಬರ್ತಾ ಇದೆ. ಯಾಕೆಂದರೆ ಇಂಥಹಾ ಸಿಡಿಗಳು ಬರಬೇಕಾದರೆ ಸುನಾಮಿ ರೀತಿ ಬರುತ್ತೆ, ಮಿಕ್ಕೋರೆಲ್ಲ ನಾವು ಮಂಕ್‌ ಮಾದೇವ ಸ್ವಾಮಿ ಥರ ಆಗಿಬಿಡ್ತೀವಿ. ನಮ್ಮ ಸಿನಿಮಾ ಏನೂ ಸೌಂಡ್‌ ಮಾಡೋಕಾಗಲ್ಲ. ಪ್ರೋಮೋ ಮಾಡಿದ್ದೀವಿ, ಟ್ರೇಲರ್‌ ಮಾಡಿದ್ದೀವಿ. ಅದೆಲ್ಲ ವೇಸ್ಟ್‌ ಆಗಿಬಿಡುತ್ತದೆ. ಸಿಡಿ ಮಾಡಿದವರು ಇಷ್ಟು ದಿನವೇ ತಡೆದುಕೊಂಡಿದ್ದೀರ, ಇನ್ನು ಸ್ವಲ್ಪ ದಿನ ತಡೆದುಕೊಳ್ಳಿ, ಫೆ. 6ಕ್ಕೆ ಬೇಕಾದರೆ ರಿಲೀಸ್‌ ಮಾಡಿಕೊಳ್ಳಿ’ ಎಂದು ಮನವಿ ಮಾಡಿದ್ದಾರೆ ಪ್ರಥಮ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next